ಪಿಎಸ್ಐ ಅಕ್ರಮದಲ್ಲಿ ಡೀಲ್ ಮಾಡಿ ಜೈಲು ಸೇರಿದ ಬ್ಯಾಡರಹಳ್ಳಿ ಹರೀಶ್
ಬೆಂಗಳೂರು, ಜೂ. 15: ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಡೀಲ್ ಕುದುರಿಸಿದ್ದ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ಇನ್ಸ್ಪೆಕ್ಟರ್ ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
2018ರಲ್ಲಿ ಪಿಎಸ್ಐ ಆಗಿ ನೇಮಕವಾಗಿ ಪೊಲೀಸ್ ಇಲಾಖೆಗೆ ಸೇರಿದ್ದ ಮಾಗಡಿ ಮೂಲದ ಹರೀಶ್, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಸಬ್ಇನ್ಸ್ಪೆಕ್ಟರ್ ಅಗಿ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ನಡೆದ 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಬಂಧಿತನಾಗಿದ್ದ ಪಿಎಸ್ಐ ಅಭ್ಯರ್ಥಿ ನೀಡಿದ ಹೇಳಿಕೆ ಆಧಾರದ ಮೇಲೆ ಪಿಎಸ್ಐ ಹರೀಶ್ ಅವರಿಗೆ ನೋಟಿಸ್ ನೀಡಲಾಗಿತ್ತು. ಎರಡು ಬಾರಿ ನೋಟಿಸ್ ನೀಡಿದ್ದರೂ ಸಿಐಡಿ ವಿಚಾರಣೆಗೆ ಹಾಜರಾಗದೇ ತಪ್ಪಿಸಿಕೊಳ್ಳಲು ಪ್ರಭಾವ ಬೀರಲು ಯತ್ನಿಸಿದ್ದ.
ಮಂಗಳವಾರ ಸಂಜೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ನುಗ್ಗಿದ ಸಿಐಡಿ ಪೊಲೀಸರು, ಪಿಎಸ್ಐ ಹರೀಶ್ ಅವರನ್ನು ಠಾಣೆಯಲ್ಲಿಯೇ ಬಂಧಿಸಿದ್ದಾರೆ. ರಿಸರ್ವ ಸಬ್ಇನ್ಸ್ಪೆಕ್ಟರ್ ಜತೆ ಒಡನಾಟ ಹೊಂದಿದ್ದ ಹರೀಶ್, ಪರಿಚಯಸ್ಥ ಅಭ್ಯರ್ಥಿಯಿಂದ 80 ಲಕ್ಷ ರೂ. ಕೊಡಿಸಿ ಅಕ್ರಮವಾಗಿ ಪಿಎಸ್ಐ ಹುದ್ದೆಗೆ ಆಯ್ಕೆಯಾಗುವಂತೆ ಮಾಡಿದ್ದ. ಇದಕ್ಕೆ ಹರೀಶ್ ಸ್ನೇಹಿತನಿಂದಲೇ ಕಮೀಷನ್ ಪಡೆದಿದ್ದ. ಈ ಬಗ್ಗೆ ಮಾಹಿತಿ ಖಚಿತಪಡಿಸಿಕೊಳ್ಳಲು ನೋಟಿಸ್ ನೀಡಲಾಗಿತ್ತು. ಇದೀಗ ಬಂಧಿಸಿ ಆರೋಪಿಯನ್ನು ಸಿಐಡಿ ವಶಕ್ಕೆ ಪಡೆಯಲಾಗಿದೆ.

ಪಿಎಸ್ಐ ಆಗಿ ಅಯ್ಕೆಯಾಗಿ ಇನ್ನೂ ನಾಲ್ಕು ವರ್ಷ ಆಗಿಲ್ಲ. ಅದಾಗಲೇ ಪಿಎಸ್ಐ ಹುದ್ದೆಯಲ್ಲಿಯೇ ಡೀಲ್ ಕುದುರಿಸಿಲು ಹೋಗಿ ಹರೀಶ್ ತನ್ನ ಭವಿಷ್ಯದ ಮೇಲೆ ಕಲ್ಲು ಹಾಕಿಕೊಂಡಿದ್ದಾರೆ. ಸ್ನೇಹಿತನಿಗೆ ಪಿಎಸ್ಐ ಹುದ್ದೆಯನ್ನು ಅಕ್ರಮವಾಗಿ ಕೊಡಿಸಿ ಹಣ ಪಡೆದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿ ಜೈಲಿಗೆ ಹೋಗುವಂತಾಗಿದೆ.
ಪಿಎಸ್ಐ ತನಿಖೆಗೆ ಮತ್ತಷ್ಟು ಚುರುಕು: ಪಿಎಸ್ಐ ನೇಮಕಾತಿ ಪರಿಕ್ಷೆಯಲ್ಲಿ ಅಕ್ರಮ ಎಸಗಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಜಾಡು ಹಿಡಿದು ಸಿಐಡಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಮತ್ತಷ್ಟು ಅಭ್ಯರ್ಥಿಗಳ ಒಎಂಆರ್ ಶೀಟ್ಗಳನ್ನು ಅನ್ವೇಷಣೆ ನಡೆಸುತ್ತಿದ್ದಾರೆ. ಇದರಲ್ಲಿ ಮತ್ತಷ್ಟು ಅಭ್ಯರ್ಥಿಗಳು ಸಿಕ್ಕಿಬೀಳುವ ಸಾಧ್ಯತೆಯಿದೆ.

ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಬಂಧನಕ್ಕೆ ಒಳಗಾದವರ ಅಮಾನತು: ಇನ್ನು ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ನೇಮಕಾತಿ ವಿಭಾಗದ ಡಿವೈಎಸ್ಪಿ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳು ಬಂಧನಕ್ಕೆ ಒಳಗಾಗಿದ್ದಾರೆ . ಈಗಾಗಲೇ ಬಹುತೇಕರು ಬಂಧನಕ್ಕೆ ಒಳಗಾಗಿ ಅಮಾನತು ಆಗಿದ್ದಾರೆ. ಇವರನ್ನು ಪೊಲೀಸ್ ಇಲಾಖೆ ಮತ್ತೆ ಸೇವೆಯಲ್ಲಿ ಮುಂದುರೆಸುತ್ತಾ ಅಥವಾ ಸೇವೆಯಿಂದ ವಜಾ ಮಾಡಲಾಗುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ.












Click it and Unblock the Notifications