Prajwal Revanna: ವೋಟ್ ಹಾಕಿ ಎಸ್ಕೆಪ್... ಎಲೆಕ್ಷನ್ ಪ್ರಚಾರ ಮುಗಿದ ತಕ್ಷಣ ಹಾಜರ್.. ಏನಿದು ಪ್ರಜ್ವಲ್ ಗಿಮಿಕ್!?
ಬೆಂಗಳೂರು, ಮೇ. 28: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮೇಲೆ ಲೈಂಗಿಕ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿ ಬಂದ ತಕ್ಷಣ ದೇಶದಿಂದ ಪಲಾಯನ ಮಾಡಿದ್ದರು. ಈಗ ಒಂದು ತಿಂಗಳ ಬಳಿಕ ತಾನು ಮೇ 31 ರಂದು ವಿಶೇಷ ತನಿಖಾ ತಂಡದ (ಎಸ್ಐಟಿ) ಮುಂದೆ ಹಾಜರಾಗುವುದಾಗಿ ಘೋಷಿಸಿದ್ದಾರೆ.
ಜೆಡಿಎಸ್ ಅಮಾನತು ಮಾಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸರಿಯಾಗಿ ದೇಶದಿಂದ ಪಲಾಯನ ಮಾಡಿದ ಒಂದು ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಅವರು ವಿಡಿಯೋ ಬಿಡುಗಡೆ ಮಾಡಿ ತಾವು ಮೇ 31 ರಂದು ಎಸ್ಐಟಿ ಮುಂದೆ ಹಾಜರಾಗುವುದಾಗಿ ಹೇಳಿದ್ದಾರೆ. ಜೊತೆಗೆ ತನಗೆ ಕಾನೂನಿನ ಮೇಲೆ ಗೌರವವಿದ್ದು, ಇವೆಲ್ಲಾ ನನ್ನ ವಿರುದ್ಧ ಮಾಡಿರುವ ಸುಳ್ಳು ಆರೋಪಗಳು ಎಂದೂ ಹೇಳಿಕೊಂಡಿದ್ದಾರೆ. ಆದರೆ, ಈ ಎಲ್ಲಾ ಕ್ರೊನಾಲಜಿನ ಅರ್ಥ ಮಾಡಿಕೊಳ್ಳುವುದಾದರೆ ಇಲ್ಲೊಂದು ಎಲೆಕ್ಷನ್ ಕ್ಯಾಲೆಂಡರ್ ಇದೆ ಎಂಬುದು ಅರ್ಥವಾಗುತ್ತದೆ.

ಏನಿದು ಪ್ರಜ್ವಲ್ ರೇವಣ್ಣ ಎಲೆಕ್ಷನ್ ಕ್ಯಾಲೆಂಡರ್?
ಎಸ್... ಬಿಜೆಪಿ ಜೆಡಿಎಸ್ ಮೈತ್ರಿಯ ಹಾಸನ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ಅವರ ವಿಡಿಯೋಗಳು ಎಂದು ಕಳೆದ ಮೂರು ನಾಲ್ಕು ತಿಂಗಳುಗಳಿಂದ ಹಾಸನದಲ್ಲಿ ಪೆನ್ಡ್ರೈವ್ಗಳು ಓಡಾಡುತ್ತಿದ್ದವು. ಆದರೆ, ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಇನ್ನೇರಡು ದಿನ ಬಾಕಿ ಇರುವಾಗ ಇದು ದೊಡ್ಡ ಸುದ್ದಿಯಾಯಿತು. ಆದರೆ, ಮುಖ್ಯವಾಹಿನಿಯ ಮಾಧ್ಯಮಗಳಿಗೆ ಕಾನೂನಿನ ತಡೆ ಇದ್ದ ಕಾರಣ ಅವು ಸುದ್ದಿ ಮಾಡಿರಲಿಲ್ಲ.
ಮರುದಿನ ಚುನಾವಣೆ ಮುಗಿದ ತಕ್ಷಣ ಪ್ರಜ್ವಲ್ ರೇವಣ್ಣ ಪರಾರಿಯಾಗಿದ್ದರು!. ಮತದಾನ ಮುಗಿಯುವವರೆಗೂ ಇದ್ದ ಅವರು ಕರ್ನಾಟಕದಲ್ಲಿ ಚುನಾವಣೆ ಮುಗಿದ ತಕ್ಷಣ ಪಲಾಯನ ಮಾಡಿದ್ದರು. ಈಗ ದೊಡ್ಡ ಸುದ್ದಿಯಾಗಿ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮಾನ ಹರಾಜಾದ ಬಳಿಕ ಬರೋಬ್ಬರಿ ಒಂದು ತಿಂಗಳ ಬಳಿಕ ಬರುವ ಮಾತನಾಡಿದ್ದಾರೆ.
ಪ್ರಚಾರ ಮುಗಿದ ಬಳಿಕ ದೇಶಕ್ಕೆ ಪ್ರಜ್ವಲ್ ಎಂಟ್ರಿ!
ಮೇ 31 ರಂದು ಕರ್ನಾಟಕ ಸರ್ಕಾರದ ಎಸ್ಐಟಿ ಮುಂದೆ ಹಾಜರಾಗುವುದಾಗಿ ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇಲ್ಲಿ ಗಮನಿಸಬೇಕಿರುವುದು 2024 ರ ಲೋಕಸಭಾ ಚುನಾವಣೆಯ ಪ್ರಚಾರವು ಮೇ 30 ರಂದು ಕೊನೆಗೊಳ್ಳುತ್ತದೆ ಎಂಬುದು. ಹೌದು... ಅದಕ್ಕೂ ಮುನ್ನ ಅವರು ದೇಶಕ್ಕೆ ಕಾಲಿಟ್ಟಿದ್ದರೇ ಅದನ್ನು ಪ್ರತಿಪಕ್ಷಗಳು ತನ್ನ ಚುನಾವಣಾ ಭಾಷಣಗಳಲ್ಲಿ ಮುಖ್ಯ ವಿಷಯವನ್ನಾಗಿಸುತ್ತಿದ್ದವು. ಅದರಿಂದ ತಪ್ಪಿಸಿಕೊಳ್ಳಲು ಈ ಪ್ರಯತ್ನ.

ಕರ್ನಾಟಕದಲ್ಲಿ ಎರಡನೇ ಹಂತದ ಮತದಾನದಲ್ಲಿ ಮತ ಚಲಾಯಿಸಿ, ಅದೇ ದಿನ ಓಡಿಹೋದ ಅವರು, ದೇಶದಲ್ಲಿ ಚುನಾವಣೆ ಮುಗಿದ ಬಳಿಕ ವಾಪಸ್ಸಾಗುತ್ತಿದ್ದಾರೆ. ಇದೊಂದು ಮಟ್ಟದ ಸೇಫ್ ಗೇಮ್ ಎನ್ನಬಹುದು. ಅಥವಾ ಪ್ರಜ್ವಲ್ ರೇವಣ್ಣ ಅವರ ಎಲೆಕ್ಷನ್ ಕ್ಯಾಲೆಂಡರ್ ಕೂಡ ಎಂದರೆ ತಪ್ಪಾಗಲ್ಲ. ಈ ಕ್ಯಾಲೆಂಡರ್ ಆಧರಿಸಿಯೇ ಎಲ್ಲವೂ ನಿರ್ಧಾರವಾಗುತ್ತಿದೆ.
ಇನ್ನು, ಈಗಾಗಲೇ ಪ್ರಜ್ವಲ್ ರೇವಣ್ಣ ಮತ್ತು ಅವರ ತಂದೆ ಶಾಸಕ ಎಚ್ ಡಿ ರೇವಣ್ಣ ವಿರುದ್ಧ ಪ್ರಕರಣಗಳು ದಾಖಲಾಗಿವೆ. ರೇವಣ್ಣ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಬೇಗ ದೇಶಕ್ಕೆ ಬರಬೇಕು ಎಂದು ಮೊಮ್ಮಗ ಪ್ರಜ್ವಲ್ಗೆ ಎಚ್ಚರಿಕೆ ನೀಡಿದ್ದರು. ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕೂಡ ಎಸ್ಐಟಿ ಮುಂದೆ ಹಾಜರಾಗುವಂತೆ ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಪ್ರಜ್ವಲ್ ದೇಶಕ್ಕೆ ವಾಪಸ್ ಬರುವ ನಿರ್ಧಾರ ಮಾಡಿದ್ದಾರೆ.












Click it and Unblock the Notifications