ವಾಟ್ಸಾಪ್ ಬ್ಯಾನ್ ಮಾಡ್ತೀರಾ? ಮಾಡ್ಕಳ್ಳಿ ನಮಗೇನಂತೆ!
ನೆಗಡಿಯಾದರೆ ಮೂಗನ್ನೇ ಕತ್ತರಿಸಿಕೊಳ್ಳಬೇಕು... ಹೌದು ರಾಜ್ಯ ಸರ್ಕಾರ ಇಂಥದ್ದೇ ಕೆಲಸ ಮಾಡಲು ಮುಂದಾಗಿದೆ. ಪ್ರಶ್ನೆ ಪತ್ರಿಕೆ ಲೀಕ್ ಆಗ್ತಿದೆ ಅಂಥ ವಾಟ್ಸಪ್ ಗೆ ನಿಷೇಧ ಹೇರಲು ಮುಂದಾಗಿದೆ. ಪಿಯುಸಿ ಪರೀಕ್ಷೆ ನಡೆಸುವಲ್ಲಿ ಫೇಲ್ ಆಗಿದ್ದ ರಾಜ್ಯ ಸರ್ಕಾರ ಇದೀಗ ವಾಟ್ಸಪ್ ಮೂಲಕ ಮೆಸೇಜ್ ಪಾಸ್ ಆಗೋದನ್ನು ತಡೆಯಲು ಮುಂದಾಗಿದೆ.
ಸಾಮಾಜಿಕ ತಾಣದಲ್ಲಿ ಈ ಬಗ್ಗೆ ಅಲ್ಲೋಲ, ಕಲ್ಲೋಲ ಎದ್ದಿದ್ದು ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ. "ಸ್ವಾಮಿ ವಾಟ್ಸಪ್ ಮಾತ್ರ ಅಲ್ಲ.. ಹೈಕ್, ಫೇಸ್ ಬುಕ್ ಮೆಸೆಂಜರ್, ವಿ ಚಾಟ್, ಜಿ ಟಾಕ್... ಇನ್ನು ಬಗೆಬಗೆಯ ಅಪ್ಲಿಕೇಶನ್ ಗಳಿದ್ದು ಎಲ್ಲವನ್ನು ಬ್ಯಾನ್ ಮಾಡಬೇಕು ಅಂಥ ಸಲಹೆಯನ್ನು ನೀಡಿದ್ದಾರೆ![ಪ್ರಶ್ನೆ ಪತ್ರಿಕೆ ಸೋರಿಕೆ, ರಾಜ್ಯದಲ್ಲಿ 2 ದಿನ ವಾಟ್ಸಪ್ ಬ್ಯಾನ್?]
ಅಲ್ಲಾ ಸ್ವಾಮಿ, ಮನೆಗೆ ಇಲಿ ಬಂದಿದೆ ಅಂಥ ಮನೆನೆ ಬಿಡಲಿಕ್ಕಾಗುತ್ತಾ? ನೆಗಡಿಯಾಗಿದೆ ಅಂಥ ಮೂಗು ಕತ್ತರಿಸಿಕೊಳ್ಳಲಿಕ್ಕೆ ಆಗುತ್ತಾ? ಯಾವನೋ ವಾಟ್ಸಪ್ ನಲ್ಲಿ ಫೋಟೋ ಕಳಿಸಿದ ಅಂದ ಮಾತ್ರಕ್ಕೆ ವಾಟ್ಸಪ್ ಬ್ಯಾನ್ ಮಾಡ್ತೀರಾ... ಇದು ಮೂರ್ಖ ತನದ ಪರಮಾವಧಿ ಅಲ್ಲದೇ ಮತ್ತೇನು? ಎಂದು ಪ್ರಶ್ನೆಗಳ ಸರಮಾಲೆಯನ್ನೇ ಎಸೆದಿದ್ದಾರೆ.
ಪಿಯು ಮಂಡಳಿ ಬೇಡಿಕೆ
ವಾಟ್ಸಪ್ ಬ್ಯಾನ್ ಮಾಡುವಂತೆ ಪಿಯು ಮಂಡಳಿ ರಾಜ್ಯ ಸರ್ಕಾರಕ್ಕೆ ಬೇಡಿಕೆ ಸಲ್ಲಿಕೆ ಮಾಡಿದ್ದು ರಾಜ್ಯ ಸರ್ಕಾರ ಸಹ ಸಕಾರಾತ್ಮಕವಾಗಿ ಸ್ಪಂದಿಸಿದೆ.
ಅಂತಿಮ ಅಧಿಕಾರ ಯಾರದ್ದು?
ವಾಟ್ಸಪ್ ಬ್ಯಾನ್ ಮಾಡಬೇಕಾದರೆ ಕೇಂದ್ರ ಸರ್ಕಾರದ ಮಾಹಿತಿ-ತಂತ್ರಜ್ಞಾನ ಇಲಾಖೆ ಒಪ್ಪಿಗೆ ನೀಡಬೇಕು. ಆಗ ಮಾತ್ರ ನಿಷೇಧ ಸಾಧ್ಯವಾಗಲಿದೆ.
ರಾಜೀನಾಮೆ ನೀಡುತ್ತೇನೆ
ಇನ್ನೊಮ್ಮೆ ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಘಂಟಾಘೋಷವಾಗಿ ಹೇಳಿದ್ದ ಕಿಮ್ಮನೆ ರತ್ನಾಕರ್ ಈಗ ಏನು ಹೇಳುತ್ತಾರೋ ಗೊತ್ತಿಲ್ಲ. ಆದರೆ ಅವರು ಸಹ ಧ್ವನಿಗೂಡಿಸಿರುವುದು ವಿಶೇಷ.
ವಾಟ್ಸಪ್ ಒಂದೇ ಅಲ್ಲ
ಸ್ವಾಮಿ ವಾಟ್ಸಪ್ ಮಾತ್ರ ಅಲ್ಲ.. ಹೈಕ್, ಫೇಸ್ ಬುಕ್ ಮೆಸೆಂಜರ್, ವಿ ಚಾಟ್, ಜಿ ಟಾಕ್... ಇನ್ನು ತರೆವಾರಿ ಅಪ್ಲಿಕೇಶನ್ ಗಳಿದ್ದು ಎಲ್ಲವನ್ನು ಬ್ಯಾನ್ ಮಾಡಬೇಕು. ಅಂತಿಮವಾಗಿ ಷೇರಿಟ್, ಬ್ಲೂಟುತ್ ಗೂ ಕೊಕ್ಕೆ ಹಾಕಬೇಕು!
ಅಭಿವ್ಯಕ್ತಿ ಸ್ವಾತಂತ್ರ್ಯದ ಕೊಲೆ
ಉಳಿದ ಸಂದರ್ಭ ಅಭಿವ್ಯಕ್ತಿ ಸ್ವಾತಂತ್ರ್ಯ ಬಗ್ಗೆ ಮಾತನಾಡುವ ಸರ್ಕಾರ ಈಗ ಅದರ ಕೊಲೆ ಮಾಡಲು ಮುಂದಾಗಿದೆ. ಪಿಯು ಮಕ್ಕಳ ಪರೀಕ್ಷೆಗೂ ನಮ್ಮ ಮೊಬೈಲ್ ನಂಬರ್ ವಾಟ್ಸಪ್ ಬ್ಯಾನ್ ಗೂ ಯಾಕ್ರಿ ಸಂಬಂಧ ಕಟ್ತೀರಾ ಎಂಬುದು ಕತ್ರಿಗುಪ್ಪೆ ನಿವಾಸಿ ರಂಗನಾಥ್ ಮಾತು.
ಇಡೀ ವರ್ಷ ಬ್ಯಾನ್ ಮಾಡಿ!
'ಇಡೀ ವರ್ಷ ಒಂದೆಲ್ಲಾ ಒಂದು ಪರೀಕ್ಷೆಗಳು ನಡೆಯುತ್ತಲೇ ಇರುತ್ತವೆ. ಪ್ರಶ್ನೆ ಪತ್ರಿಕೆ ಲೀಕ್ ಆಗುತ್ತೆ ಅಂಥ ಆಧುನಿಕ ತಂತ್ರಜ್ಞಾನದ ಲಾಭಗಳನ್ನು ಬ್ಯಾನ್ ಮಾಡಿ' ಎಂದು ವ್ಯಂಗ್ಯವಾಗಿ ಹೇಳುತ್ತಾರೆ ಐಟಿ ಉದ್ಯೋಗಿ ಸೌಮ್ಯ.
ಅಸಮರ್ಥ ಸರ್ಕಾರ
ವಾಟ್ಸಪ್ ಬ್ಯಾನ್ ಎಂಬ ಮಾತು ಸರ್ಕಾರದ ಅಸಮರ್ಥ ಸ್ಥಿತಿಯನ್ನು ತಿಳಿಸುತ್ತಿದೆ ವಿನಃ ಬೇರೆ ಏನೂ ಅಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆಗೆ ವಾಟ್ಸಪ್ ಒಂದು ಕಾರಣವಾಗಿರಬಹುದು ಬಿಟ್ಟರೆ ಅದೇ ಕಾರಣವಲ್ಲ.
ಬಸ್ ಬ್ಯಾನ್
ಹಿಂದೊಮ್ಮೆ ಜಿಮ್ ಸಮಾವೇಶದ ವೇಳೆ ಕೆಎಸ್ ಆರ್ ಟಿಸಿ ಬಸ್ ಗಳ ನಗರ ಪ್ರವೇಶ ನಿಷೇಧ ಮಾಡಿ ಜನರಿಂದ ಚೆನ್ನಾಗಿ ಉಗಿಸಿಕೊಂಡಿದ್ದ ಸರ್ಕಾರ ಈಗ ಮತ್ತೊಂದು ವೇದಿಕೆಯನ್ನು ತಾನೇ ಸಿದ್ಧ ಮಾಡಿಕೊಳ್ಳುತ್ತಿದೆ.