Cauvery 2.0 : ಆಸ್ತಿ ನೋಂದಣಿ ಇನ್ನಷ್ಟು ಸರಳ: ನ. 1ರಿಂದ ಬರಲಿದೆ ಹೊಸ ತಂತ್ರಾಂಶ

ಬೆಂಗಳೂರು, ಸೆಪ್ಟಂಬರ್ 06: ಕರ್ನಾಟಕದಲ್ಲಿ ಮುಂದಿನ ದಿನದಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಅತಿ ವೇಗದಿಂದ ಕೂಡಿರಲಿದೆ. ಜತೆಗೆ ಇಲಾಖೆ ಮತ್ತು ಜನಸ್ನೇಹಿ ಆಗಿರುವಂತಹ ಆಸ್ತಿ ನೋಂದಣಿ 'ಕಾವೇರಿ 2.0' ಸಾಫ್ಟವೇರ್‌ ನವೆಂಬರ್‌ 1ರಂದು ಲೋಕಾರ್ಪಣೆಗೊಳ್ಳಲಿದೆ.

ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿರುವ ಕಂದಾಯ ಸಚಿವ ಆರ್‌.ಅಶೋಕ್, ಈ ಹೊಸ ಸಾಫ್ಟವೇರ್‌ ಕಂದಾಯ ಇಲಾಖೆ ಹಾಗೂ ಜನ ಸ್ನೇಹಿ ಆಗಿರಲಿದೆ. ನವೆಂಬರ್‌ 1ರಿಂದ ಈ ಸಾಫ್ಟವೇರ್‌ ಮೂಲಕ ರಾಜ್ಯದಲ್ಲಿ ವೇಗವಾಗಿ ಆಸ್ತಿ ನೋಂದಣಿ ಮಾಡಿಸಬಹುದಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಜಾರಿಗೆ ತರಲು ಸಿದ್ಧತೆ ನಡೆಸಿದ್ದೇವೆ ಎಂದರು.

ಹೊಸ 'ಕಾವೇರಿ 2.0' ಸಾಫ್ಟವೇರ್‌ ಅನ್ನು ಈಗಾಗಲೇ ಪ್ರಯೋಗಿಕವಾಗಿ ಪರೀಕ್ಷಿಸಲಾಗಿದೆ. ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿರುವ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಜನಸ್ನೇಹಿ ತಂತ್ರಾಂಶವನ್ನು ಪರೀಕ್ಷಿಸಲಾಗಿದೆ. ಇಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಎಲ್ಲ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಅಳವಡಿಕೆ ಮಾಡಲಾಗುವುದು.

ಕಾವೇರಿ 2.0 ಅಡಿ ಶೀಘ್ರ ಆಸ್ತಿ ನೋಂದಣಿ

ಕಾವೇರಿ 2.0 ಅಡಿ ಶೀಘ್ರ ಆಸ್ತಿ ನೋಂದಣಿ

ಈ ತಂತ್ರಾಂಶದೊಂದಿಗೆ ಜನರು ನೋಂದಾಯಿಸಲು ಆಸ್ತಿಯ ದಾಖಲೆಗಳನ್ನು ಅಪ್‌ಲೋಡ್ ಮಾಡಬಹುದು. ಸ್ಟ್ಯಾಂಪ್ ಡ್ಯೂಟಿ ಸೇರಿದಂತೆ ಇನ್ನಿತರ ಶುಲ್ಕಗಳನ್ನು ಆನ್‌ಲೈನ್‌ ಮೂಲಕವೇ ಪಾವತಿಸಬಹುದು. ನಂತರ ಅವರು ತಮಗೆ ಅನುಕೂಲಕರವಾದ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಬಹುದು. ಬಯೋಮೆಟ್ರಿಕ್ ವಿವರಗಳನ್ನು ನೀಡಲು ತಮ್ಮ ಆಯ್ಕೆಯ ಹತ್ತಿರದ ಉಪನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಬಹುದು.

ಜನರು ಒಮ್ಮೆ ಆಸ್ತಿ ನೋಂದಣಿಗೆ ಎಂದು ಒಮ್ಮೆ ಕಚೇರಿಗೆ ಭೇಟಿ ನೀಡಿದರೆ 5ರಿಂದ 10 ನಿಮಿಷಗಳಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ ತೆರಳಬಹುದು ಎಂದು ಆರ್‌.ಅಶೋಕ್‌ ವಿವರಿಸಿದರು.

ಜನ- ಇಲಾಖೆ ಸ್ನೇಹಿ ರೂಪದಲ್ಲಿ ತಂತ್ರಾಂಶ ವಿನ್ಯಾಸ

ಜನ- ಇಲಾಖೆ ಸ್ನೇಹಿ ರೂಪದಲ್ಲಿ ತಂತ್ರಾಂಶ ವಿನ್ಯಾಸ

ಆಸ್ತಿ ವಿವರಗಳು ಏನಿವೆ, ಪ್ರದೇಶವನ್ನು ಆಧರಿಸಿ, ಖರೀದಿದಾರರು ಪಾವತಿಸಬೇಕಾದ ಹಣ, ಅದರ ಸ್ವಯಂಚಾಲಿತವಾಗಿ ಲೆಕ್ಕಾಚಾರ ಮಾಡುವ ವಿಧಾನ ಸೇರಿದಂತೆ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ತಂತ್ರಾಂಶವನ್ನು ವಿನ್ಯಾಸಗೊಳಿಸಲಾಗಿದೆ. ಮುಖ್ಯವಾಗಿ ಆಸ್ತಿ ನೋಂದಣಿಗೆ ಮೂರನೇ ವ್ಯಕ್ತಿಯನ್ನು ಅವಲಂಬಿಸುವ ಅಗತ್ಯವಿಲ್ಲ. ಅವಲಂಬನೆಯನ್ನು ಈ ತಂತ್ರಾಂಶ ತಪ್ಪಿಸಲಿದೆ ಎಂದು ಹೇಳಿದರು.

ಆಸ್ತಿ ನೋಂದಣಿ ಕೆಲ ಸಮಸ್ಯೆಗಳಿಗೆ ಮುಕ್ತಿ

ಆಸ್ತಿ ನೋಂದಣಿ ಕೆಲ ಸಮಸ್ಯೆಗಳಿಗೆ ಮುಕ್ತಿ

ಆಸ್ತಿ ನೋಂದಣಿ ಆದ ಬಳಿಕ ಆಸ್ತಿಯ ದಾಖಲೆಗಳನ್ನು ಖರೀದಿದಾರರ ಡಿಜಿ ಲಾಕರ್‌ಗಳಿಗೆ ರವಾನೆಯಾಗುತ್ತದೆ. ಅಲ್ಲದೇ ಅವರ ಮೊಬೈಲ್ ಸಂಖ್ಯೆಗೆ ಮಾಹಿತಿ ರವಾನೆಯಾಗುತ್ತದೆ. ಪ್ರಸ್ತುತ, ತಾಂತ್ರಿಕ ದೋಷಗಳಿಂದಾಗಿ ಜನರು ಉಪನೋಂದಣಾಧಿಕಾರಿ ಕಚೇರಿಗಳಿಗೆ ಅನೇಕ ಸಲ ಬಾರಿ ಭೇಟಿ ನೀಡಬೇಕಾದ ಸ್ಥಿತಿ ಇದೆ.

ಈ ನೂತನ ಸಾಫ್ಟ್‌ವೇರ್‌ ಕೇಂದ್ರೀಕೃತ ತಂತ್ರಾಂಶ ಆಗಿರುವುದರಿಂದ ಕಾಯುವ, ಹೆಚ್ಚು ಸಮಯ ಹಿಡಿಯುವ ಹಾಗೂ ಮೂರನೇ ವ್ಯಕ್ತಿಗಳ ಕಿರಿಕಿರಿಯಂತ ಸಮಸ್ಯೆಗಳು ಇರುವುದಿಲ್ಲ. ಯಾವುದೇ ಸಮಸ್ಯೆಗಳಿದ್ದರೂ ಇನ್ನು ಮುಂದೆ ತ್ವರಿತವಾಗಿ ಮತ್ತು ಸುಲಭವಾಗಿ ಬಗೆಹರಿಯಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಲೂಕುಗಳಲ್ಲಿ ಏಜೆನ್ಸಿ ಸ್ಥಾಪನೆ

ತಾಲೂಕುಗಳಲ್ಲಿ ಏಜೆನ್ಸಿ ಸ್ಥಾಪನೆ

ಆಸ್ತಿ ಖರೀದಿದಾರರು ವಂಚನೆಗೆ ಒಳಗಾಗುವುದು ತಪ್ಪಿಸಲು ಸರ್ಕಾರವು ಆದಷ್ಟು ಶೀಘ್ರವೇ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಆಸ್ತಿ ದಾಖಲೆಗಳ ಸತ್ಯಾಸತ್ಯತೆ ಪರಿಶೀಲನೆಗಾಗಿ ಏಜೆನ್ಸಿ ಸ್ಥಾಪಿಸಲಿದೆ. ಈ ಏಜೆನ್ಸಿಗಳು ದಾಖಲೆಗಳ ಪರಿಶೀಲನೆ ಹಾಗೂ ಆ ದಾಖಲೆಗಳು ನಿಜವೇ, ನಕಲಿ ದಾಖಲೆಗಳೇ ಎಂದು ಖರೀದಿದಾರರಿಗೆ ತಿಳಿಸುವ ಕೆಲಸ ಮಾಡುತ್ತದೆ. ಜತೆಗೆ ಕಾನೂನು ಪ್ರಕರಣಗಳನ್ನು ಗುರುತಿಸುತ್ತಾರೆ, ಕನಿಷ್ಠ ಮೊತ್ತ ವಿಧಿಸುತ್ತಾರೆ ಎಂದು ಹೇಳಿದರು.

ಸರ್ಕಾರವೇ ಈ ಏಜೆನ್ಸಿಗಳನ್ನು ನಡೆಸುವುದರಿಂದ ಇವುಗಳನ್ನು ನಂಬಬಹುದು. ಇದರಿಂದ ಖರೀದಿದಾರರು ದೊಡ್ಡ ಮೊತ್ತವನ್ನು ಖರ್ಚು ಮಾಡುವ ಮೂಲಕ ಖಾಸಗಿ ಕಂಪನಿಗಳಿಂದ ಕಾನೂನು ಅಭಿಪ್ರಾಯ ಪಡೆಯುವುದನ್ನು ತಡೆಯಬಹುದು ಎಂದು ಆರ್‌.ಅಶೋಕ್ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+