'ದುಡ್ಡು ಅಮೇಲೆ ಕೊಡ್ತೀನಿ, ಮೊದ್ಲು ತಿರುಪತಿ ಲಡ್ಡು ತಗೋ' - ಶಾಂತಾಬಾಯಿ
ಬೆಂಗಳೂರು, ಮೇ. 04: ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಕಿಂಗ್ಪಿನ್ ಮಂಜುನಾಥ್ ಮೇಳಕುಂದಿ ಮತ್ತು ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಎಸಗಿ ಆಯ್ಕೆಯಾಗಿರುವ ಶಾಂತಾಬಾಯಿ ನಡುವೆ ನಡೆದಿರುವ ಸಂಭಾಷಣೆ ಭಾರೀ ಚರ್ಚೆಗೆ ನಾಂದಿ ಹಾಡಿದೆ.
ಸಿಐಡಿ ವಶದಲ್ಲಿರುವ ಮಂಜುನಾಥ್ ಮೇಳಕುಂದಿ ವಿಚಾರಣೆ ವೇಳೆ ಪಿಎಸ್ಐ ಅಕ್ರಮಕ್ಕೆ ಸಂಬಂಧಸಿದಂತೆ ಸ್ಫೋಟಕ ಅಂಶಗಳನ್ನು ಬಾಯಿ ಬಿಟ್ಟಿದ್ದಾನೆ. ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಎಸಗುವ ಬಗ್ಗೆ ಆತ ಅಭ್ಯರ್ಥಿಗಳ ಜತೆ ನಡೆಸಿರುವ ಸಂಭಾಷಣೆಯ ಸಂದೇಶಗಳನ್ನು ಸಾಕ್ಷಿಯನ್ನಾಗಿ ಪರಿಗಣಿಸಿ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪಿಎಸ್ಐ ಆಗಿ ಆಯ್ಕೆಯಾಗಿರುವ ಶಾಂತಾಬಾಯಿ ಮತ್ತು ಕಿಂಗ್ ಪಿನ್ ಮಂಜುನಾಥ್ ನಡುವೆ ನಡೆದಿರುವ ಲಡ್ಡು- ಡೀಲ್ ದುಡ್ಡು ವಿಚಾರ ಕುರಿತ ಸಂಗತಿಯನ್ನು ಸಿಐಡಿ ಪೊಲೀಸರು ಕಲೆ ಹಾಕಿದ್ದಾರೆ.
ಜ್ಞಾನ ಜ್ಯೋತಿ ಆಂಗ್ಲ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದ ಮಹಿಳಾ ಅಭ್ಯರ್ಥಿ ಶಾಂತಾಬಾಯಿ ಪಾಸ್ ಆಗಿದ್ದರು. ಪರೀಕ್ಷೆ ಬರೆದ ಬಳಿಕ ಓಎಂಆರ್ ಶೀಟ್ ನಲ್ಲಿ ಸರಿ ಉತ್ತರ ತುಂಬಲು ಆಕೆಗೆ ಮಂಜುನಾಥ್ ಮೇಳಕುಂದಿ ಸಹಾಯ ಮಾಡಿದ್ದ. ಕಳೆದ 24 ದಿನಗಳಿಂದ ಶಾಂತಾಬಾಯಿ ಸಿಐಡಿ ಪೊಲೀಸರ ಕೈಗೆ ಸಿಗದೇ ನಾಪತ್ತೆಯಾಗಿದ್ದಾರೆ.

ಪರೀಕ್ಷೆಗೂ ಮುನ್ನ ಶಾಂತಾಬಾಯಿ ಮೇಳಕುಂದಿಯನ್ನು ಭೇಟಿ ಮಾಡಿ 50 ಲಕ್ಷ ರೂ.ಗೆ ಡೀಲ್ ಕುದುರಿಸಿದ್ದರು. ಮುಂಗಡವಾಗಿ ಶಾಂತಾಬಾಯಿ 10 ಲಕ್ಷ ರೂ. ಹಣವನ್ನು ಮಂಜುನಾಥ್ ಮೇಳಕುಂದಿಗೆ ಪಾವತಿ ಮಾಡಿದ್ದಳು. ಪಿಎಸ್ಐ ಪರೀಕ್ಷೆ ಡೀಲ್ ಕುದಿರಿಸಿ ಶಾಂತಾಬಾಯಿ ಗಂಡ ಬಸವರಾಜ್ ಎಲ್ಲವನ್ನು ವ್ಯವಸ್ಥೆ ಮಾಡಿದ್ದ. ಯಾದಗಿರಿ ಜಿಲ್ಲಾ ಪಂಚಾಯಿತಿಯಲ್ಲಿ ನರೇಗಾ ವಿಭಾಗದಲ್ಲಿ ಬಸವರಾಜು ಕಾರ್ಯ ನಿರ್ವಹಿಸುತ್ತಿದ್ದ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಶಾಂತಾಬಾಯಿ ಮತ್ತು ಬಸವರಾಜ್ ಎಸ್ಕೇಪ್ ಆಗಿದ್ದಾರೆ.
ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದ ಶಾಂತಾಬಾಯಿ ಪಿಎಸ್ಐ ಆಗಿ ಆಯ್ಕೆಯಾಗಿದ್ದರು. ಆ ಬಳಿಕ ತಿರುಪತಿಗೆ ಹೋಗಿದ್ದ ಶಾಂತಾಬಾಯಿ ದೇವರ ಹರಕೆ ತೀರಿಸಿ ಲಡ್ಡು ತೆಗೆದುಕೊಂಡು ಬಂದಿದ್ದಳು. ತಿರುತಪಿ ತಿಮ್ಮಪ್ಪನ ದರ್ಶನ ಪಡೆದು ಮಕ್ಕಳೊಂದಿಗೆ ಶಾಂತಾಬಾಯಿ ಕೂಡ ಗುಂಡು ಹೊಡೆಸಿಕೊಂಡಿದ್ದರು.

ತಿರುಪತಿಯಿಂದ ವಾಪಸು ಬಂದಿದ್ದ ಶಾಂತಾಬಾಯಿ ಕುಟುಂಬ ಮಂಜುನಾಥ್ ಮೇಳಕುಂದಿ ಮನೆಗೆ ಹೋಗಿದ್ದರು. ಅಣ್ಣಾ, ತಿರುಪತಿ ಲಡ್ಡು ಪ್ರಸಾದ ತೆಗೆದುಕೊ ಎಂದು ಹೇಳಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಮಂಜುನಾಥ್ ಮೇಳಕುಂದಿ, ನನಗೆ ಮೊದಲು ಲಡ್ಡು ಕೊಡೋದು ಬಿಡ್ಡು ಡೀಲ್ ದುಡ್ಡು ಕೊಡಿ ಎಂದು ಅವಾಜ್ ಬಿಟ್ಟಿದ್ದ. ಅತಿ ಶೀಘ್ರದಲ್ಲಿಯೇ ಉಳಿದ ಹಣ ಕೊಡುವುದಾಗಿ ಬಸವರಾಜ್ ಮಾತು ಕೊಟ್ಟು ಬಂದಿದ್ದರು. ಅದರಂತೆ ವಿವಿಧ ಕಡೆ ಸಾಲ ಪಡೆದು ಹಣ ಹೊಂದಿಸುತ್ತಿದ್ದರು. ಇನ್ನೇನು ಹಣ ಕೊಡುವಷ್ಟರಲ್ಲಿ ಪಿಎಸ್ಐ ನೇಮಕಾತಿ ಅಕ್ರಮ ಹೊರಗೆ ಬಂದಿದೆ. ಇದು ತಿಳಿಯುತ್ತಿದ್ದಂತೆ ಶಾಂತಾಬಾಯಿ ಮತ್ತು ಗಂಡ ಮಹಾರಾಷ್ಟ್ರಕ್ಕೆ ಎಸ್ಕೇಪ್ ಆಗಿದ್ದಾರೆ.
ಬಡತನ ಹಿನ್ನೆಲೆ ಹೊಂದಿದ್ದ ಶಾಂತಾಬಾಯಿ ಕುಟುಂಬ ಆರಂಭದಲ್ಲಿ ಹತ್ತು ಲಕ್ಷ ರೂ. ಕೊಟ್ಟಿತ್ತು. ಪರೀಕ್ಷೆಯಲ್ಲಿ ಪಾಸಾದ ಬಳಿಕ ಉಳಿದ ಹಣ ಕೊಡಲಿಕ್ಕೆ ಪರದಾಡುತ್ತಿತ್ತು. ಸ್ನೇಹಿತರು ಮತ್ತು ಕುಟುಂಬಸ್ಥರ ಬಳೀ ಸಾಲ ಎತ್ತಿದ್ದರು. ಪರೀಕ್ಷೆ ಫಲಿತಾಂಶ ಬಂದ ಬಳಿಕವೂ ಹಣ ಕೊಡಲಿಲ್ಲ ಎಂದು ಮಂಜುನಾಥ್ ಮೇಳಕುಂದಿ ಪದೇ ಪದೇ ಪೀಡಿಸುತ್ತಿದ್ದ. ಇದೀಗ ಇಬ್ಬರ ಲಡ್ಡು ಮತ್ತು ದುಡ್ಡಿನ ವಿಚಾರ ಸಿಐಡಿ ತನಿಖೆಯಿಂದ ಬಯಲಾಗಿದೆ.












Click it and Unblock the Notifications