ಕೆಪಿಎಸ್ ಸಿ ಎಡವಟ್ಟು: ತನಿಖೆಗೆ ಸರ್ಕಾರದ ಆದೇಶ
ಬೆಂಗಳೂರು, ಸೆಪ್ಟೆಂಬರ್. 20 : ಕೆಪಿಎಸ್ಸಿ ಪ್ರಶ್ನೆ ಪತ್ರಿಕೆ ಅದಲು ಬದಲು ಗೊಂದಲಕ್ಕೆ ಸರ್ಕಾರ ತೆರೆ ಎಳೆದಿದೆ. ಶನಿವಾರ ಪ್ರಮಾದವಾಗಲು ಕಾರಣವೇನು ಎಂಬುದನ್ನು ತನಿಖೆ ಮಾಡಲು ಸರ್ಕಾರ ಆದೇಶ ನೀಡಿದೆ.
ಸೆಪ್ಟೆಂಬರ್ 20 , ಮುಂದಿನ ವಾರ ನಡೆಯಲಿದ್ದ ನೀತಿಶಾಸ್ತ್ರ, ಸಾರ್ವಜನಿಕ ಆಡಳಿತ, ಸಾಮಾನ್ಯ ಅಧ್ಯಯನ, ಸಮಾಜಶಾಸ್ತ್ರ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಶನಿವಾರವೇ ಅಭ್ಯರ್ಥಿಗಳ ಕೈ ಸೇರಿದ್ದು ಅವಾಂತರಕ್ಕೆ ಕಾರಣವಾಗಿತ್ತು. ಧಾರವಾಡದಲ್ಲಿ ಪ್ರಬಂಧ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳಿಗೆ ಮುಂದಿನ ವಾರ ನಡೆಯಬೇಕಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ವಿತರಿಸಿದ್ದು ಸಮಸ್ಯೆಯ ಮೂಲ ಕಾರಣ.

ಬೆಂಗಳೂರಿನಲ್ಲಿ ಮೇಲ್ವಿಚಾರಕರು ಕಣ್ಣು ತಪ್ಪಿನಿಂದ ಮುಂದಿನ ವಾರದ ಪತ್ರಿಕೆಗಳನ್ನು ವಿತರಿಸಿದ್ದರು. ಇದನ್ನು ನಂತರ ಅಭ್ಯರ್ಥಿಗಳು ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ಸೋರಿಕೆಯಾಗಿರುವ ಪತ್ರಿಕೆಗಳ ಬದಲು ಹೊಸ ಪತ್ರಿಕೆ ಸಿದ್ಧಪಡಿಸಲಾಗುವುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ ಮುಖರ್ಜಿ ತಿಳಿಸಿದ್ದಾರೆ. ಮುಂದಿನ ವಾರ ಪರೀಕ್ಷೆ ನಿಗದಿಯಂತೆ ನಡೆಯಲಿದೆ.
ಬೆಂಗಳೂರಿನ 12 ಮತ್ತು ಧಾರವಾಡದ 16 ಕೇಂದ್ರಗಳಲ್ಲಿ ಆವಾಂತರ ಸೃಷ್ಟಿಯಾಗಿತ್ತು. ಮುಂದಿನ ವಾರ ಸೋರಿಕೆಯಾದ ಪ್ರಶ್ನೆ ಪತ್ರಿಕೆಯೇ ವಿತರಣೆಯಾದರೆ ಹೋರಾಟ ನಡೆಸಲಾಗುವುದು ಎಂಬ ಅಭ್ಯರ್ಥಿಗಳು ತಿಳಿಸಿದ್ದಾರೆ. 465 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಗೆ ಕೆಪಿಎಸ್ಸಿ ಪರೀಕ್ಷೆ ನಡೆಯುತ್ತಿದೆ.












Click it and Unblock the Notifications