ಬಿಜೆಪಿಯ ಬಿ. ಎಲ್. ಸಂತೋಷ್ಗೆ 2 ಸವಾಲು ಹಾಕಿದ ಸಚಿವ!
ಬೆಂಗಳೂರು, ಸೆಪ್ಟೆಂಬರ್ 01; ಕರ್ನಾಟಕದ ರಾಜಕೀಯದಲ್ಲಿ ಶುಕ್ರವಾರ ಹೆಚ್ಚು ಚಾಲ್ತಿಯಲ್ಲಿರುವ ಹೆಸರು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್. ಗುರುವಾರ ಕರ್ನಾಟಕ ಬಿಜೆಪಿ ಕಚೇರಿಯಲ್ಲಿ ಅವರು ನಡೆಸಿದ ಸಭೆ, ಆಡಿದ ಮಾತುಗಳು ರಾಜ್ಯಾದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿವೆ.
ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮತದಾರ ಚೇತನ ಮಹಾಭಿಯಾನದ ಅಂಗವಾಗಿ ಗುರುವಾರ ನಡೆದ ಲೋಕಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಬಿ. ಎಲ್. ಸಂತೋಷ್ ಮಾತನಾಡಿದರು.

ಪ್ರತಿಪಕ್ಷ ನಾಯಕನ ಆಯ್ಕೆ ಸೇರಿದಂತೆ ಹಲವು ವಿಚಾರ ಪ್ರಸ್ತಾಪಿಸಿದ್ದರು. ಆಪರೇಷನ್ ಕಮಲದ ಕುರಿತು ಸಹ ಅವರು ಆಡಿದ್ದಾರೆ ಎಂಬ ಮಾತನ್ನು ಕಾಂಗ್ರೆಸ್ ನಾಯಕರು ಉಲ್ಲೇಖಿಸಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಟ್ವೀಟ್ಗಳನ್ನು ಮಾಡಿ ವ್ಯಂಗ್ಯವಾಡುತ್ತಿದ್ದಾರೆ.
ಪ್ರಿಯಾಂಕ್ ಖರ್ಗೆ ಟ್ವೀಟ್; ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಬಿ. ಎಲ್. ಸಂತೋಷ್ ಹೇಳಿಕೆ ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. ಅವರಿಗೆ ಎರಡು ಸವಾಲು ಹಾಕಿದ್ದಾರೆ.
ಸಚಿವರು ತಮ್ಮ ಟ್ವೀಟ್ನಲ್ಲಿ 'ಬಿ. ಎಲ್. ಸಂತೋಷ್ ಅವರಿಗೆ ಒಂದು ಸವಾಲು, ಒಂದು ದಿನವಲ್ಲ, ಒಂದು ತಿಂಗಳು ಸಮಯ ನೀಡುತ್ತೇವೆ, ನಮ್ಮ ಸರ್ಕಾರವನ್ನು ಬೀಳಿಸುವುದಿರಲಿ, ಅಲ್ಲಾಡಿಸಲು ಸಾಧ್ಯವಾ ಎಂದು ತೋರಿಸಲಿ' ಎಂದು ಹೇಳಿದ್ದಾರೆ.
'@blsanthosh ಅವರಿಗೆ ಒಂದು ಸವಾಲು,
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 1, 2023
ಒಂದು ದಿನವಲ್ಲ, ಒಂದು ತಿಂಗಳು ಸಮಯ ನೀಡುತ್ತೇವೆ, ನಮ್ಮ ಸರ್ಕಾರವನ್ನು ಬೀಳಿಸುವುದಿರಲಿ, ಅಲ್ಲಾಡಿಸಲು ಸಾಧ್ಯವಾ ಎಂದು ತೋರಿಸಲಿ.
ಇದೆಲ್ಲವಕ್ಕೂ ಮಿಗಿಲಾಗಿ ಮತ್ತೊಂದು ಸವಾಲು,
ಒಂದು ವಾರದ ಸಮಯದಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಹಾಗೂ ಮೇಲ್ಮನೆಯ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿ ತೋರಿಸಲಿ.
ಈ… pic.twitter.com/mfBgQPcLgO
'ಇದೆಲ್ಲವಕ್ಕೂ ಮಿಗಿಲಾಗಿ ಮತ್ತೊಂದು ಸವಾಲು, ಒಂದು ವಾರದ ಸಮಯದಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಹಾಗೂ ಮೇಲ್ಮನೆಯ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿ ತೋರಿಸಲಿ. ಈ ಸವಾಲನ್ನು ಸ್ವೀಕರಿಸುವ ದಮ್ಮು, ತಾಕತ್ತು ಇದೆಯೇ?' ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದು ಕಡೆ ಕರ್ನಾಟಕ ಕಾಂಗ್ರೆಸ್ ಘಟಕ ಸರಣಿ ಟ್ವೀಟ್ಗಳ ಮೂಲಕ ಬಿ. ಎಲ್. ಸಂತೋಷ್ ಹೇಳಿಕೆ ಉಲ್ಲೇಖ ಮಾಡಿ ಬಿಜೆಪಿಗೆ ಪ್ರಶ್ನೆಗಳನ್ನು ಹಾಕುತ್ತಿದೆ. BJPVSBJP ಎಂಬ ಹ್ಯಾಷ್ ಟ್ಯಾಗ್ ಇದಕ್ಕೆ ಬಳಕೆ ಮಾಡುತ್ತಿದೆ.
ಕಾಂಗ್ರೆಸ್ ಒಂದು ಟ್ವೀಟ್ನಲ್ಲಿ, 'ಸಂತೋಷ ಕೂಟದ ಸಭೆಗೆ ಗೈರಾದವರು' ಎಂದು ಬಿಜೆಪಿ ನಾಯಕರ ಪಟ್ಟಿಯನ್ನು ಹಾಕಿದೆ.
* ಸಿ.ಟಿ ರವಿ
* ಬಸವರಾಜ ಬೊಮ್ಮಾಯಿ
* ವಿ. ಸೋಮಣ್ಣ
* ಎಸ್. ಟಿ. ಸೋಮಶೇಖರ್
* ಬಿ. ಎಸ್. ಯಡಿಯೂರಪ್ಪ
* ಶಂಕರ್ ಪಾಟೀಲ್ ಮುನೇನಕೊಪ್ಪ
* ಶಿವರಾಂ ಹೆಬ್ಬಾರ್
* ಎಂ. ಪಿ. ರೇಣುಕಾಚಾರ್ಯ ಪಟ್ಟಿಯಲ್ಲಿ ಇನ್ನೂ ಹಲವರಿದ್ದಾರೆ. ಬಿ. ಎಲ್. ಸಂತೋಷ್ ಅವರೇ, ನಿಮ್ಮವರೇ ನಿಮಗೆ ಸಂಪರ್ಕಕ್ಕೆ ಸಿಗಲಿಲ್ಲವೇ? ಮೊದಲು ನಿಮ್ಮವರನ್ನು ಸಂಪರ್ಕಿಸಲು ಪ್ರಯತ್ನಿಸಿ' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಮತ್ತೊಂದು ಟ್ವೀಟ್ನಲ್ಲಿ, 'ಯಡಿಯೂರಪ್ಪನವರಿಗೆ ಸೆಡ್ಡು ಹೊಡೆಯಲು ನಡೆಸಿದ ಸಭೆಗೆ ಬಿಜೆಪಿಯ ಹಲವು ಶಾಸಕರು, ನಾಯಕರೇ ಗೈರಾಗಿದ್ದರು. ಬಿ. ಎಲ್. ಸಂತೋಷ್ ಅವರು ಸ್ವತಃ ಬಿಜೆಪಿ ಶಾಸಕರೊಂದಿಗೇ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ, ಇನ್ನೂ ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎನ್ನುವುದು ಶತಮಾನದ ಜೋಕ್!. ಸುಳ್ಳು ಹೇಳಿಕೊಂಡು ತಿರುಗುವ ಮೊದಲು ಸಂತೋಷ್ ಅವರು ತಮ್ಮ ಪಕ್ಷದ ಶಾಸಕರೊಂದಿಗೆ ಸಂಪರ್ಕ ಹಾಗೂ ವಿಶ್ವಾಸವನ್ನು ಹೊಂದಲು ಪ್ರಯತ್ನಿಸಲಿ' ಎಂದು ಸಲಹೆ ನೀಡಿದೆ.
ಮತ್ತೊಂದು ಪೋಸ್ಟ್ನಲ್ಲಿ, 'ಬಿಜೆಪಿ ಪಕ್ಷಕ್ಕೆ ಸಭೆ ಕರೆಯಲು ಒಬ್ಬ ಅಧ್ಯಕ್ಷ ದಿಕ್ಕಿಲ್ಲ, ಬಿಜೆಪಿ ಶಾಸಕರ ಸಭೆ ನಡೆಸಲು ಒಬ್ಬ ಶಾಸಕಾಂಗ ಪಕ್ಷದ ನಾಯಕನಿಲ್ಲ. ಜನಪ್ರತಿನಿಧಿಯಾಗಲು ಅರ್ಹತೆ ಇಲ್ಲದ, ನಾಲ್ಕು ಮತಗಳನ್ನು ಸೆಳೆಯಲು ಶಕ್ತಿ ಇಲ್ಲದ ಬಿ.ಎಲ್ ಸಂತೋಷ್ ಸಭೆ ನಡೆಸುವ ದುರ್ಗತಿ ಬಂದಿದೆ ಎಂದರೆ ಬಿಜೆಪಿ ಅದೆಷ್ಟು ರಾಜಕೀಯ ದಿವಾಳಿಯಾಗಿರಬಹುದು! BS Yediyurappa ಅವರಿಗೆ ಸೆಡ್ಡು ಹೊಡೆಯುವುದಕ್ಕೆ ಮಾತ್ರ ಈ ಸಭೆ ಸೀಮಿತವಾಗಿದೆ' ಎಂದು ಕಾಂಗ್ರೆಸ್ ಆರೋಪ ಮಾಡಿದೆ.












Click it and Unblock the Notifications