ಸುಡು ಬೇಸಿಗೆ; ಹೊರಾಂಗಣ ಸಭೆಗೆ ಮುಂಜಾಗ್ರತಾ ಕ್ರಮಗಳ ಸುತ್ತೋಲೆ
ಬೆಂಗಳೂರು, ಏಪ್ರಿಲ್ 28; ಕರ್ನಾಟಕದಲ್ಲಿ ಬೇಸಿಗೆಯ ಬಿಸಿಲಿನ ತಾಪಕ್ಕೆ ಜನರು ಕಂಗೆಟ್ಟು ಹೋಗಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಆಗಾಗ ಸುರಿಯುತ್ತಿರುವ ಮಳೆ ಜನರಿಗೆ ತಂಪೆಯುತ್ತಿಲ್ಲ. ಇಂತಹ ಸಂದರ್ಭದಲ್ಲಿಯೇ ಕರ್ನಾಟಕ ವಿಧಾನಸಭೆ ಚುನಾವಣೆಯ ಪ್ರಚಾರ ಕಾರ್ಯ ನಡೆಯುತ್ತಿದೆ. ಬಿಸಿಲಿನಲ್ಲಿ ಸಮಾವೇಶ, ಜಾಥಾಗಳು ನಡೆಯುತ್ತಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಆಯುಕ್ತ ರಂದೀಪ್ ಡಿ. ಬೇಸಿಗೆ ಕಾಲದಲ್ಲಿ ಹೊರಾಂಗಣ ಸಭೆಗಳನ್ನು ನಡೆಸುವ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ಬೇಸಿಗೆ ಸಮಯದಲ್ಲಿ ಜನರ ಆರೋಗ್ಯವನ್ನು ಗಮದಲ್ಲಿಟ್ಟುಕೊಂಡು ಈ ಸುತ್ತೋಲೆ ಹೊರಡಿಸಲಾಗಿದೆ. ಇದರಲ್ಲಿ ಮುಂಜಾಗ್ರತಾ ಕ್ರಮಗಳನ್ನು ಸಹ ತಿಳಿಸಲಾಗಿದೆ.

ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಎಲ್ಲಾ ಜಿಲ್ಲೆಗಳ ಜಿಲ್ಲಾ ಶಸ್ತ್ರ ಚಿಕಿತ್ಸಕರು, ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ಮುಖ್ಯ ಆರೋಗ್ಯಾಧಿಕಾರಿಗಳು, ಬಿಬಿಎಂಪಿ, ಬೆಂಗಳೂರು ಸೇರಿದಂತೆ ಹಲವರಿಗೆ ಈ ಸುತ್ತೋಲೆಯನ್ನು ರವಾನೆ ಮಾಡಲಾಗಿದೆ.
ಮುಂಜಾಗ್ರತಾ ಕ್ರಮಗಳು: ಈ ಹಿಂದೆ ಆಯುಕ್ತಾಲಯದ ಸುತ್ತೋಲೆ ದಿನಾಂಕ 6/3/2023 ಅನ್ನು ಉಲ್ಲೇಖಿಸಿ ಈ ಸುತ್ತೋಲೆಯನ್ನು ಹೊರಡಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ಬೇಸಿಗೆಯ ಪ್ರಖರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅತಿಯಾದ ಉಷ್ಣಾಂಶದಿಂದ ಉಂಟಾಗುವ ಅನಾರೋಗ್ಯ ಪರಿಸ್ಥಿತಿಗಳನ್ನು ನಿಭಾಯಿಸಲು ಸುತ್ತೋಲೆಯಲ್ಲಿ ಸಲಹೆಗಳನ್ನು ಈಗಾಗಲೇ ಹೊರಡಿಸಲಾಗಿದೆ.
ಹಿಂದಿನ ಸುತ್ತೋಲೆ ಸಲಹಾ ಪತ್ರದಲ್ಲಿ ತಿಳಿಸಿರುವ ಅಂಶಗಳೊಂದಿಗೆ, ಹೆಚ್ಚುವರಿಯಾಗಿ ಈ ಕೆಳಕಂಡ ಅಂಶಗಳನ್ನು ಸೇರ್ಪಡೆಗೊಳಿಸಲಾಗಿದ್ದು, ಅದರಂತೆ ಕ್ರಮವಹಿಸುವುದು ಅಗತ್ಯವಾಗಿದೆ ಎಂದು ತಿಳಿಸಲಾಗಿದೆ. ಹಲವು ಮುಂಜಾಗ್ರತಾ ಕ್ರಮಗಳನ್ನು ತಿಳಿಸಲಾಗಿದೆ.

ಬಿಸಿಲಿನ ಪ್ರಖರತೆ ಹೆಚ್ಚಿರುವ ಸಮಯದಲ್ಲಿ, ಪ್ರಮುಖವಾಗಿ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಹೊರಾಂಗಣದಲ್ಲಿ ಯಾವುದೇ ಸಭೆಗಳನ್ನು ಆಯೋಜಿಸದಿರುವುದು ಉತ್ತಮ. ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆ ಅವಧಿಯಲ್ಲಿ ಹೊರಾಂಗಣ ಪುದೇಶಗಳಲ್ಲಿ ಸಭೆ/ ಕಾರ್ಯಕ್ರಮಗಳನ್ನು ಆಯೋಜಿಸುವ ಅನಿವಾರ್ಯತೆ ಇದ್ದಲ್ಲಿ ಈ ಕೆಳಕಂಡ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಲಾಗಿದೆ.
ಸಭೆಯಲ್ಲಿ ಭಾಗವಹಿಸುವ ಸಭಿಕರಿಗೆ ಬಿಸಿಲಿನಿಂದ ರಕ್ಷಣೆ ನೀಡಲು ಅಗತ್ಯ ಶಾಮಿಯಾನ/ ಪೆಂಡಾಲ್ ವ್ಯವಸ್ಥೆ ಮಾಡುವುದು. ಉತ್ತಮ ಗಾಳಿಯ (Air-circulation) ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವುದು. ಸಭಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡುವುದು ಎಂದು ವಿವರಣೆ ನೀಡಲಾಗಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಮೇಲ್ಕಂಡ ಅಂಶಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ.
ಆರೋಗ್ಯ ರಕ್ಷಣೆಗೆ ಸಲಹೆಗಳು; ಬಿಸಿಲಿನ ತೀವ್ರತೆ ಹಿನ್ನಲೆಯಲ್ಲಿ ಜನರು ಆರೋಗ್ಯದ ಬಗ್ಗೆ ಕಾಳಜ ವಹಿಸಬೇಕು ಎಂದು ಕರೆ ನೀಡಲಾಗಿದೆ. ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಿದೆ. ಬೇಸಿಗೆ ಸಮಯದಲ್ಲಿ ಮನೆಯಿಂದ ಹೊರಗಡೆ ಹೋಗುವಾಗ ಜೊತೆಯಲ್ಲಿ ತಪ್ಪದೇ ಶುದ್ಧ ಕುಡಿಯುವ ನೀರನ್ನು ಹಾಗೂ ಛತ್ರಿ ತೆಗೆದುಕೊಂಡು ಹೋಗಬೇಕು. ಬಿಸಿಲಿನಲ್ಲಿ ಜಮೀನಿನ ಕೆಲಸ, ರಸ್ತೆ ಕಾಮಗಾರಿ ಮುಂತಾದ ಹೊರಾಂಗಣ ಕಾರ್ಯನಿರ್ವಹಿಸುವವರು ಆದಷ್ಟು ಬೆಳಗ್ಗೆ 11 ಗಂಟೆಯ ಒಳಗೆ ಮತ್ತು ಸಂಜೆ 4 ಗಂಟೆ ನಂತರ ಕೈಗೊಳ್ಳುವುದು ಉತ್ತಮ ಎಂದು ಸಲಹೆ ನೀಡಲಾಗಿದೆ.
ಬೇಸಿಗೆಯಲ್ಲಿ ಸಡಿಲವಾದ ತೆಳು ಬಣ್ಣದ ಹತ್ತಿ ಬಟ್ಟೆಯನ್ನು ಧರಿಸಬೇಕು. ಕೈಗೆ ಸಿಗುವಂತೆ ಶುದ್ಧ ಕುಡಿಯುವ ನೀರನ್ನು ಇಟ್ಟಕೊಳ್ಳಬೇಕು. ಆಗಾಗ್ಗೆ ನಿಧಾನವಾಗಿ ಧಾರಾಳವಾಗಿ ಉಪ್ಪು, ಸಕ್ಕರೆ ಮಿಶ್ರಿತ ನೀರನ್ನು ಕುಡಿಯಿರಿ ಮತ್ತು ಹಣ್ಣಿನ ರಸ ಅಥವಾ ಪಾನಕಗಳನ್ನು ಕುಡಿಯಿರಿ. ಹತ್ತಿಯ ನುಣುಪಾದ ಬಟ್ಟೆ ಅಥವಾ ಟಿಶ್ಯು, ಕರವಸ್ತ್ರದಿಂದ ಬೆವರನ್ನು ಒರೆಸಿರಿ ಎಂದು ತಿಳಿಸಲಾಗಿದೆ. ನೀರು, ಮಜ್ಜಿಗೆ ಅಥವಾ ಎಳೆನೀರು ಕುಡಿಯಬಹುದು. ಬೆಚ್ಚಗಿನ, ಮಸಾಲೆ ರಹಿತ ಶುದ್ಧ ಸಾತ್ವಿಕ ಆಹಾರ ಸೇವಿಸಿರಿ. ಗಾಳಿಯಾಡುವಂತಿರುವ ಪಾದರಕ್ಷೆಗಳನ್ನು ಧರಿಸಲು ಸಲಹೆ ಕೊಡಲಾಗಿದೆ.
ಬಿಸಿಲಿನಲ್ಲಿ ಯಾವುದೇ ವ್ಯಕ್ತಿ ತೊದಲು ಮಾತು ಅಥವಾ ಅರ್ಥ ರಹಿತವಾಗಿ ಬಡಬಡಿಸಿದಲ್ಲಿ ಕೂಡಲೇ ಅವರನ್ನು ನೆರಳಿನ ಸ್ಥಳಕ್ಕೆ ಸ್ಥಳಾಂತರಿಸಿ, ಕೆಳಗೆ ಮಲಗಿಸಿ ಕಾಲುಗಳನ್ನು ಮೇಲಕ್ಕೆ ಎತ್ತಿ ವಿಶ್ರಾಂತಿ ಪಡೆಯುವಂತೆ ಮಾಡಬೇಕು. ಚರ್ಮ ಕೆಂಪಾದರೆ ಬೆವರು ಕಡಿಮೆ ಆದರೆ, ದೇಹದ ಉಷ್ಣತೆ ಜಾಸ್ತಿಯಾದರೆ ದೀರ್ಘವಾದ ತೀವ್ರ ಉಸಿರಾಟ ಇದ್ದಲ್ಲಿ ತುರ್ತಾಗಿ ಸಮೀಪ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದು ಕರೆ ನೀಡಲಾಗಿದೆ.
ಅತಿ ಬಿಗಿಯಾದ ಸಿಂಥೆಟಿಕ್ ಬಟ್ಟೆಗಳನ್ನು ಧರಿಸಬಾರದು. ಕುಷನ್ ಯುಕ್ತ ಖುರ್ಚಿಯಲ್ಲಿ ಹೆಚ್ಚು ಕುರಬೇಡಿ. ಸೋಡಾ ಇತ್ಯಾದಿ ಕಾರ್ಬೊನೆಟಡ್ ತಂಪು ಪಾನಿಯಗಳನ್ನು ಕುಡಿಯಬೇಡಿ. ಬೆವರನ್ನು ಒರೆಸಲು ಒರಟಾದ ಒಟ್ಟೆಯನ್ನು ಉಪಯೋಗಿಸಬೇಡಿ. ಕಾಫಿ ಅಥವಾ ಟೀ ಸಕ್ಕರೆ ಅಂಶವುಳ್ಳ ಪಾನಿಯಗಳನ್ನು ಅತಿಯಾಗಿ ಸೇವಿಸಬೇಡಿ ಎಂದು ಜನರಿಗೆ ಸಲಹೆ ನೀಡಲಾಗಿದೆ.











Click it and Unblock the Notifications