Breaking: ಪ್ರಭಾವಿ ಸಚಿವರ ವಿರುದ್ಧ ಪ್ರಮೋದ್ ಮುತಾಲಿಕ್ ಸ್ಪರ್ಧೆ: ಬಿಜೆಪಿ ನೆಚ್ಚಿಕೊಂಡಿರುವ ಹಿಂದೂ ಮತಗಳಿಗೆ ಕೊಕ್ಕೆ?
ಬೆಂಗಳೂರು, ಜನವರಿ 23: ಈ ಬಾರಿಯ ಕರ್ನಾಟಕ ಚುನಾವಣೆ ಮತ್ತಷ್ಟು ರಂಗ ಪಡೆದುಕೊಳ್ಳುತ್ತಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಹಲವು ಸಾಹಸಗಳಿಗೆ ಕೈ ಹಾಕಿವೆ. ಪ್ರತಿಭಟನೆ, ರ್ಯಾಲಿ, ಸಮಾರಂಭ, ಯಾತ್ರೆ ಹಾಗೂ ಭರವಸೆಗಳ ಅಭಿಯಾನವನ್ನು ಹಮ್ಮಿಕೊಂಡಿವೆ. ಬಿಜೆಪಿ ವಿಜಯ ಯಾತ್ರೆ ನಡೆಸುತ್ತಿದೆ. ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯನ್ನೂ ಮಾಡುತ್ತಿದೆ. ಅದರೊಂದಿಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನೂ ಹಮ್ಮಿಕೊಂಡಿದೆ. ಜೆಡಿಎಸ್ ಪಕ್ಷವು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ ಯಾತ್ರೆಯನ್ನು ಹಮ್ಮಿಕೊಂಡಿದೆ. ಈಗ ಬಿಜೆಪಿ ಆಡಳಿತ ವಿರೋಧಿ ಅಲೆಯೊಂದಿಗೆ, ಹಿಂದುತ್ವವಾದಿಗಳ ಆಕ್ರೋಶವನ್ನು ಎದುರಿಸಬೇಕಾಗಿ ಬಂದಿದೆ. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ವಿವಾದಿತ ಹಿಂದುತ್ವವಾದಿ ಪ್ರಮೋದ್ ಮುತಾಲಿಕ್ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇದು ಜನರ ಕುತೂಹಲವನ್ನು ಇಮ್ಮಡಿಗೊಳಿಸಿದೆ.
ಮುತಾಲಿಕ್ ಅವರು ಈ ಹಿಂದೆ ಬಿಜೆಪಿ ಸೇರ್ಪಡೆಗೊಂಡಿದ್ದರು. ಇದು ಬಾರಿ ವಿವಾದಕ್ಕೆ ಕಾರಣವಾಗಿತ್ತು. ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದವು. ಮುತಾಲಿಕ್ ಸೇರ್ಪಡೆಗೊಂಡ ಒಂದೇ ದಿನದಲ್ಲಿ ಅವರನ್ನು ಪಕ್ಷದಿಂದ ಹೊರಹಾಕಲಾಯಿತು. ಅಂದಿನಿಂದಲೂ ಮುತಾಲಿಕ್ ಬಿಜೆಪಿ ವಿರುದ್ಧ ಹರಿಹಾಯುತ್ತಲೇ ಬಂದಿದ್ದಾರೆ. ಅವರು ಈ ಹಿಂದೆ ವಿಧಾನಸಭೆ ಚುನಾವಣೆ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಸೋತಿದ್ದರು.
ಈ ಬಾರಿಯ ಚುನಾವಣೆಯಲ್ಲಿಯೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುತಾಲಿಕ್ ಮುಂದಾಗಿದ್ದಾರೆ. ಅವರು ರಾಜ್ಯದ ಆರು ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿದ್ದಾರೆ. ಅಂತಿಮವಾಗಿ ಬಿಜೆಪಿಯ ಪ್ರಭಾವಿ ಸಚಿವ ಸುನೀಲ್ ಕುಮಾರ್ ಕ್ಷೇತ್ರವಾದ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ. ಇದು ಬಿಜೆಪಿಗೆ ಇರುಸುಮುರುಸು ಉಂಟು ಮಾಡಿರುವುದಲ್ಲದೇ, ಹಿಂದೂ ಮತಗಳಿಗೆ ಅಡ್ಡಿಯಾಗಲಿದೆ ಎಂಬ ಮಾತುಗಳೂ ಕೇಳಿ ಬಂದಿವೆ. ವಿವಾದಿತ ಹೇಳಿಕೆಯಿಂದ ಪ್ರಚಾರದಲ್ಲಿರುವ ಮುತಾಲಿಕ್ ಹಿಂದೆ ಕರಾವಳಿ ಭಾಗದ ಹಿಂದೂತ್ವವಾದಿ ಯುವಕರ ಪಡೆಯೇ ಇದೆ. ಹೀಗಾಗಿ, ಮುತಾಲಿಕ್ ಗೆಲ್ಲದೇ ಹೋದರೂ, ಹಿಂದೂ ಮತಗಳಿಗೆ ಕೊಕ್ಕೆ ಆಗಲಿದ್ದಾರೆ ಎಂಬ ವಿಶ್ಲೇಷಣೆಗಳು ಹರಿದಾಡುತ್ತಿವೆ.
2018 ರಲ್ಲಿ, ಕಾರ್ಕಳ ಕ್ಷೇತ್ರದಿಂದ ಬಿಜೆಪಿಯ ಸುನೀಲ್ ಕುಮಾರ್ ಅವರು ಜಯಗಳಿಸಿದ್ದರು. ಕಾರ್ಕಳ ಕ್ಷೇತ್ರವು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯಲ್ಲಿ ಬರುತ್ತದೆ
ಸುನಿಲ್ ಕುಮಾರ್ ಅವರು ಕಾಂಗ್ರೆಸ್ನ ಗೋಪಾಲ ಭಂಡಾರಿ ಅವರನ್ನು 42566 ಮತಗಳ ಅಂತರದಿಂದ ಸೋಲಿಸುವ ಮೂಲಕ ಅಭೂತಪೂರ್ವ ಜಯವನ್ನು ಸಾಧಿಸಿದ್ದರು.
ಕಾರ್ಕಳ ವಿಧಾನಸಭಾ ಕ್ಷೇತ್ರವು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಜನತಾ ದಳದ (ಜಾತ್ಯತೀತ) ಪ್ರಮೋದ್ ಮಧ್ವರಾಜ್ ಅವರನ್ನು ಸೋಲಿಸುವ ಮೂಲಕ 349599 ಮತಗಳ ಅಂತರದಿಂದ ಗೆದ್ದಿದ್ದಾರೆ.