ಪಿಯುಸಿ ಮೌಲ್ಯ ಮಾಪನ ಬಹಿಷ್ಕಾರ, ದಿನ ಭತ್ಯೆ ಹೆಚ್ಚಳ
ಬೆಂಗಳೂರು, ಏಪ್ರಿಲ್ 05 : ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಗೊಂದಲದ ನಡುವೆಯೇ ಈಗ ಮೌಲ್ಯಮಾಪನ ಬಹಿಷ್ಕಾರದ ಬಿಸಿ ತಟ್ಟಿದೆ. ಇಂದು ನಡೆಯಬೇಕಿದ್ದ ದ್ವಿತೀಯ ಪಿಯುಸಿ ಮೌಲ್ಯ ಮಾಪನ ಸ್ಥಗಿತಗೊಂಡಿದೆ.
ವೇತನ ತಾರತಮ್ಯ ಸರಿಪಡಿಸುವಂತೆ ಒತ್ತಾಯಿಸಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಫ್ರೀಡಂಪಾರ್ಕ್ನಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇಂದು ರಾಜ್ಯದ ನಾನಾ ಜಿಲ್ಲೆಗಳಿಂದ ನೂರಾರು ಉಪನ್ಯಾಸಕರು ನಗರದ ಬೆಂಗಳೂರಿಗೆ ಆಗಮಿಸಿ ಧರಣಿಗೆ ಬೆಂಬಲ ನೀಡಿದ್ದಾರೆ. [ಮೌಲ್ಯಮಾಪನ ಬಹಿಷ್ಕಾರ, ಮುರಿದು ಬಿದ್ದ ಸಂಧಾನ ಸಭೆ]

ಶನಿವಾರದಿಂದ ಉಪನ್ಯಾಸಕರು ಮೌಲ್ಯಮಾಪನದ ಕೋಡಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಅಂದಿನಿಂದಲೇ ಧರಣಿ ಆರಂಭಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿಕ್ಷಣ ಸಚಿವರೊಂದಿಗೆ ನಡೆದ ಮಾತುಕತೆ ವಿಫಲಗೊಂಡಿದ್ದು, ಧರಣಿ ಮುಂದುವರೆದಿದೆ. [ಮೌಲ್ಯ ಮಾಪನ ಬಹಿಷ್ಕಾರ]
ಉಪನ್ಯಾಸಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಅವರು, 'ಮೌಲ್ಯಮಾಪನ ಬಹಿಷ್ಕಾರ ನಿರ್ಧಾರವನ್ನು ಸಂಘದ ಸಭೆಯಲ್ಲಿ ಕೈಗೊಳ್ಳಲಾಗಿದ್ದು, ಯಾವುದೇ ಕಾರಣಕ್ಕೂ ಅದನ್ನು ಹಿಂದಕ್ಕೆ ಪಡೆಯುವುದಿಲ್ಲ. ನಮ್ಮ ಮೇಲೆ ಎಸ್ಮಾ ಸೇರಿದಂತೆ ಯಾವುದೇ ಕಾನೂನು ರೀತಿಯ ಕ್ರಮಕೈಗೊಂಡರೂ ನಿರ್ಧಾರದಿಂದ ವಾಪಸ್ ಪಡೆಯುವುದಿಲ್ಲ' ಎಂದು ಹೇಳಿದ್ದಾರೆ.
ಭತ್ಯೆ, ಸಂಭಾವನೆ ಹೆಚ್ಚಳ : ಮೌಲ್ಯ ಮಾಪನದಲ್ಲಿ ಪಾಲ್ಗೊಳ್ಳುವ ಉಪನ್ಯಾಸಕರ ದಿನಭತ್ಯೆ ಮತ್ತು ಸಂಭಾವನೆಯನ್ನು ಶೇ 30ರಷ್ಟು ಹೆಚ್ಚಿಸಲಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಆಯುಕ್ತ ರಾಮೇಗೌಡ ಅವರು ಮಂಗಳವಾರ ಈ ಕುರಿತು ಆದೇಶ ಹೊರಡಿಸಿದ್ದಾರೆ. ಮೌಲ್ಯ ಮಾಪನದಲ್ಲಿ ಪಾಲ್ಗೊಳ್ಳುವವರಿಗೆ ಮಾತ್ರ ಇದು ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಅಂದಹಾಗೆ ಏ.1ರ ಶುಕ್ರವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಅಧ್ಯಾಪಕರ ಸಂಘದ ಪದಾಧಿಕಾರಿಗಳ ಜೊತೆ ಸಿದ್ದರಾಮಯ್ಯ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ನಡೆಸಿದ ಸಭೆ ವಿಫಲವಾಗಿತ್ತು. ಅಂದೇ ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದರು.












Click it and Unblock the Notifications