Prajwal Revanna Case: ಸಂತ್ರಸ್ತೆಯಿಂದ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ: ಪರಮೇಶ್ವರ
ಬೆಂಗಳೂರು, ಮೇ 03: ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯೊಬ್ಬರಿಂದ ನ್ಯಾಯಾಧೀಶರ ಮುಂದೆ ಹೇಳಿಕೆ ಕೊಡಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆಯೊಬ್ಬರು ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ. ಎಸ್ಐಟಿಯವರು ಒತ್ತಾಯಪೂರ್ವಕವಾಗಿ ಆಕೆಯಿಂದ ಸ್ಟೇಟ್ಮೆಂಟ್ ಪಡೆದುಕೊಂಡಿದ್ದಾರೆ ಎಂಬ ಆರೋಪ ಯಾರಿಂದಲೂ ಬಾರದು. ಹೀಗಾಗಿ ಮ್ಯಾಜಿಸ್ಟ್ರೇಟ್ ಮುಂದೆಯೇ 164 ಅಡಿ ಹೇಳಿಕೆ ಕೊಡಿಸಲಾಗಿದೆ ಎಂದರು.

ಪ್ರಜ್ವಲ್ ರೇವಣ್ಣಗೆ 41A ಅಡಿಯಲ್ಲಿ ನೋಟಿಸ್ ಕೂಡಲಾಗಿದೆ. ಪ್ರಜ್ವಲ್ ಪರ ವಕೀಲ ಕಾಲಾವಕಾಶ ಕೇಳಿದ್ದಾರೆ. ಇದಕ್ಕೆ ಅವಕಾಶವಿಲ್ಲ ಎಂಬುದನ್ನು ತಿಳಿಸಿದ್ದೇವೆ. ರೇವಣ್ಣಗೂ ಕೂಡ 41A ಅಡಿ ನೊಟೀಸ್ ನೀಡಲಾಗಿದೆ. ರೇವಣ್ಣ ಸಹ 24 ಗಂಟೆ ಕಾಲಾವಕಾಶ ಕೇಳಿದ್ದಾರೆ. ಕಾನೂನು ಪ್ರಕಾರ ಮತ್ತೊಂದು ನೊಟೀಸ್ ನೀಡಿದ್ದೇವೆ. ಇದಕ್ಕೆ ಸ್ಪಂದಿಸದಿದ್ದರೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಜ್ವಲ್ ರೇವಣ್ಣ ಕುರಿತು ಲುಕ್ ಔಟ್ ನೊಡೀಸ್ ಹೊರಡಿಸಲಾಗಿದೆ. ಎಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಫೋಟೋ ಸಮೇತ ನೊಟೀಸ್ ಕಳುಹಿಸಲಾಗಿದೆ. ನಿಯಮಾನುಸಾರದ ಪ್ರಕಾರವೇ ಲುಕ್ ಔಟ್ ನೊಟೀಸ್ ನೀಡಿದ್ದೇವೆ ಎಂದು ಹೇಳಿದರು.
ರೇವಣ್ಣ ಅವರ ಮನೆ ಮೇಲೆ ಎಸ್ಐಟಿ ದಾಳಿ ನಡೆಸಿರುವುದು ಗೊತ್ತಿಲ್ಲ. ಪ್ರಜ್ವಲ್ ರೇವಣ್ಣ ದುಬೈಗೆ ಹೋಗಿರುವುದು ಗೊತ್ತಿಲ್ಲ. ಜರ್ಮನಿಗೆ ಹೋಗಿದ್ದಾರೆ ಎಂಬ ಮಾಹಿತಿ ಇದೆ. ಜರ್ಮನಿಯಿಂದಕರೆತರಲು ಕೇಂದ್ರದ ನೆರವು ಬೇಕು. 2ನೇ ನೋಟಿಸ್ಗೂ ಸ್ಪಂದಿಸದಿದ್ದರಡ ಮುಂದಿನ ತೀರ್ಮಾನ ಏನು ಎಂಬುದನ್ನು ಎಸ್ಐಟಿಯವರು ಕೈಗೊಳ್ಳುತ್ತಾರೆ ಎಂದು ಹೇಳಿದರು.
ರಾಜಕೀಯ ಟೀಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ನನಗೆ ಒಂದಷ್ಟು ಜವಾಬ್ಧಾರಿಗಳಿವೆ. ಹಾಗಾಗಿ, ರಾಜಕೀಯ ಪ್ರತಿಕ್ರಿಯೆ ನೀಡುವುದಿಲ್ಲ. ಹೆಚ್.ಡಿ.ಕುಮಾರಸ್ವಾಮಿ ಅವರು ಯಾವ ಅಧಾರದ ಮೇಲೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಇದಕ್ಕೆಲ್ಲ ಮುಖ್ಯಮಂತ್ರಿಯವರು, ಪಕ್ಷದ ಅಧ್ಯಕ್ಷರು ಉತ್ತರಿಸುತ್ತಾರೆ ಎಂದರು.












Click it and Unblock the Notifications