ಸಿದ್ದರಾಮಯ್ಯ ಸರಕಾರದಲ್ಲಿನ ಭಿನ್ನಮತ: ಮತ್ತೆ ಏನೇನೋ ಸುದ್ದಿ!
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮೂರು ವರ್ಷವಾದರೂ ಮೂಲ ಕಾಂಗ್ರೆಸ್ಸಿಗರು, ವಲಸಿಗರು, ಭಿನ್ನಮತೀಯರ 'ಸಿದ್ದು'ವಿರುದ್ದದ ಹೋರಾಟ ಅತ್ತ ಆರಕ್ಕೇರಲಿಲ್ಲ, ಇತ್ತ ಮೂರಕ್ಕಿಳಿಯಲಿಲ್ಲ.
ಇನ್ನೇನು ಹೈಕಮಾಂಡ್ ಅಂಗಣದಲ್ಲಿ ಸಿಎಂ ವಿರುದ್ದದ ಚಟುವಟಿಕೆ ತಾರಕಕ್ಕೇರಿತು ಅನ್ನುವಷ್ಟರಲ್ಲಿ ಅತೃಪ್ತರು ಪೇಚು ಮುಖ ಹಾಕಿಕೊಂಡು ರೈಲೋ, ವಿಮಾನ ಹತ್ತಿ ಬೆಂಗಳೂರಿಗೆ ವಾಪಸಾದ ಉದಾಹರಣೆಗಳೇ ಹೆಚ್ಚು. (ಮೂಲ ಬಿಜೆಪಿ VS ವಲಸೆ ಬಿಜೆಪಿ)
ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ದವಿಲ್ಲ ಎನ್ನುವುದು ಗೊತ್ತಿರುವ ವಿಚಾರವಾಗಿದ್ದರೂ, ಭಗೀರಥ ಪ್ರಯತ್ನ ನಡೆಸುತ್ತಿರುವ ಇವರಿಗೆಲ್ಲಾ ಸಚಿವ ಸ್ಥಾನದ ವ್ಯಾಮೋಹ ಇನ್ನೆಷ್ಟಿರ ಬೇಡ?
ಸಚಿವ ಸಂಪುಟ ವಿಸ್ತರಣೆಯ ನಂತರ ಒಂದೆರಡು ದಿನದ ಮಟ್ಟಿಗೆ ಹೈಪ್ ಪಡೆದುಕೊಂಡಿದ್ದ ಅತೃಪ್ತರ ನಡೆಗಳು, ನಂತರದ ದಿನಗಳಲ್ಲಿ ತೀವ್ರತೆ ಕಳೆದುಕೊಳ್ಳಲಾರಂಭಿಸಿದರೂ ಕಾಂಗ್ರೆಸ್ಸಿನ ಸದ್ಯದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿರುವುದಂತೂ ನಿಜ.
ಪಕ್ಷದಲ್ಲಿ ಭಿನ್ನಮತವಿಲ್ಲ, ಅಸಮಾಧಾನವಿದೆ ಎನ್ನುವುದನ್ನು ಒಪ್ಪಿಕೊಂಡಿರುವ ಮುಖ್ಯಮಂತ್ರಿಗಳು, ನಾಲ್ವರು ಅತೃಪ್ತರನ್ನು ಹೊರತು ಪಡಿಸಿ, ಮಿಕ್ಕವರ ಜೊತೆ ಮಾತುಕತೆ ನಡೆಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ಸಿನ ಅತೃಪ್ತರ ಇತ್ತೀಚಿನ ಆಗುಹೋಗುಗಳ ನಡುವೆ ಹಿರಿಯ ಕಾಂಗ್ರೆಸ್ ಮುಖಂಡ ಎಸ್ ಎಂ ಕೃಷ್ಣ ಮಂಗಳವಾರ (ಜೂ 28) ಪಕ್ಷಕ್ಕೆ ತೊಂದರೆಯಾಗದಂತೆ ಮುನ್ನುಗ್ಗಿ ಎಂದು ಸೂಕ್ಷ್ಮ ಸಂದೇಶ ರವಾನಿಸಿದ್ದಾರೆ ಎನ್ನುವ ಸುದ್ದಿ ಸದ್ಯ ಹರಿದಾಡುತ್ತಿದೆ. (ಆಂತರಿಕ ಕಚ್ಚಾಟದಿಂದ ಸಿದ್ದು ಸರ್ಕಾರದ ಅವನತಿ)
ಕಾಂಗ್ರೆಸ್ ನಲ್ಲಿನ ಇತ್ತೀಚಿನ ಕೆಲವೊಂದು ಬೆಳವಣಿಗೆಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.
ಸಿದ್ದರಾಮಯ್ಯ ಹೇಳಿಕೆ
ಅಂಬರೀಶ್, ಶ್ರೀನಿವಾಸ್ಪ್ರಸಾದ್, ಖಮರುಲ್ಲಾ ಇಸ್ಲಾಂ, ಬಾಬೂರಾವ್ ಚಿಂಚನಸೂರ್ ಅವರನ್ನು ಹೊರತು ಪಡಿಸಿ ಸಂಪುಟದಿಂದ ಕೈ ಬಿಡಲಾದ ಉಳಿದ ಎಲ್ಲರ ಜೊತೆ ಮಾತುಕತೆ ನಡೆಸಿದ್ದೇನೆ. ಅವರನ್ನೂ ಸಮಾಧಾನ ಪಡಿಸಿದ್ದೇನೆ ಕೂಡಾ. ಮಿಕ್ಕ ನಾಲ್ವರ ಜೊತೆ ನಾನು ನೇರವಾಗಿ ಮಾತುಕತೆ ನಡೆಸದಿದ್ದರೂ, ನಮ್ಮ ಪ್ರತಿನಿಧಿ ಮೂಲಕ ಅವರ ಜೊತೆ ಮಾತುಕತೆ ನಡೆಸಲಾಗಿದೆ - ಸಿದ್ದರಾಮಯ್ಯ.
ಆರ್ ವಿ ದೇಶಪಾಂಡೆ
ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ, ಶ್ರೀನಿವಾಸ್ಪ್ರಸಾದ್ ಅವರನ್ನು ಭೇಟಿ ಮಾಡಿ ಒಂದು ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿದ್ದಾರೆ. ದೇಶಪಾಂಡೆ ಮತ್ತು ಶ್ರೀನಿವಾಸ್ ಪ್ರಸಾದ್ ನಡುವಿನ ಮಾತುಕತೆಯಲ್ಲಿ, ಪಕ್ಷದಲ್ಲಿ ಹಿರಿಯರಿಗೆ ಬೆಲೆ ಸಿಗುತ್ತಿಲ್ಲ ಎಂದು ಇಬ್ಬರೂ ನೋವು ತೋಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಸಿಎಂಗೆ ಹಿರಿಯ ಕಾಂಗ್ರೆಸ್ಸಿಗರ ಸಲಹೆ
ಸಚಿವ ಸ್ಥಾನ ಕಳೆದುಕೊಂಡವರಿಗೂ ನೋವು ಇರುತ್ತೆ, ಹಾಗಾಗಿ ಅವರು ಮಾತನಾಡುತ್ತಾರೆ. ಸದ್ಯಕ್ಕೆ ಎಲ್ಲರೂ ಮೌನವಾಗಿರುವುದು ಒಳ್ಳೆಯದು. ಅವರ ಪಾಡಿಗೆ ಅವರನ್ನು ಬಿಟ್ಟರೆ ಕೆಲ ದಿನಗಳಲ್ಲೇ ಅವರ ಮನಸ್ಸು ತಿಳಿಯಾಗುತ್ತದೆ. ಅನಂತರ ಒಂದೆಡೆ ಸೇರಿ ಮಾತನಾಡಬಹುದು ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಸಲಹೆ ನೀಡಿದ್ದಾರೆ ಎನ್ನುವ ಮಾಹಿತಿಯಿದೆ.
ಖಮರುಲ್, ಮಾಲಕರೆಡ್ಡಿ
ಪಕ್ಷದ ಹಿರಿಯ ಮುಖಂಡ ಖಮರುಲ್ ಇಸ್ಲಾಂ ಮತ್ತು ಮಾಲಕರೆಡ್ಡಿ ಮಂಗಳವಾರ ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸಚಿವ ಸಂಪುಟ ಪುನರಾರಚೆನಯ ಸಂದರ್ಭದಲ್ಲಿ ಸಿಎಂ ನಮ್ಮನ್ನು ಕಡೆಗಣಿಸಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಸಬೇಕೆಂದು ಕೃಷ್ಣ ಅವರಲ್ಲಿ ಇವರಿಬ್ಬರು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಎಸ್ ಎಂ ಕೃಷ್ಣ
ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದು ಬೇಡ. ತಾಳ್ಮೆಯಿಂದ ಇರಿ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ರಂಜಾನ್ ಮುಗಿದ ನಂತರ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡೋಣ ಎಂದು ಕೃಷ್ಣ ಭರವಸೆ ನೀಡಿದ್ದಾರೆಂದು ಖಮರುಲ್ ಇಸ್ಲಾಂ ಹೇಳಿದ್ದಾರೆ.
ಪಕ್ಷಕ್ಕೆ ತೊಂದರೆ ಮಾಡುವುದಿಲ್ಲ
ಮಳೆಗಾಲದ ಅಧಿವೇಶನದ ನಂತರ 25 ಶಾಸಕರೊಂದಿಗೆ ದೆಹಲಿಗೆ ತೆರಳಲಿದ್ದೇವೆ. ಸಭಾಪತಿ ಚುನಾವಣೆಯಲ್ಲೂ ನಾವು ಭಾಗಿಯಾಗಲಿದ್ದೇವೆ. ಪಕ್ಷದ ಇಮೇಜಿಗೆ ಯಾವುದೇ ಧಕ್ಕೆ ಬರದಂತೆ ನೋಡಿಕೊಳ್ಳುತ್ತೇವೆ. ಆದರೆ ನಮ್ಮ ಹೋರಾಟದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಮಾಲಕರೆಡ್ಡಿ, ಖಮರುಲ್ ಇಸ್ಲಾಂ ಹೇಳಿದ್ದಾರೆ.
ಶಕ್ತಿಹೀನವಾಗುತ್ತಿರುವ ಭಿನ್ನಮತೀಯ ಗುಂಪು
ನಾಲ್ವರನ್ನು ಬಿಟ್ಟು ಭಿನ್ನಮತೀಯ ಬಣದಲ್ಲಿ ಗುರುತಿಸಿಕೊಂಡಿದ್ದವರ ಹೋರಾಟ ದಿನದಿಂದ ದಿನಕ್ಕೆ ಶಕ್ತಿ ಕಳೆದುಕೊಳ್ಳುತ್ತಿದೆ. ಬಣದಲ್ಲಿ ಕಾಣಿಸಿಕೊಂಡಿದ್ದ ಹೆಚ್ಚಿನ ಶಾಸಕರು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನದ ಆಮಿಷಕ್ಕೆ ಒಳಗಾಗಿ ಭಿನ್ನಮತೀಯ ಚಟುವಟಿಕೆಯಿಂದ ದೂರ ಉಳಿದಿದ್ದಾರೆ ಎನ್ನುವ ಮಾಹಿತಿಯಿದೆ.