ಕರುಳ ಕುಡಿ ಪ್ರಶ್ನೆಗೆ ಉತ್ತರಿಸದೇ ಕಣ್ಣೀರು ಹಾಕಿದ ದಿವ್ಯಾ ಹಾಗರಗಿ
ಕಲಬುರಗಿ, ಮೇ. 02: ನಿನ್ನಿಂದಲೇ ಎಲ್ಲಾ ಆಗಿದ್ದು, ನಿನ್ನಿಂದ ಅಪ್ಪ ಕೂಡ ಜೈಲಿಗೆ ಹೋಗುವಂತಾಯಿತು. ನಾನು ಎಲ್ಲವನ್ನು ಟಿವಿಯಲ್ಲಿ ನೋಡಿದ್ದೇನೆ..!
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿ ಬಂಧನಕ್ಕೆ ಒಳಗಾಗಿರುವ ದಿವ್ಯಾ ಹಾಗರಗಿಗೆ ಒಂದೆಡೆ ಸಿಐಡಿ ಅಧಿಕಾರಿಗಳಿಗೆ ಉತ್ತರಿಸಲಾಗದೇ ಸ್ಥಿತಿ. ಇನ್ನೊಂದೆಡೆ ಕರುಳ ಕುಡಿಗೆ ಉತ್ತರ ಕೊಡಲಾಗದೇ ಸಂಕಟ. ಇಂತಹ ಸಂಕಟದಲ್ಲಿ ದಿವ್ಯಾ ಹಾಗರಗಿ ಕಣ್ಣೀರು ಹಾಕಿದ ಘಟನೆ ನಡೆದಿದೆ.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಕಲಬುರಗಿ ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿಯನ್ನು ನೋಡಲು ಇಬ್ಬರು ಮಕ್ಕಳು ಸಿಐಡಿ ಕಚೇರಿಗೆ ಬಂದಿದ್ದರು. ಮಕ್ಕಳನ್ನು ನೋಡಿ ದಿವ್ಯಾ ಕಣ್ಣೀರು ಹಾಕಿದ್ದರು.

ಇಬ್ಬರು ಮಕ್ಕಳು ಸಿಐಡಿ ಕಚೇರಿ ಹೊಸ್ತಿನಲ್ಲಿ ಇರುವುದನ್ನು ಕಂಡು ದಿವ್ಯಾ ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಇದೇ ವೇಳೆ ಆಕೆಯ ಮಗ ಕೇಳಿದ ಪ್ರಶ್ನೆ ಆಕೆಯ ಕತ್ತು ಹಿಸುಕಿದಂತಾಗಿತ್ತು. ನಿನ್ನಿಂದಲೇ ಎಲ್ಲಾ ಆಗಿದ್ದು, ನಿನ್ನಿಂದ ಅಪ್ಪ ಕೂಡಾ ಜೈಲಿಗೆ ಹೋಗುವಂತಾಯಿತು. ಎಲ್ಲವನ್ನು ನಾನು ಟಿವಿಯಲ್ಲಿ ನೋಡಿದ್ದೇನೆ ಎನ್ನುತ್ತಿದ್ದಂತೆ ದಿವ್ಯಾ ಕಣ್ಣೀರು ಹಾಕಿದರು. ಅಮ್ಮ ಅಳುವುದನ್ನು ನೋಡಿ ಮಕ್ಕಳು ಕೂಡ ಕಣ್ಣೀರು ಹಾಕಿದರು.

ತೀವ್ರ ಗೊಳಿಸಿದ ವಿಚಾರಣೆ:
ಇನ್ನು ಪಿಎಸ್ಐ ಅಕ್ರಮಕ್ಕೆ ಸಂಬಂಧಿಸಿದಂತೆ ದಿವ್ಯಾ ಹಾಗರಗಿ ಹಾಗೂ ಮಂಜುನಾಥ್ ಮೇಳಕುಂದಿಯನ್ನು ಸಿಐಡಿ ಅಧಿಕಾರಿಗಳು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಜ್ಞಾನ ಜ್ಯೋತಿ ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ್ ಶರಣಾಗಿದ್ದು, ಅತನನ್ನು ಸಹ ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ. ಸಂಜೆಯೊಳಗೆ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಪೊಲೀಸರ ವಶಕ್ಕೆ ಪಡೆಯಲಿದ್ದಾರೆ.

ಪ್ರಶ್ನೆ ಪತ್ರಿಕೆ ಲೀಕ್ :
ಕಲಬುರಗಿ ಭಾಗದಲ್ಲಿ ನಡೆದಿರುವ ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಮುಖ ಅರೋಪಿಗಳು ಬಹುತೇಕ ಬಂಧನಕ್ಕೆ ಒಳಗಾಗಿದ್ದಾರೆ. ಇವರನ್ನು ವಿಚಾರಣೆಗೆ ಒಳಪಡಿಸಿದ್ದು, ಅಕ್ರಮಕ್ಕೆ ಮೂಲ ಕಾರಣವಾಗಿರುವುದು ಪಿಎಸ್ಐ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಪರೀಕ್ಷೆಗೂ ಮುನ್ನ ಸಿಕ್ಕಿರುವ ಬಗ್ಗೆ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಶ್ನೆ ಪತ್ರಿಕೆ ಲೀಕ್ ಮಾಡುವಲ್ಲಿ ಇಲಾಖೆಯ ಯಾರು ಶಾಮೀಲಾಗಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.












Click it and Unblock the Notifications