ಪಿಎಸ್ಐ ಮರು ಪರೀಕ್ಷೆ: ವಿಚಾರಣೆ ಮೇ 18ಕ್ಕೆ ಮುಂದೂಡಿದ ಕೆಎಟಿ
ಬೆಂಗಳೂರು, ಮೇ. 04: ಪಿಎಸ್ಐ ನೇಮಕಾತಿ ಮರು ಪರೀಕ್ಷೆ ಆದೇಶ ರದ್ದುಕೋರಿ ಅಭ್ಯರ್ಥಿಗಳು ಕೆಎಟಿ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಸರ್ಕಾರಕ್ಕೆ ನೋಟಿಸ್ ನೀಡಿದೆ ಮತ್ತು ವಿಚಾರಣೆಯನ್ನು ಮೇ 15ಕ್ಕೆ ಮೂಂದೂಡಿದೆ.
ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರದ ಮರು ಪರೀಕ್ಷೆಯ ಸರ್ಕಾರದ ನಿರ್ಧಾರವನ್ನು ರದ್ದು ಪಡಿಸುವಂತೆ ಕೋರಿ 28 ಪಿಎಸ್ಐ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ಮೊರೆ ಹೋಗಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಸಾಕಷ್ಟು ಅಕ್ರಮ ಕಂಡು ಬಂದ ಹಿನ್ನೆಲೆಯಲ್ಲಿ ಸರ್ಕಾರ ಪಿಎಸ್ಐ ನೇಮಕಾತಿ ಪರೀಕ್ಷೆಯನ್ನು ರದ್ದು ಪಡಿಸಿತ್ತು. ಇದರಿಂದ ಪ್ರಾಮಾಣಿಕವಾಗಿ ಆಯ್ಕೆಯಾಗಿದ್ದ ವಿದ್ಯಾರ್ಥಿಗಳು ಹೋರಾಟ ಕೈಗೊಂಡಿದ್ದರು. ಸ್ವಾತಂತ್ರ್ಯ ಉದ್ಯಾನವನದಲ್ಲಿ ಉಪವಾಸ ಸತ್ಯಾಗ್ರಹ ಮಾಡಿದ್ದರು. ಕಾನೂನು ತಜ್ಞರ ಅಭಿಪ್ರಾಯ ಪಡೆದ ಬಳಿಕ ಬುಧವಾರ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ಮೊರೆ ಹೋಗಿದ್ದಾರೆ.
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಅಕ್ರಮ ಕುರಿತು ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಕ್ರಮದಲ್ಲಿ ಭಾಗಿಯಾಗಿರುವರನ್ನು ಬಂಧಿಸಿ ಕ್ರಮ ಜರುಗಿಸಲಿ. ಆದರೆ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿರುವ ನಮಗೆ ಪರೀಕ್ಷೆ ರದ್ದಾಗಿರುವ ಕಾರಣ ಅನ್ಯಾಯವಾಗಿದೆ. ಸರ್ಕಾರ ಮರು ಪರೀಕ್ಷೆ ಮಾಡುವ ನಿರ್ಧಾರ ಪ್ರಕಟಿಸಿ ನಮಗೆ ಅನ್ಯಾಯ ಮಾಡುತ್ತಿದೆ. ಸರ್ಕಾರದ ಈ ನಿರ್ಧಾರವನ್ನು ರದ್ದು ಪಡಿಸುವಂತೆ ಕೋರಿ ಪಿಎಸ್ಐ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಮೊದಲ ರ್ಯಾಂಕ್ ಅಭ್ಯರ್ಥಿ ನಾಪತ್ತೆ:
ಮಹಿಳಾ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದ ರಚನಾ ಅವರ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ಆಕೆ ನಾಪತ್ತೆಯಾಗಿದ್ದಾರೆ. ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ಮರು ಪರೀಕ್ಷೆ ಸರ್ಕಾರದ ನಿರ್ಧಾರ ವಿರೋಧಿಸಿ ಪಿಎಸ್ಐ ಅಭ್ಯರ್ಥಿಗಳ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹದಲ್ಲಿ ರಚನಾ ಪಾಲ್ಗೊಂಡಿದ್ದರು. ಅವರ ವಿರುದ್ಧ ಎಫ್ಐಆರ್ ಆಗಿರುವ ಸುಳಿವು ಪಡೆಯುತ್ತಿದ್ದಂತೆ ಆಕೆ ನಾಪತ್ತೆಯಾಗಿದ್ದಾರೆ. ಅವರ ಸಹೋದರ ವಿಕ್ರಂ ಕೂಡ ನಾಪತ್ತೆಯಾಗಿದ್ದಾರೆ. ಇಬ್ಬರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಪೋಷಕರು ಕಂಗಾಲಾಗಿದ್ದಾರೆ.

ಇನ್ನು ಮಹಿಳಾ ಅಭ್ಯರ್ಥಿ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವುದು ಸಿಐಡಿ ಪೊಲೀಸರ ತನಿಖೆಯಲ್ಲಿ ಬಯಲಾಗಿತ್ತು. ಅಭ್ಯರ್ಥಿಗಳ ಒಎಂಆರ್ ಶೀಟ್ ಮತ್ತು ಉತ್ತರ ಪತ್ರಿಕೆಗೂ ಭಾರಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ 22 ಪಿಎಸ್ಐ ಅಭ್ಯರ್ಥಿಗಳ ಮೇಲೆ ಸಿಐಡಿ ಪೊಲೀಸರು ನೀಡಿದ ದೂರಿನ ಮೇಲೆ ಹೈಗ್ರೌಂಡ್ಸ್ನಲ್ಲಿ ಎಫ್ಐಆರ್ ಆಗಿತ್ತು. ಅದರಲ್ಲಿ ಈಕೆಯ ಹೆಸರು ಇತ್ತು. ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಈಕೆ ಇದೀಗ ನಾಪತ್ತೆಯಾಗಿದ್ದು, ಆಕೆಯ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.












Click it and Unblock the Notifications