ಪಿಎಸ್ಐ ನೇಮಕಾತಿ ಅಕ್ರಮ: ದಿವ್ಯಾ ಹಾಗರಗಿ ಬಂಧನವಾಯ್ತು ಮುಂದೇನು?
ಬೆಂಗಳೂರು, ಏಪ್ರಿಲ್ 29: ದಿವ್ಯಾ ಹಾಗರಗಿ ಕರ್ನಾಟಕ ಪಿಎಸ್ಐ ನೇಮಾಕಾತಿ ಅಕ್ರಮದ ಕಿಂಗ್ ಪಿನ್ಗಳಲ್ಲಿ ಒಬ್ಬರು. ಕಳೆದ 18 ದಿನಗಳಿಂದ ದಿವ್ಯಾ ಹಾಗರಗಿಯನ್ನು ಸಿಐಡಿ ಅಧಿಕಾರಿಗಳು ಪಾತಾಳಗರಡಿಯನ್ನು ಹಾಕಿ ಹುಡುಕುತ್ತಿದ್ದರು. ಆದರೀಗ ದಿವ್ಯಾ ಹಾಗರಗಿಯನ್ನು ಸಿಐಡಿ ಅಧಿಕಾರಿಗಳು ಪುಣೆಯಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ. ಸಿಐಡಿ ಎಸ್ಪಿ ರಾಘವೇಂದ್ರ ನೇತೃತ್ವದ ತಂಡ ಈಗಾಗಲೇ ದಿವಾ್ಯಾ ಹಾಗರಗಿಯನ್ನು ಬಂಧಿಸಿ ಪುಣೆಯಿಂದ ಕರೆತರುತ್ತಿದ್ದಾರೆ. ಕಲ್ಬುರ್ಗಿಗೆ ದಿವ್ಯಾ ಹಾಗರಗಿಯನ್ನು ಕರೆತರಲಿದ್ದಾರೆ.
ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡವು ದಿವ್ಯಾ ಹಾಗರಗಿ ಅನ್ನು ಬಂಧಿಸಿದ್ದು, ಶುಕ್ರವಾರ 10 ಗಂಟೆ ಸುಮಾರಿಗೆ ಪುಣೆಯಿಂದ ಕಲಬುರಗಿಗೆ ಅವರನ್ನು ಕರೆದುಕೊಂಡು ಬರಲಾಗುವುದು ಎಂದು ಸಿಐಡಿ ಪೊಲೀಸ್ ಮೂಲಗಳು ತಿಳಿಸಿವೆ. ದಿವ್ಯಾ ಹಾಗರಗಿಯವರ ಜ್ಞಾನಜ್ಯೋತಿ ಶಾಲೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ತನಿಖೆ ವೇಳೆ ಗೊತ್ತಾಗಿತ್ತು. ಅಂದಿನಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
Breaking; ದಿವ್ಯಾ ಹಾಗರಗಿ ಬಂಧನ; ಗೃಹ ಸಚಿವರ ಹೇಳಿಕೆ
ದಿವ್ಯಾ ಹಾಗರಗಿ ಬಂಧನವಾಯ್ತು ಮುಂದೇನು..?
ದಿವ್ಯಾ ಹಾಗರಗಿ 18 ದಿನಗಳಿಂದ ತಲೆ ಮರೆಸಿಕೊಂಡದ್ದರು. ಈಕೆಯನ್ನು ಪುಣೆಯಲ್ಲಿ ಬಂಧಿಸಿರುವ ಸಿಐಡಿ ಅಧಿಕಾರಿಗಳು ಮೊದಲು ಕಲಬುರ್ಗಿಗೆ ಕರೆತರಲಿದ್ದಾರೆ. ಈಗಾಗಲೇ ಕಲ್ಬುರ್ಗಿಯ ನ್ಯಾಯಾಲಯವು ದಿವ್ಯಾ ಹಾಗರಗಿ ಸೇರಿದಂತೆ ಇತರರ ಬಂಧನಕ್ಕೆ ಅರೆಸ್ಟ್ ವಾರೆಂಟ್ ನೀಡಿದೆ. ಇದೀಗ ದಿವ್ಯಾ ಅರೆಸ್ಟ್ ಆಗಿರುವ ಹಿನ್ನೆಲೆಯಲ್ಲಿ ದಿವ್ಯಾರನ್ನು ಕಲ್ಬುರ್ಗಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ ಸಿಐಡಿ ಅಧಿಕಾರಿಗಳು.
ವಿಚಾರಣೆಗಾಗಿ 14 ದಿನ ಕಸ್ಟಡಿಗೆ ಕೇಳಲಿರುವ ಸಿಐಡಿ
ದಿವ್ಯಾ ಹಾಗರಗಿ ಕರ್ನಾಟಕ ಪಿಎಸ್ಐ ನೇಮಾಕಾತಿ ಅಕ್ರಮದ ಪ್ರಮುಖ ಆರೋಪಿ. ದಿವ್ಯಾ ಹಾಗರಗಿ ವಿಚಾರಣೆಯಿಂದ ಮಹತ್ವದ ಮಾಹಿತಿ ಹೊರ ಬೀಳುವ ಸಾಧ್ಯತೆಗಳಿವೆ. ಹೀಗಾಗಿ ದಿವ್ಯಾ ಹಾಗರಗಿನ್ನು ಬೆಂಗಳೂರಿನಲ್ಲಿರುವ ಸಿಐಡಿ ಕಚೇರಿಗೆ ಕರೆತಂದು ವಿಚಾರಣೆಯನ್ನು ನಡೆಸಬೇಕಾಗಿದೆ. ಇದರಿಂದಾಗಿ ಕಲ್ಬುರ್ಗಿಯ ನ್ಯಾಯಾಲಯಕ್ಕೆ ದಿವ್ಯಾ ಹಾಗರಗಿಯನ್ನು ಹಾಜರು ಪಡಿಸಿ 14ದಿನ ಪೊಲೀಸ್ ಕಸ್ಟಡಿಗೆ ಕೇಳಿ ಪಡೆಯುವ ಸಾಧ್ಯತೆಗಳಿವೆ.
ದಿವ್ಯಾ ಹಾಗರಗಿ ಬಂಧನ ಯಾಕೆ ಪ್ರಮುಖವಾಗಿತ್ತು?
ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪಿಎಸ್ಐ ಪರೀಕ್ಷೆ ಅಕ್ರಮ ನಡೆದಿತ್ತು. ಅಕ್ರಮ ಬಯಲಿಗೆ ಬಂದ ಬಳಿಕ ದಿವ್ಯಾ ಹಾಗರಗಿಯನ್ನು ಸಿಐಡಿ ಅಧಿಕಾರಿಗಳು ಹುಡುಕುತ್ತಿದ್ದರು. ದಿವ್ಯಾರ ಮನೆಯ ಮೇಲೆ ದಾಳಿ ಮಾಡಿ ಹುಡುಕಾಟ ನಡೆಸಿದಾಗಲೂ ಆಕೆ ಪತ್ತೆಯಾಗಿರಲಿಲ್ಲ. ತನಿಖೆಯ ವೇಳೆ ಅಸಹಕಾರ ತೋರಿದ ದಿವ್ಯಾರ ಪತಿ ರಾಜೇಶ್ ಹಾಗರಗಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ದಿವ್ಯಾರ ಶಾಲೆಯಲ್ಲಿಯೇ ಅಕ್ರಮ ನಡೆದಿದ್ದ ಹಿನ್ನೆಲೆಯಲ್ಲಿ ದಿವ್ಯಾ ಹಾಗರಗಿ ಬಂಧನ ಮತ್ತು ವಿಚಾರಣೆ ಬಹಳ ಪ್ರಮುಖವಾಗಿತ್ತು.
ಬಿಜೆಪಿ ಕಾಂಗ್ರೆಸ್ ಟ್ವೀಟ್ ಯುದ್ದ ಮಾಡಿದ್ದೇಕೆ?
ಕಲಬುರ್ಗಿ ಜಿಲ್ಲೆಯಲ್ಲಿ ಈಕೆ ಪ್ರಭಾವಿ ಬಿಜೆಪಿ ಮುಖಂಡೆ. ದಿಶಾ ಕಮಿಟಿಯ ಸದಸ್ಯೆ, ರಾಜ್ಯ ನರ್ಸಿಂಗ್ ಬೋರ್ಡ್ ಸದಸ್ಯೆ ಕೂಡಾ ಆಗಿದ್ದಾರೆ. ಈ ಹಿಂದೆ ಕಲಬುರಗಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದರು. ಕಳೆದ ಫೆಬ್ರವರಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡಾ ದಿವ್ಯಾ ಹಾಗರಗಿ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸಿದ್ದರು. ಈ ಫೋಟೋವನ್ನು ಕಾಂಗ್ರೆಸ್ ಬಿಡುಗಡೆ ಮಾಡಿ ಗೃಹಸಚಿವ ಆರಗ ಜ್ಞಾನೇಂದ್ರ ವಿರುದ್ದ ವಾಗ್ಯುದ್ದ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಕರ್ನಾಟಕ ಬಿಜೆಪಿ ದಿವ್ಯಾ ಹಾಗರಗಿ ಜೊತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇರುವ ಫೋಟೋವನ್ನು ಹಾಕಿ ಟ್ವೀಟ್ ಮಾಡಿ ಹಗರಣ ರೂವರಿ ಡಿಶಿ ಎಂದು ಮೂದಲಿಸಿತ್ತು. ಇದೇ ರೀತಿ ಪ್ರಿಯಾಂಕ್ ಖರ್ಗೆ ವಿರುದ್ದವು ಬಿಜೆಪಿ ತಿರುಗಿ ಬಿದ್ದಿತ್ತು. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಗ್ಯುದ್ದಕ್ಕೆ ಕಾರಣವಾಗಿತ್ತು.
ದಿವ್ಯಾ ಹಾಗರಗಿ ಮೇಲಿರುವ ಆರೋಪವೇನು?
ದಿವ್ಯಾ ಹಾಗರಗಿ ಜ್ಯೋತಿ ಇಂಗ್ಲಿಷ್ ಶಾಲೆಯ ಮುಖ್ಯಸ್ಥೆಯಾಗಿದ್ದವರು. ಪಿಎಸ್ಐ ನೇಮಕಾತಿ ಪರೀಕ್ಷೆಯ ಕೇಂದ್ರಗಳಲ್ಲಿ ಈ ಶಾಲೆಯು ಒಂದಾಗಿತ್ತು. ದಿವ್ಯಾ ಹಾಗರಗಿಯೇ ತಮ್ಮ ಸಿಬ್ಬಂದಿ ಮೇಲೆ ಒತ್ತಡ ಹೇರಿದ್ದರು ಎಂಬ ಆರೋಪವೂ ಕೇಳಿ ಬಂದಿತ್ತು. ಪರೀಕ್ಷೆ ಮುಗಿದ ಮೇಲೆ ಒಎಂಆರ್ ಶೀಟ್ನಲ್ಲಿ ಖಾಲಿ ಬಿಟ್ಟಿರೋ ಪ್ರಶ್ನೆಗಳಿಗೆ ಉತ್ತರ ಬರೆಸಿದ್ದಾರೆ ಎನ್ನುವುದು ಇವರ ವಿರುದ್ಧ ಕೇಳಿ ಬಂದಿದ್ದ ಪ್ರಮುಖ ದೂರು. ಇದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ಹತ್ತು ಜನ ಅಭ್ಯರ್ಥಿಗಳು ಪಿಎಸ್ಐ ಆಗಿ ನೇಮಕವಾಗಿದ್ದರು. ಹತ್ತು ಅಭ್ಯರ್ಥಿಗಳು ಅಕ್ರಮವಾಗಿ ಪರೀಕ್ಷೆ ಬರೆದಿರೋ ಆರೋಪವಿದೆ. ಈ ಪೈಕಿ ಈಗಾಗಲೇ ನಾಲ್ವರು ಅಭ್ಯರ್ಥಿಗಳು ಮತ್ತು ಮೂರು ಜನ ಕೊಠಡಿ ಮೇಲ್ವಿಚಾರಕಿಯರನ್ನು ಪೊಲೀಸರು ಬಂಧಿಸಿ ತೀವ್ರವಾದ ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಸಿಐಡಿ ತನಿಖೆಗೆ ಬಂದ ಬಳಿಕ ಅಕ್ರಮದ ಒಳ ಸುಳಿ ಪತ್ತೆ
ಕರ್ನಾಟಕ ಪಿಎಸ್ಐ ನೇಮಕಾತಿ ಪರೀಕ್ಷೆಯು 2021 ರ ಆಗಸ್ಟ್ 3 ರಂದು ರಾಜ್ಯಾದ್ಯಂತ ಪರೀಕ್ಷೆ ನಡೆದಿತ್ತು. 2022ರ ಜನವರಿ 19 ರಂದು ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಕೂಡಾ ಪ್ರಕಟ ಮಾಡಲಾಗಿತ್ತು. ನೇಮಕಾತಿಯಲ್ಲಿ ಅಕ್ರಮ ಎಸಗಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ದೂರು ನೀಡಿದ್ದರು. ದೂರು ಬಂದ ಹಿನ್ನೆಲೆ ಗೃಹ ಇಲಾಖೆಯಿಂದ ತನಿಖೆಯನ್ನು ಸಿಐಡಿಗೆ ನೀಡಿತ್ತು. ಸಿಐಡಿ ಅಧಿಕಾರಿ ಗಳು ಎಲ್ಲಾ ಅಭ್ಯರ್ಥಿಗಳನ್ನು ಕರೆದು ವಿಚಾರಣೆಯನ್ನು ನಡೆಸಿದ್ದರು. ಹಲವರನ್ನು ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಇದೀಗ ದಿವ್ಯಾ ಹಾಗರಗಿ ಮತ್ತು ಸುನಿತಾ ಹಾಗೂ ಅರ್ಚನಾರನ್ನು ಬಂಧಿಸುವಲ್ಲಿ ಎಸ್ ಪಿ ರಾಘವೇಂದ್ರ, ಡಿವೈಎಸ್ ಪಿ ಪ್ರಕಾಶ್ ರಾಥೋಡ್, ಡಿವೈಎಸ್ ಪಿ ಶಂಕರ್ ಗೌಡ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Recommended Video