ಖಾಸಗಿ ಆಸ್ಪತ್ರೆಗಳ ಮೇಲೆ ಕಡಿವಾಣ ಹಾಕಲು ಹೊರಟ ಸರಕಾರಕ್ಕೆ ಕೆಲವು ಪ್ರಶ್ನೆಗಳು
Recommended Video
ವಿಷ್ಣುವರ್ಧನ್ ಮುಖ್ಯ ಭೂಮಿಕೆಯಲ್ಲಿರುವ 'ವಿಷ್ಣುಸೇನಾ' ಚಿತ್ರದಲ್ಲಿ ಒಂದು ಸನ್ನಿವೇಶ ಬರುತ್ತದೆ. ರೋಗಿ ಸತ್ತಿದ್ದರೂ, ಬೇರೆ ಬೇರೆ ತಪಾಸಣೆ/ಆಪರೇಷನ್ ಎಂದು ಸಾವಿರಾರು ರೂಪಾಯಿಯನ್ನು ರೋಗಿಯ ಕಡೆಯಿಂದ ಖಾಸಗಿ ಆಸ್ಪತ್ರೆಯವರು ಸುಲಿಗೆ ಮಾಡುತ್ತಾರೆ. ಸಾಧ್ಯವಾದಷ್ಟು ಸುಲಿಗೆ ಮಾಡಿ, ನಂತರ ರೋಗಿ ಸತ್ತಿದ್ದಾರೆಂದು ಆಸ್ಪತ್ರೆಯವರು ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸುತ್ತಾರೆ.
In Pics : ವೈದ್ಯರ ಮುಷ್ಕರದಿಂದ ರೋಗಿಗಳ ನೀಗದ ಸಂಕಷ್ಟ
ಆ ಚಿತ್ರವನ್ನೇನಾದರೂ ಆರೋಗ್ಯ ಸಚಿವರು ಮತ್ತೆ ಮತ್ತೆ.ನೋಡಿ 'ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ವಿಧೇಯಕ' ಮಂಡಿಸಲು ಮುಂದಾಗಿದ್ದಾರಾ? ಯಾಕೆಂದರೆ, ಸರಕಾರ ಮಂಡಿಸಲು ಮುಂದಾಗಿರುವ ವಿಧೇಯಕದಲ್ಲಿ, price cap ಹೊರತು ಪಡಿಸಿ, ಮಿಕ್ಕೆಲ್ಲಾ ಅಂಶಗಳಿಂದ, ಸಾರ್ವಜನಿಕರಿಗೆ ಅನುಕೂಲ ಹೇಗಿದೆಯೋ, ಅದರಿಂದ ಅನಾನುಕೂಲವೂ ಅಷ್ಟೇ ಇದೆ..
ವೈದ್ಯರ ಮುಷ್ಕರ ಏಕೆ?, ಖಾರವಾಗಿ ಪ್ರಶ್ನಿಸಿದ ಸಿಎಂ
ಹಾಗಂತ ಖಾಸಗಿ ಆಸ್ಪತ್ರೆಗಳನ್ನು ಸಮರ್ಥಿಸಿಕೊಳ್ಳುವ ಕೆಲಸವನ್ನು ಇಲ್ಲಿ ಮಾಡುತ್ತಿಲ್ಲ. ಎಡ್ಮಿಷನ್ ಫೀ, ಕನ್ಸಲ್ಟಂಟ್ ಫೀ,.. ಹೀಗೆ ಖಾಸಗಿ ಆಸ್ಪತ್ರೆಗಳು, ಜನ ಯಾವ ಆರ್ಥಿಕ ಮಟ್ಟದಲ್ಲಿದ್ದರೂ ದುಡ್ಡು ಪೀಕುವುದನ್ನು ಬಿಡುವುದಿಲ್ಲ. ಇದಕ್ಕೆ ಸಿದ್ದರಾಮಯ್ಯ ಸರಕಾರ ಕಡಿವಾಣ ಹಾಕಲು ಹೊರಟಿದ್ದು, ಒಪ್ಪಿಕೊಳ್ಳುವಂತಹ ವಿಚಾರ.
ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕುವ ಸರಕಾರದ ನಿರ್ಧಾರಕ್ಕೆ, ತೀವ್ರ ಆಕ್ರೋಶಗೊಂಡಿರುವ ರಾಜ್ಯದ ವೈದ್ಯರು ಗುರುವಾರ (ನ.16)ದಿಂದ ಪೂರ್ಣ ಪ್ರಮಾಣದಲ್ಲಿ ಮುಷ್ಕರಕ್ಕೆ ಇಳಿದಿದ್ದಾರೆ. ಬುಧವಾರ ಸಂಜೆಯ ಹೊತ್ತಿಗೆಗೇ ಹಲವು ಆಸ್ಪತೆಗಳ ಹೊರರೋಗಿ ವಿಭಾಗ (OPD) ಕಾರ್ಯನಿರ್ವಹಿಸುತ್ತಿಲ್ಲ. 25ಸಾವಿರಕ್ಕೂ ಹೆಚ್ಚು ವೈದ್ಯರು ಧರಣಿ ನಡೆಸುತ್ತಿರುವ ಹಿನ್ನಲೆಯಲ್ಲಿ, ಸೂಕ್ತ ವೈದ್ಯಕೀಯ ವ್ಯವಸ್ಥೆ ಸಿಗದೇ 20ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.
ವೈದ್ಯರ ಮುಷ್ಕರಕ್ಕೆ ಕಾರಣವಾಯಿತೇ ಈ ಅಂಶಗಳು
ವೈದ್ಯರು ತಮ್ಮ ವೃತ್ತಿಧರ್ಮವನ್ನು ಮರೆತು, ಚಿಕಿತ್ಸೆ ನೀಡಲು ನಿರಾಕರಿಸಿದ್ದು ತಪ್ಪು.. ವಿಧೇಯಕ ಮಂಡನೆ ಇನ್ನೂ ಆಗಿಲ್ಲ. ಒಂದು ವೇಳೆ ವಿಧೇಯಕ ಮಂಡನೆಯಾದರೂ, ಅದರ ವಿರುದ್ದ ಹೋರಾಡಲು ಕಾನೂನಿನಲ್ಲಿ ಅವಕಾಶವಿದೆ. ಸರಕಾರದ ವಿರುದ್ದ ವೈದ್ಯರು ಪ್ರತಿಭಟನೆ ನಡೆಸಬೇಕಿತ್ತೇ ಹೊರತು, ರೋಗಿಗಳ ಜೊತೆಯಲ್ಲ..
ವೈದ್ಯರು ಅಥವಾ ಸರಕಾರ ಒಬ್ಬರಲ್ಲಿ ಯಾರದಾರೂ 'ಸಾರ್ವಜನಿಕರ ಹಿತದೃಷ್ಟಿಯಿಂದ' ಬಗ್ಗದಿದ್ದರೆ, ಸಾರ್ವಜನಿಕರಿಗೆ ವೈದ್ಯಕೀಯ ಸೇವೆಯ ವ್ಯತ್ಯಯದ ಬಿಸಿ ತೀವ್ರವಾಗಿ ತಟ್ಟಲಿದೆ. ಸಚಿವ ರಮೇಶ್ ಕುಮಾರ್, ವಿಧೇಯಕದಲ್ಲಿ ಏನಾದರೂ ತಿದ್ದುಪಡಿ ಮಾಡಿದರೆ, ರಾಜೀನಾಮೆ ನೀಡುವುದಾಗಿ ಈಗಾಗಲೇ ಪ್ರಕಟಿಸಿದ್ದಾರೆ. ಜೊತೆಗೆ, ಈ ವಿಚಾರ ಇಷ್ಟು ಕಗ್ಗಂಟಾಗಲು ಸಿಎಂ ಕಾರಣ ಎಂದು ಆರೋಪಿಸಿದ್ದಾರೆ, ಹಾಗಾಗಿ ಮುಖ್ಯಮಂತ್ರಿಗಳು ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಸರಕಾರ ಮಂಡಿಸಲು ಮುಂದಾಗಿರುವ ವಿಧೇಯಕದ ವಿಚಾರದಲ್ಲಿ ಕೆಲವೊಂದು ಪ್ರಶ್ನೆಗಳು, ಮುಂದೆ ಓದಿ..
ಸರಕಾರೀ ಆಸ್ಪತ್ರೆಗಳ ವೈದ್ಯರು ಖಾಸಗಿ ಕ್ಲಿನಿಕ್ ಇಟ್ಟುಕೊಳ್ಳುತ್ತಾರಾ ಅದರ ಬಗ್ಗೆ
ಗ್ರೌಂಡ್ ರಿಯಾಲಿಟಿ ಅರ್ಥ ಮಾಡಿಕೊಂಡು ಸರಕಾರ ಈ ವಿಧೇಯಕ ಮಂಡಿಸಲು ಮುಂದಾಗಿದೆಯಾ ಅಥವಾ ಇದೊಂದು ಚುನಾವಣಾ ಸ್ಟಂಟಾ ಎನ್ನುವುದು ಇಲ್ಲಿ ಸಂದೇಹ ಅಂದರೆ, ಮತ್ತೆ ರಮೇಶ್ ಕುಮಾರ್ ಭಾವೋದ್ವೇಗಕ್ಕೆ ಒಳಗಾಗಬಾರದು. ಯಾಕೆಂದರೆ, ಇತ್ತೀಚಿನ ದಿನಗಳಲ್ಲಿ ಸರಕಾರೀ ಆಸ್ಪತ್ರೆಗಳ ಗುಣಮಟ್ಟ ಸುಧಾರಿಸುತ್ತಿದೆ, ಆಧುನಿಕ ಉಪಕರಣಗಳು ಇವೆ. ಆದರೆ, ಇದರ ಸದುಪಯೋಗ ಆಗುತ್ತಿದೆಯಾ? ಸರಕಾರೀ ಆಸ್ಪತ್ರೆಗಳ ವೈದ್ಯರು ಖಾಸಗಿ ಕ್ಲಿನಿಕ್ ಇಟ್ಟುಕೊಂಡು ಹೆಚ್ಚಿನ ತಪಾಸಣೆಗೆ, 'ಸಂಜೆ ಕ್ಲಿನಿಕ್ಕಿಗೆ' ಬನ್ನಿ ಎಂದು ಹೇಳುವುದು ಸರಕಾರದ ಕಿವಿಗೆ ಬಿದ್ದಿಲ್ಲವೇ? ಎಷ್ಟೊಂದು ಸರಕಾರದ ವೈದ್ಯರು consultant ಆಗಿ ಖಾಸಗಿ ಆಸ್ಪತ್ರೆಗೆ ಹೋಗುತ್ತಿಲ್ಲವೇ? ಇದಕ್ಕೆ ಮೊದಲು ಸರಕಾರ ಯಾಕೆ ನಿಯಂತ್ರಣ ಹೇರಬಾರದು?
ದೇಹ ಹಸ್ತಾಂತರಿಸುವ ಮುನ್ನ ಬಾಕಿ ಮೊತ್ತ ಪಾವತಿಸುವಂತೆ ಒತ್ತಾಯಿಸುವಂತಿಲ್ಲ
ಆಸ್ಪತ್ರೆಯಲ್ಲಿ ಯಾವುದೇ ವ್ಯಕ್ತಿ ಮೃತಪಟ್ಟರೆ ಸಂಬಂಧಿಕರಿಗೆ ದೇಹ ಹಸ್ತಾಂತರಿಸುವ ಮುನ್ನ ಬಾಕಿ ಮೊತ್ತ ಪಾವತಿಸುವಂತೆ ಒತ್ತಾಯಿಸುವಂತಿಲ್ಲ ಎನ್ನುತ್ತದೆ ವಿಧೇಯಕದ ಅಂಶ, ಉದಾಹರಣೆಗೆ, ಬಹುಅಂಗಾಗ ವೈಫಲ್ಯದಿಂದ ರೋಗಿ ಮೃತ ಪಟ್ಟರೆ, ಲಕ್ಷಾಂತರ ರೂಪಾಯಿ ಬಿಲ್ ಬಾಕಿಯಿದ್ದರೆ, ಆಸ್ಪತ್ರೆಗೆ ಬರಬೇಕಾಗಿರುವ ದುಡ್ಡಿಗೆ ಜವಾಬ್ದಾರಿ ಯಾರು? ಅಂತಿಮ ಸಂಸ್ಕಾರ ಮಾಡಿದ ಮೇಲೆ ಆಸ್ಪತ್ರೆಗೆ ಬಿಲ್ ಕೊಟ್ರೂ ಆಯ್ತು, ಕೊಡದಿದ್ದರೂ ಆಯ್ತು ಅನ್ನೋವರು ಖಂಡಿತಾ ಇರೋದಿಲ್ಲ ಅನ್ನೋದಕ್ಕೆ ರಮೇಶ್ ಕುಮಾರ್ ಗ್ಯಾರಂಟಿ ಕೊಡ್ತಾರಾ?
ಮುಂಗಡನೂ ತೆಗೆದುಕೊಳ್ಳಬಾರದು, ಬಾಕಿ ಪಾವತಿಸಲು ಒತ್ತಾಯಿಸಲೂ ಬಾರದು
ತುರ್ತು ಚಿಕಿತ್ಸೆ ಸಂದರ್ಭದಲ್ಲಿ ರೋಗಿಯಿಂದ ಅಥವಾ ಅವರ ಪ್ರತಿನಿಧಿಯಿಂದ ಮುಂಗಡ ಪಾವತಿಸುವಂತೆ ಒತ್ತಾಯ ಮಾಡುವಂತಿಲ್ಲ ಅನ್ನುತ್ತೆ ವಿಧೇಯಕದ ಇನ್ನೊಂದು ಪಾಯಿಂಟ್, ಮಾನವೀಯ ದೃಷ್ಟಿಂದ ಸರಕಾರದ ಈ ನಿರ್ಧಾರವನ್ನು ಒಪ್ಪಿಕೊಳ್ಳೋಣ. ಆದರೆ, ಮುಂಗಡನೂ ತೆಗೆದುಕೊಳ್ಳಬಾರದು, ಬಾಡಿ ತೆಗೆದುಕೊಂಡು ಹೋಗುವಾಗ ಬಾಕಿ ಪಾವತಿಸಲು ಒತ್ತಾಯಿಸಲೂ ಬಾರದು ಅಂದರೆ, ಒಂದೆರಡು ಕೇಸ್ ಆದರೆ ಪರವಾಗಿಲ್ಲ, ಇಂತಾ ತುಂಬಾ ಕೇಸ್ ಗಳು ಬಂದರೆ, ಖಾಸಗಿ ಆಸ್ಪತ್ರೆಗಳಿಗಾಗುವ ನಷ್ಟಕ್ಕೆ ಸರಕಾರ ಏನಾದರೂ ಸಬ್ಸಿಡಿ ಕೊಡುತ್ತಾ?
ಶಿಕ್ಷೆ ಪ್ರಕಟವಾದರೆ ಕೋರ್ಟ್ ಸುತ್ತಾಡಲು ವೈದ್ಯರು ಸಿದ್ದರಿದ್ದಾರಾ?
ಸರಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಿದರೆ, ಲಕ್ಷಾಂತರ ರೂಪಾಯಿ ದಂಡ, ಜೈಲು ಶಿಕ್ಷೆ ಅನ್ನುವ ಅಂಶ ವಿಧೇಯಕದಲ್ಲಿದೆ. ಹೀಗಿರುವಾಗ, ಒಂದು ವೇಳೆ ಈ ಕಾನೂನು ಕಟ್ಟುನಿಟ್ಟಾಗಿ ಪಾಲನೆಯಾಗಿದ್ದೇ ಆದಲ್ಲಿ, ಯಾವುದೇ ಖಾಸಗಿ ಆಸ್ಪತ್ರೆಯಾಗಲಿ, ವೈದ್ಯರಾಗಲಿ ರಿಸ್ಕ್ ತೆಗೆದುಕೊಳ್ಳಲು ಸಿದ್ದರಿರುತ್ತಾರಾ? ಖಾಸಗಿ ಆಸ್ಪತ್ರೆಗಳಲ್ಲಿ ಕೊಡುವ ಸ್ವಚ್ಚತೆ, ಸೌಲಭ್ಯ ಸರಕಾರೀ ಆಸ್ಪತ್ರೆಗಳಲ್ಲಿ ಕೊಡಲು ಸಾಧ್ಯವಿದೆಯಾ? ಈ ಸಂಬಂಧ ಒಂದು ವೇಳೆ ಶಿಕ್ಷೆ ಪ್ರಕಟವಾದರೆ ಕೋರ್ಟ್ ಸುತ್ತಾಡಲು ಆಸ್ಪತ್ರೆಯ ಆಡಳಿತ ಮಂಡಳಿಗಾಗಲಿ, ವೈದ್ಯರಿಗಾಗಲಿ ಸಿದ್ದರಿರುತ್ತಾರಾ?
ಕಾಂಪ್ಲಿಕೇಟೆಡ್ ಕೇಸುಗಳು ಬಂದಾಗ, ನಿರ್ಭೀತಿಯಿಂದ ಸರ್ಜರಿ ನಡೆಸಲು ಸಾಧ್ಯವೇ
ಶಸ್ತ್ರಚಿಕಿತ್ಸೆಯ ವೇಳೆ, ರೋಗಿ ಸತ್ತರ ಅದಕ್ಕೆ ಪರಿಹಾರ ಆಸ್ಪತ್ರೆ ಕೊಡಬೇಕು ಅನ್ನೋದು ಮತ್ತೊಂದು ಅಂಶ. ವೈದ್ಯರ ನಿರ್ಲಕ್ಷ್ಯದಿಂದ ರೋಗಿಗಳು ಸಾವನ್ನಪ್ಪಿರುವ ಘಟನೆಗಳು ನಮ್ಮ ಮುಂದಿದೆ. ವಿಧೇಯಕದ ಈ ಅಂಶವನ್ನು ಒಂದು ಹಂತಕ್ಕೆ ಒಪ್ಪಿಕೊಳ್ಳಬಹುದು, ಇದಕ್ಕೆ ಆಸ್ಪತ್ರೆಗಳು ಪರಿಹಾರ ನೀಡಬೇಕು ಎನ್ನುವ ಕಾನೂನು ಸರಿಯೇ. ಆದರೆ, ಬಹಳಷ್ಟು ಕಾಂಪ್ಲಿಕೇಟೆಡ್ ಇರುವ ಕೇಸುಗಳು ಬಂದಾಗ, ಈ ಕಾನೂನಿನಿಂದ ವೈದ್ಯರು ನಿರ್ಭೀತಿಯಿಂದ ಸರ್ಜರಿ ನಡೆಸಲು ಸಾಧ್ಯವೇ? ವೈದ್ಯರ ಸತತ ಪ್ರಯತ್ನದ ಮೇಲೂ ರೋಗಿ ಸಾವನ್ನಪ್ಪಿದರೆ, ಅದಕ್ಕೆ ಆಸ್ಪತ್ರೆಗಳು ಪರಿಹಾರ ಕೊಡಬೇಕೆನ್ನುವುದು ಸರಿಯೇ?
ಸರಕಾರೀ ಅಧಿಕಾರಿಗಳಿಗೆ ದುಡ್ಡು ಪೀಕಲು ಇನ್ನಷ್ಟು ದಾರಿ
ರೋಗಿಗಳ ಕುಂದು ಕೊರತೆ ವಿಚಾರಣೆಗೆ ಜಿಲ್ಲಾ ಅಥವಾ ಮಹಾನಗರ ಮಟ್ಟದಲ್ಲಿ ಕುಂದು ಕೊರತೆ ಪರಿಹಾರ ಸಮಿತಿ ರಚಿಸಲು ಅವಕಾಶ ಅನ್ನುತ್ತೆ ವಿಧೇಯಕದ ಮಗುದೊಂದು ಅಂಶ, ಕೆಲಸವಿಲ್ಲದ ಬಡೀಗಾರ ಇನ್ನೊಂದು ಏನೋ ಮಾಡಿದ್ನಂತೆ ಹಂಗಾಯಿತು ಸರಕಾರದ ವಿಧೇಯಕ. ಭ್ರಷ್ಟಾಚಾರ ತಾಂಡವಾಡುತ್ತಿರುವ ಈ ಹೊತ್ತಿನಲ್ಲಿ, ಸರಕಾರೀ ಅಧಿಕಾರಿಗಳಿಗೆ ದುಡ್ಡು ಪೀಕಲು (ಎಲ್ಲರೂ ಹೀಗೆ ಎಂದು ಹೇಳುತ್ತಿಲ್ಲ) ಇನ್ನಷ್ಟು ದಾರಿ ತೋರಿಸಿದಂತಾಗುವುದಿಲ್ಲವೇ?