ಧಮ್ಮು, ತಾಕತ್ತು ಇದ್ರೆ ಕಲಬುರಗಿಗೆ ಬರಲಿ: ಸಿಎಂ ಬೊಮ್ಮಾಯಿಗೆ ಪ್ರಿಯಾಂಕ್ ಖರ್ಗೆ ಸವಾಲು
ಕಲಬುರಗಿ,ಡಿಸೆಂಬರ್ 14: ಮಾತು ಎತ್ತಿದರೆ ಡಬಲ್ ಇಂಜಿನ್ ಸರ್ಕಾರ ಅಂತಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ತಾಕತ್ತು, ಧಮ್ಮು ಬಗ್ಗೆ ಮಾತಾಡ್ತಾರೆ. ನಮ್ಮ ಸಿಎಂ ಬೊಮ್ಮಾಯಿಗೆ ನಿಜವಾಗಿಯೂ ತಾಕತ್ತು, ಧಮ್ಮ ಇದ್ದರೆ ಕಲಬುರಗಿಗೆ ಬರಲಿ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಶಾಸಕ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು. ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರ ಆದಾಯ ದುಪ್ಪಟ್ಟು ಮಾಡೋದಾಗಿ ಭರವಸೆ ನೀಡಿದ್ರು. ಆದ್ರೆ ರೈತರ ಆದಾಯ ಮಾತ್ರ ದುಪ್ಪಟ್ಟಾಗಿಲ್ಲವೆಂದು ಕಿಡಿಕಾರಿದ್ರು. ರೈತರಿಗೆ ಬೆಳೆ ಹಾನಿ ಪರಿಹಾರ ನೀಡದಿರೋದನ್ನು ವಿರೋಧಿಸಿ ನಗರದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಶಾಸಕ ಪ್ರಿಯಾಂಕ ಖರ್ಗೆ ನೇತೃತ್ವದಲ್ಲಿ ನೆಟೆ ರೋಗದಿಂದ ಒಣಗಿರುವ ತೊಗರಿಯನ್ನು ಟ್ರಾಕ್ಟರ್ನಲ್ಲಿ ಹಾಕಿಕೊಂಡು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ರಕ್ತದಲ್ಲಿ ನಾನು ಪತ್ರ ಬರೆದಿದ್ದಕ್ಕೇ ಮಹದಾಯಿ ಕಾಮಗಾರಿ ಆರಂಭ: ಸಿಎಂ ಬೊಮ್ಮಾಯಿ
ಈ ಕುರಿತು ಬುಧವಾರ ಮಾತನಾಡಿದ ಅವರು, ಕಲಬುರ್ಗಿಗೆ ಬಂದು ಇಲ್ಲಿನ ನಮ್ಮ ರೈತರನ್ನು ಎದುರಿಸಲಿ, ಬೆಳೆ ಹಾನಿ ಸಮೀಕ್ಷೆ ಮಾಡಿಸಲಿ ಎಂದರು. ಇನ್ನೂ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಡಾ. ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸುವ ಮೂಲಕ ರೈತರ ಆದಾಯವನ್ನು ದುಪ್ಟಟ್ಟು ಮಾಡುವುದಾಗಿ ಹೇಳಿತ್ತು. ಆದರೆ ಇಂದಿಗೂ ರೈತರ ಆದಾಯ ದುಪ್ಪಟ್ಟು ಆಗಿಲ್ಲ. ರೈತರ ಆತ್ಮಹತ್ಯೆ ಪ್ರಕರಣಗಳು ಮಾತ್ರ ದುಪ್ಪಟ್ಟಾಗಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.
ಕಲಬುರಗಿ ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿವೃಷ್ಠಿಯಿಂದ ಹಾಗೂ ತೊಗರಿ ಬೆಳೆಗೆ ನೆಟೆ ರೋಗ ಬಂದಿರುವುದರಿಂದ ಈ ಬಾರಿ ಬಿತ್ತನೆ ಮಾಡಿರುವ ಶೇ. 70ರಷ್ಟು ತೊಗರಿ ಬೆಳೆ ಸಂಪೂರ್ಣ ನಾಶವಾಗಿದೆ. ಈ ಕುರಿತು ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಹಾನಿಯಾದ ತೊಗರಿ ಬೆಳೆಯ ಕುರಿತು ಸಮೀಕ್ಷೆ ನಡೆಸಿ, ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ಜಿಲ್ಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಆದರೆ ಜಿಲ್ಲೆಯ ಬಿಜೆಪಿ ನಾಯಕರು ಮಾತ್ರ ಇಲ್ಲಿಯವರೆಗೆ ಜಿಲ್ಲೆಯ ರೈತರ ಸಂಕಷ್ಟದ ಕುರಿತು ಧ್ವನಿ ಎತ್ತಿಲ್ಲ ಎಂದು ಕಿಡಿಕಾರಿದರು. ನಮ್ಮ ಜಿಲ್ಲೆಯ ಸ್ಥಳೀಯ ನಾಯಕರಿಗೆ ಮಂತ್ರಿಸ್ಥಾನವನ್ನು ತಗೋಳೋದಿಕ್ಕೆ ಆಗಲಿಲ್ಲ. ರೈತರ ಪರವಾಗಿ ಆದರೂ ಧ್ವನಿ ಎತ್ತಿ. ಅದು ಬಿಟ್ಟು ಕೆರೆ ಒತ್ತುವರಿ ಹೇಗೆ ಮಾಡೋದು, ೪೦ ಪರ್ಸೆಂಟ್ ಹ್ಯಾಂಗ್ ಹೊಡೆಯೋದು, ರೌಡಿಗಳನ್ನು ಬೆಳಸೋದು, ಬೆಟ್ಟಿಂಗ್ ದಂಧೆ ಮಾಡಿಸೋದನ್ನು ಮಾಡ್ತಿದ್ದಾರೆ ಎಂದು ಸ್ಥಳೀಯ ಬಿಜೆಪಿ ನಾಯಕರ ವಿರುದ್ಧ ಶಾಸಕ ಪ್ರಿಯಾಂಕ ಖರ್ಗೆ ವ್ಯಂಗ್ಯವಾಡಿದ್ರು.
ಇನ್ನು ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಬೆಳೆ ಅತಿವೃಷ್ಠಿಯಿಂದ ಹಾಗೂ ನೆಟೆ ರೋಗದಿಂದ ಸಂಪೂರ್ಣ ಹಾಳಾಗಿದೆ. ಆದರೆ ಈ ಕುರಿತು ರಾಜ್ಯ ಸರ್ಕಾರ ಇಲ್ಲಿಯವರಗೆ ಯಾವುದೇ ರೀತಿಯ ಸಮೀಕ್ಷೆಯನ್ನು ನಡೆಸಿಲ್ಲ. ಅಲ್ಲದೆ ರೈತರಿಗೆ ಬೆಳೆ ಹಾನಿ ಪರಿಹಾರವನ್ನು ನೀಡದೆ ಇರುವುದನ್ನು ವಿರೋಧಿಸಿ ಕಲಬುರಗಿಯಲ್ಲಿಂದು ಕಾಂಗ್ರೆಸ್ ಪಕ್ಷದ ಮುಖಂಡರು ಶಾಸಕ ಪ್ರಿಯಾಂಕ ಖರ್ಗೆ ನೇತೃತ್ವದಲ್ಲಿ ನೆಟೆ ರೋಗದಿಂದ ಒಣಗಿರುವ ತೊಗರಿಯನ್ನು ಟ್ರಾಕ್ಟರ್ನಲ್ಲಿ ಹಾಕಿಕೊಂಡು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕಲಬುರಗಿಯ ಕಾಂಗ್ರೆಸ್ ಕಚೇರಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರೈತರ ನೆರವಿಗೆ ಬಾರದ ಈ ಸರ್ಕಾರ ಸತ್ತಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸಮೀಕ್ಷೆ ನಡೆಸಿ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.