Breaking; ಪಿಎಸ್ಐ ನೇಮಕಾತಿ ಹಗರಣ, 4ನೇ ಬಾರಿ ಅಮೃತ್ ಪೌಲ್ ವಿಚಾರಣೆ
ಬೆಂಗಳೂರು, ನವೆಂಬರ್ 16; ಪಿಎಸ್ಐ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಮತ್ತೆ ಅಮೃತ್ ಪೌಲ್ ವಿಚಾರಣೆ ನಡೆಸುತ್ತಿದ್ದಾರೆ. ಇದೇ ಹಗರಣದಲ್ಲಿ ಈಗಾಗಲೇ ಇಡಿ ಸಹ ಐಪಿಎಸ್ ಅಧಿಕಾರಿ ಮನೆ ಮೇಲೆ ದಾಳಿ ಮಾಡಿದೆ.
ಬುಧವಾರ ಸಿಐಡಿ ಪೊಲೀಸರು ಅಮೃತ್ ಪೌಲ್ರನ್ನು ಸಿಐಡಿ ಕಚೇರಿಗೆ ಕರೆದುಕೊಂಡು ಬಂದು ವಿಚಾರಣೆ ನಡೆಸುತ್ತಿದ್ದಾರೆ. ಸಿಐಡಿ 4ನೇ ಬಾರಿಗೆ ಅವರ ವಿಚಾರಣೆಯನ್ನು ನಡೆಸುತ್ತಿದೆ. ಪಿಎಸ್ಐ ನೇಮಕಾತಿ ವಿಭಾಗದ ಎಡಿಜಿಪಿಯಾಗಿ ಅಮೃತ್ ಪೌಲ್ ಕೆಲಸ ಮಾಡಿದ್ದರು.
ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಅಮೃತ್ ಪೌಲ್ ಬಂಧನವಾಗಿತ್ತು. ಇದೇ ಪ್ರಕರಣದ ಆರೋಪಿ ಶಾಂತಕುಮಾರ ಮತ್ತು ಅಮೃತ್ ಪೌಲ್ ನಡುವೆ 1.36 ಕೋಟಿ ರೂ. ಹಣದ ವ್ಯವಹಾರ ನಡೆದಿದೆ ಎಂಬುದು ಆರೋಪವಾಗಿದೆ.

ಹಗರಣದಲ್ಲಿ ಹಣದ ವ್ಯವಹಾರ ಕಂಡುಬಂದಿರುವ ಹಿನ್ನಲೆಯಲ್ಲಿ ಜಾರಿ ನಿರ್ದೇಶನಾಲಯ ಸಹ ಪ್ರಕರಣ ದಾಖಲು ಮಾಡಿಕೊಂಡಿದೆ. ಕೆಲವು ದಿನಗಳ ಹಿಂದೆ ಇಡಿ ಅಮೃತ್ ಪೌಲ್, ಶಾಂತಕುಮಾರ ನಿವಾಸ ಸೇರಿದಂತೆ 11 ಕಡೆಗಳಲ್ಲಿ ದಾಳಿ ಮಾಡಿತ್ತು.
ಜುಲೈ 4ರಂದು ಸಿಐಡಿ ಪೊಲೀಸರು ಅಮೃತ್ ಪೌಲ್ ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಉನ್ನತ ಮಟ್ಟದ ಅಧಿಕಾರಿ ಅಮೃತ್ ಪೌಲ್ ಆಗಿದ್ದಾರೆ. ಮೇ 12ರಂದು ಡಿವೈಎಸ್ಪಿ ಶಾಂತಕುಮಾರ ಬಂಧಿಸಲಾಗಿತ್ತು.
ಪಂಜಾಬ್ ಮೂಲದ ಅಮೃತ್ ಪೌಲ್ 1995ನೇ ಬ್ಯಾಚ್ ಐಪಿಎಸ್ ಅಧಿಕಾರಿ. ಪಿಎಸ್ಐ ನೇಮಕಾತಿ ಸಂದರ್ಭದಲ್ಲಿ ಅಮೃತ್ ಪೌಲ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದರು. ಪರೀಕ್ಷೆಯ ಒಎಂಆರ್ ಶೀಟ್ ಕೊಠಡಿ ಕೀ ಅವರ ಬಳಿಯ ಇತ್ತು, ಆಗಲೇ ಶೀಟ್ಗಳನ್ನು ತಿದ್ದಲಾಗಿದೆ ಎಂಬುದು ಆರೋಪವಾಗಿದೆ.
ಸಿಐಡಿ ಪೊಲೀಸರು ಅಮೃತ್ ಪೌಲ್ಗೆ ಸೇರಿದ್ದು ಎನ್ನಲಾದ ಎರಡು ಡೈರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅದರಲ್ಲಿ ಸಹ ಹಲವರ ಹೆಸರುಗಳನ್ನು ಅಧಿಕಾರಿ ಬರೆದಿದ್ದಾರೆ. ಈ ಕುರಿತು ಸಹ ಸಿಐಡಿ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.












Click it and Unblock the Notifications