Breaking; ಅಮೃತ್ ಪಾಲ್ ಜಾಮೀನು ತಿರಸ್ಕರಿಸಿದ ಬೆಂಗಳೂರು ಕೋರ್ಟ್
ಬೆಂಗಳೂರು, ನವೆಂಬರ್ 23; ಪಿಎಸ್ಐ ನೇಮಕಾತಿ ಹಗರಣದ ಆರೋಪಿ, ಐಪಿಎಸ್ ಅಧಿಕಾರಿ ಅಮೃತ್ ಪಾಲ್ಗೆ ಜಾಮೀನು ಸಿಕ್ಕಿಲ್ಲ. ಸಿಐಡಿ ನೇಮಕಾತಿ ಹಗರಣದ ತನಿಖೆ ನಡೆಸುತ್ತಿದೆ.
ಬುಧವಾರ ಬೆಂಗಳೂರು ನಗರದ 24ನೇ ಸಿಸಿಎಚ್ ಕೋರ್ಟ್ ಅಮೃತ್ ಪಾಲ್ ಜಾಮೀನು ಅರ್ಜಿ ವಜಾಗೊಳಿಸಿದೆ. ನ್ಯಾಯಾಧೀಶ ಕೆ. ಲಕ್ಷ್ಮೀ ನಾರಾಯಣ್ ಭಟ್ ಈ ಕುರಿತು ಆದೇಶ ಹೊರಡಿಸಿದ್ದಾರೆ.
ಜಾಮೀನು ಅರ್ಜಿಗೆ ಸಿಐಡಿ ಪರವಾಗಿ ವಾದ ಮಂಡನೆ ಮಾಡಿದ ಎಸ್ಪಿಪಿ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಆರೋಪಿಗೆ ಜಾಮೀನು ನೀಡಬಾರದು ಎಂದು ವಾದಿಸಿದರು.

545 ಪಿಎಸ್ಐ ಹುದ್ದೆಗಳ ನೇಮಕಾತಿ ಹಗರಣದಲ್ಲಿ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಆರೋಪಿ. ನೇಮಕಾತಿ ನಡೆಯುವ ಸಂದರ್ಭದಲ್ಲಿ ಅಮೃತ್ ಪಾಲ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದರು.
ಹಗರಣಕ್ಕೆ ಸಂಬಂಧಿಸಿದಂತೆ ಬಂಧನವಾದ ಉನ್ನತ ಶ್ರೇಣಿಯ ಅಧಿಕಾರಿ ಅಮೃತ್ ಪಾಲ್. ಬೆಂಗಳೂರು ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿ ಪಿಎಸ್ಐ ನೇಮಕಾತಿ ಲಿಖಿತ ಪರೀಕ್ಷೆ ವೇಳೆ ಅಕ್ರಮ ನಡೆದಿದೆ ಎಂಬುದು ಆರೋಪ. ಸರ್ಕಾರ ಈ ಹಗರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ.
ಅಮೃತ್ ಪಾಲ್ ಅವರ ಕೈಯಲ್ಲಿಯೇ ಲಿಖಿತ ಪರೀಕ್ಷೆಯ ಉತ್ತರ ಪತ್ರಿಕೆ ಇದ್ದ ಸ್ಟ್ರಾಂಗ್ ರೂಂ ಕೀ ಇತ್ತು. ಅಲ್ಲಿಯೇ ಒಎಂಆರ್ ಶೀಟ್ಗಳನ್ನು ತಿದ್ದುವ ಮೂಲಕ ಅಕ್ರಮ ನಡೆಸಲಾಗಿದೆ ಎಂಬುದು ಆರೋಪವಾಗಿದೆ.
ಈ ಹಗರಣಕ್ಕೆ ಸಂಬಂಧಿಸಿದಂತೆ ನೇಮಕಾತಿ ವಿಭಾಗದ ಡಿವೈಎಸ್ಪಿ ಪಿ. ಶಾಂತಕುಮಾರ್, ಎಫ್ಡಿಎ ಹರ್ಷ. ಕಚೇರಿಯ ಸಿಬ್ಬಂದಿಗಳಾಗಿದ್ದ ಶ್ರೀನಿವಾಸ್, ಶ್ರೀಧರ್ ಸಹ ಬಂಧಿಸಲಾಗಿತ್ತು. ಹಗರಣ ಬೆಳಕಿಗೆ ಬಂದ ಬಳಿಕ ಅಮೃತ್ ಪಾಲ್ ವರ್ಗಾವಣೆ ಮಾಡಲಾಗಿತ್ತು. ಬಳಿಕ ಸಿಐಡಿ ಅವರನ್ನು ಬಂಧಿಸಿದೆ.
ಕಳೆದ ವಾರ 4ನೇ ಬಾರಿಗೆ ಅಮೃತ್ ಪಾಲ್ರನ್ನು ಸಿಐಡಿ ಅಧಿಕಾರಿಗಳು ಜೈಲಿನಿಂದ ಸಿಐಡಿ ಕಚೇರಿಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದರು. ಈ ಹಗರಣದಲ್ಲಿ ಹಣದ ವ್ಯವಹಾರ ನಡೆದಿರುವ ಹಿನ್ನಲೆಯಲ್ಲಿ ಇಡಿ ಸಹ ಪ್ರತ್ಯೇಕ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿದೆ.












Click it and Unblock the Notifications