ಪುನೀತ್ ರಾಜ್ಕುಮಾರ್ ವಿಧಿವಶ: ಸೆಹ್ವಾಗ್, ಕುಂಬ್ಳೆ ಸಂತಾಪ
ಬೆಂಗಳೂರು, ಅಕ್ಟೋಬರ್ 29: ಹೃದಯಾಘಾತದಿಂದ ಇಂದು (ಅಕ್ಟೋಬರ್ 29) ಮುಂಜಾನೆ ಆಸ್ಪತ್ರೆಗೆ ದಾಖಲಾಗಿದ್ದ ಪುನೀತ್ ರಾಜ್ಕುಮಾರ್ ಅಲ್ಲಿಯೇ ಮೃತಪಟ್ಟಿದ್ದಾರೆ.
ಅವರಿಗೆ 46 ವರ್ಷ ವಯಸ್ಸಾಗಿತ್ತು. ಈ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಏಕಾಏಕಿ ಪುನೀತ್ ರಾಜ್ಕುಮಾರ್ ಅವರು ಮೃತಪಟ್ಟಿರುವುದು ಸ್ಯಾಂಡಲ್ವುಡ್ ಪಾಲಿಗೆ ನಿಜಕ್ಕೂ ಆಘಾತವಾಗಿದೆ.
ಶುಕ್ರವಾರ ಬೆಳಗ್ಗೆ ಜಿಮ್ನಲ್ಲಿ ವರ್ಕೌಟ್ ಮಾಡುವಾಗ ಪುನೀತ್ ರಾಜ್ಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಯಿತು. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅವರು ಆಸ್ಪತ್ರೆಯಿಂದ ಹೊರಬರಲೆ ಇಲ್ಲ.
ಅವರು ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಸೋಶಿಯಲ್ ಮೀಡಿಯಾ ಮೂಲಕ ಪ್ರಾರ್ಥಿಸಿದ್ದರು. ಆದರೆ, ಈ ಪ್ರಾರ್ಥನೆ ಕೊನೆಗೂ ಇಡೇರಲೇ ಇಲ್ಲ.
ಚಿಕ್ಕ ವಯಸ್ಸಿನಿಂದಲೂ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ಪುನೀತ್ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಫ್ಯಾಮಿಲಿ ಆಡಿಯನ್ಸ್ ಅವರನ್ನು ಹೆಚ್ಚು ಇಷ್ಟಪಡುತ್ತಾರೆ. ಮಕ್ಕಳಿಗೂ ಅಪ್ಪು ಎಂದರೆ ಅಚ್ಚುಮೆಚ್ಚು.
ಅಪ್ಪು ನಿಧನಕ್ಕೆ ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ವೀರೇಂದ್ರ ಸೆಹ್ವಾಗ್ ಸೇರಿ ಹಲವರು ಕಂಬನಿ ಮಿಡಿದಿದ್ದಾರೆ.
ಪುನೀತ್ ರಾಜ್ಕುಮಾರ್ ಅವರ ನಿಧನದಿಂದ ಚಿತ್ರರಂಗವು ರತ್ನವನ್ನು ಕಳೆದುಕೊಂಡಿದೆ. ನಿಜಕ್ಕೂ ಆಘಾತ ಮತ್ತು ತೀವ್ರ ದುಃಖವಾಗಿದೆ. ನಾನು ಭೇಟಿಯಾದ ಅತ್ಯುತ್ತಮರಲ್ಲಿ ಪುನೀತ್ ಕೂಡ ಒಬ್ಬರು. ತುಂಬಾ ವಿನಮ್ರ ವ್ಯಕ್ತಿ, ಬಹುಬೇಗ ಹೊರಟಿದ್ದಾರೆ ಎಂದು ಅನಿಲ್ ಕುಂಬ್ಳೆ ಟ್ವೀಟ್ ಮಾಡಿದ್ದಾರೆ.
Shocked and deeply saddened on the passing of #PuneethRajkumar the film industry has lost a gem. One of the finest human being I’ve met. So vibrant and humble.Gone too soon. Condolences to his family, friends and innumerable fans. 🙏🏽
— Anil Kumble (@anilkumble1074) October 29, 2021
ಪುನೀತ್ ರಾಜ್ಕುಮಾರ್ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು, ಅವರ ನಿಧನದಿಂದ ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.