BJP MLA Munirathna: ಮುನಿರತ್ನ ಕಂಡರೆ ನಿಮಗೇಕೆ ಇಷ್ಟೊಂದು ಭಯ? ನಿಮ್ಮದು ಸಿಡಿ ಏನಾದರೂ ಇದೆಯೇ?: ಪ್ರಿಯಾಂಕ್ ಖರ್ಗೆ
ಬೆಂಗಳೂರು, ಸೆಪ್ಟೆಂಬರ್ 30: ಬಿಜೆಪಿ ನಾಯಕರು ಮುನಿರತ್ನ ಸಮರ್ಥನೆ ಮಾಡಿಕೊಳ್ಳುವುದನ್ನು ನೋಡಿದರೆ ನಿಮ್ಮದು ಸಿಡಿ ಏನಾದರೂ ಇದೆಯೇ? ನೀವು ನೈತಿಕತೆ ಬಗ್ಗೆ ಮಾತನಾಡುತ್ತೀರಾ? ಮುನಿರತ್ನ ಕಂಡರೆ ನಿಮಗೇಕೆ ಇಷ್ಟೊಂದು ಭಯ? ವೇದಿಕೆ ಮೇಲೆ ದಮ್ಮು, ತಾಕತ್ತು ಎಂದು ಹೇಳಿ ಚುನಾವಣೆ ಸೋತಿರಿ. ಈಗ ನಿಮ್ಮ ಆ ದಮ್ಮು ತಾಕತ್ತು ಎಲ್ಲಿ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿ ಕಾಲದಲ್ಲಿ ದೇವರಾಜ ಅರಸು ಟ್ರಕ್ ಟರ್ಮಿನಲ್ ಹಗರಣದ ಹಣ ದೆಹಲಿ ಹೋಗಿದೆ. ಒಂದು ವಾರದಲ್ಲಿ ಅದನ್ನು ನಿಮ್ಮ ಮುಂದೆ ಇಡುತ್ತೇವೆ. ಛಲವಾದಿ ನಾರಾಯಣಸ್ವಾಮಿ ಅವರ ಬಗ್ಗೆ ಯಾಕೆ ಮೌನ? ಮೇಲ್ಮನೆ ನಾಯಕರು ದಲಿತ ಮಕ್ಕಳಿಗೆ ಶಿಕ್ಷಣ ನೀಡುವುದಾಗಿ ಹೇಳಿ ಬಿರಿಯಾನಿ ಅಂಗಡಿ ತೆರೆದಿದ್ದಾರೆ. ಇದರ ಬಗ್ಗೆ ಬಿಜೆಪಿ ಯಾಕೆ ಮಾತನಾಡುವುದಿಲ್ಲ?

ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ವಿಚಾರ ಮಾತನಾಡುವ ಪ್ರಹ್ಲಾದ್ ಜೋಷಿ ಅವರೇ ನೀವು ಮುನಿರತ್ನ ಅವರ ಪ್ರಕರಣದಲ್ಲಿ ಮೌನವಾಗಿದ್ದು ಯಾಕೆ? ವಿಜಯೇಂದ್ರ ಹಾಗೂ ಅಶೋಕ್ ಅವರು ಮುನಿರತ್ನ ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ. ನಿಮಗೆ ನಾಚಿಕೆಯಾಗುವುದಿಲ್ಲವೇ? ಎಂದು ಪ್ರಶ್ನಿಸಿದರು.
ಕಸದ ಮೇಲೆ ಹಣ ಮಾಡುವಾಗ ದಲಿತರ ನಿಂದನೆ, ಮಹಿಳೆಯರ ನಿಂದನೆ ಮಾಡುವ ವ್ಯಕ್ತಿ, ಹೆಚ್ಐವಿ ಸೋಂಕಿತ ಮಹಿಳೆಯನ್ನು ಬಳಸಿ ಹನಿಟ್ರ್ಯಾಪ್ ಮಾಡಿಸುವ ವ್ಯಕ್ತಿಯನ್ನು ಸಮರ್ಥಿಸಿಕೊಳ್ಳುತ್ತೀರಿ. ಇದೇನಾ ಬಿಜೆಪಿ ಸಂಸ್ಕೃತಿ. ನೀವು ಹಿಂದೂ ಸಂಸ್ಕೃತಿ ರಕ್ಷಣೆ ಮಾಡುತ್ತೀರಾ? ವಿಕಾಸ ಸೌಧದಲ್ಲಿ ಅತ್ಯಾಚಾರ ಮಾಡುತ್ತೀರಾ? ಇದಾ ನಿಮ್ಮ ಸಂಸ್ಕೃತಿ? ನೀವು ಧರ್ಮ ರಕ್ಷರಾ? ಇಂತಹವರನ್ನು ಪಕ್ಷದಿಂದ ಕಿತ್ತು ಬಿಸಾಕಬೇಕು ಎಂದು ಯಾರಾದರೂ ಒಬ್ಬರು ಮಾತನಾಡಿದರಾ? ಎಂದು ಕೇಳಿದರು.
ನಮ್ಮ ವಿರುದ್ಧವೂ ಬಿಜೆಪಿಯವರು ತಮ್ಮ ಕಾರ್ಯಾಚರಣೆ ನಡೆಸಿದ್ದಾರೆ. ನಾವು ಅದಕ್ಕೆಲ್ಲ ಹೆದರುವುದಿಲ್ಲ. ಕರಡಿ ಮೈಮೇಲೆ ಇರುವ ಕೂದಲಿನಷ್ಟು ಆರೋಪ ಹೊಂದಿರುವ ನೀವು ನಮ್ಮ ಬಳಿ ನೈತಿಕತೆ ಬಗ್ಗೆ ಮಾತನಾಡುತ್ತೀರಾ? ಬಿಜೆಪಿಯವರು ರಾಜ್ಯಪಾಲರ ಮೂಲಕ ಏನೆಲ್ಲಾ ಆಟ ಆಡುತ್ತೀರೋ ಆಡಿ ನಾವು ಅದನ್ನು ಕಾನೂನಾತ್ಮಕವಾಗಿ ಎದುರಿಸುತ್ತೇವೆ. ನಾವು ಇದಕ್ಕೆಲ್ಲ ನಾವು ಅಂಜುವುದಿಲ್ಲ. ನಮ್ಮ ಪಕ್ಷ 140 ವರ್ಷಗಳ ಕಾಲ ಹೋರಾಟ ಮಾಡಿಕೊಂಡು ಬಂದಿದ್ದು, ಇನ್ನೂ 140 ವರ್ಷ ಹೋರಾಟ ಮಾಡಿಕೊಂಡು ಸಾಗಲಿದೆ. ನಿಮ್ಮ ತತ್ವ ಸಿದ್ಧಾಂತ ವಿರುದ್ಧ ಹೋರಾಟ ಮಾಡಿಕೊಂಡೆ ನಾವು ಬೆಳೆದಿದ್ದೇವೆ.
ನೈತಿಕತೆ ಬಗ್ಗೆ ಮಾತನಾಡುವ ನಿಮಗೆ ನೈತಿಕತೆ ಇದ್ದರೆ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನು ಪಕ್ಷದಿಂದ ಆಚೆ ಹಾಕಿ. ನಿಮಗೆ ಆ ದಮ್ಮು ತಾಕತ್ತು ಇದೆಯಾ? ನಿರ್ಮಲಾ ಸೀತಾರಾಮನ್, ಅಶೋಕ್, ಮುನಿರತ್ನ ಅವರನ್ನು ವಜಾಗೊಳಿಸಿ. ಆಮೇಲೆ ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ, ಡಿ.ಕೆ. ಶಿವಕುಮಾರ್ ರಾಜೀನಾಮೆ ಕೇಳಿ ಎಂದು ಹೇಳಿದರು.












Click it and Unblock the Notifications