ವಿದ್ಯುತ್ ದರ ಏರಿಕೆ ಶಾಕ್ ಎದುರಿಸಲು ಸಿದ್ಧರಾಗಿ

ಲೋಕಸಭೆ ಚುನಾವಣೆಗೂ ಮೊದಲು ರಾಜ್ಯದ ಎಲ್ಲ ಐದು ವಿದ್ಯುತ್ ವಿತರಣಾ ಕಂಪನಿಗಳು (ಎಸ್ಕಾಂ)ಗಳು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ ಸಿ)ಗೆ ದರ ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದವು. ಆಗ ಚುನಾವಣೆ ಬಂದ ಕಾರಣ ಈ ಪ್ರಸ್ತಾವನೆ ಜಾರಿಯಾಗಿರಲಿಲ್ಲ. ಸದ್ಯ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಪರಿಷ್ಕೃತ ದರ ಪಟ್ಟಿ ಪ್ರಕಟಿಸಲು ಸಿದ್ಧತೆ ನಡೆಸಲಾಗುತ್ತಿದೆ. [ವಿದ್ಯುತ್ ದರ ಏರಿಕೆ ಮಾಡಿ : ಎಸ್ಕಾಂ]
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಸೋಮವಾರ ವಿದ್ಯುತ್ ದರ ಹೆಚ್ಚಳದ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುತ್ತಿದೆ. ಲೋಕಸಭೆ ಚುನಾವಣೆಗೆ ಮತದಾನ ಮಗಿದಿದ್ದು, ಫಲಿತಾಂಶ ಪ್ರಕಟವಾದ ನಂತರ ವಿದ್ಯುತ್ ದರ ಹೆಚ್ಚಳ ಮಾಡಲು ಅವಕಾಶ ಮಾಡಿಕೊಡಬೇಕೆಂದು ವಿದ್ಯುತ್ ಕಂಪನಿಗಳು ನಿಯಂತ್ರಣ ಆಯೋಗಕ್ಕೆ ಮತ್ತೊಮ್ಮೆ ಮನವಿ ಸಲ್ಲಿಸಿವೆ.[ವಿದ್ಯುತ್ ಬಿಲ್ ವ್ಯವಸ್ಥೆ ಮತ್ತಷ್ಟು ಹೈಟೆಕ್]
ಪ್ರಸ್ತಾವನೆಯಲ್ಲೇನಿದೆ : ಎಸ್ಕಾಂಗಳು ಪ್ರತಿ ವಿದ್ಯುತ್ ದರವನ್ನು ಪ್ರತಿ ಯೂನಿಟ್ಗೆ ಸರಾಸರಿ 66 ಪೈಸೆ ಹೆಚ್ಚಳ ಮಾಡಬೇಕು ಎಂದು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ದರ ಹೆಚ್ಚಳಕ್ಕೆ ಸಮರ್ಥನೆ ನೀಡಿರುವ ಎಸ್ಕಾಂಗಳು ಸದ್ಯ 61,705 ಮಿ.ಯೂ. ವಿದ್ಯುತ್ ಪೂರೈಕೆ ಮಾಡುತ್ತಿದ್ದೇವೆ. ಮುಂದಿನ ವರ್ಷದಲ್ಲಿ 62,959 ಮಿ.ಯೂ. ವಿದ್ಯುತ್ ಪೂರೈಸುವ ಗುರಿ ಹೊಂದಿದ್ದೇವೆ. ಆದ್ದರಿಂದ, ಈಗಿನ ದರದಲ್ಲಿ ನಮಗೆ ನಷ್ಟ ಉಂಟಾಗಲಿವೆ ಎಂದು ತಿಳಿಸಿವೆ.
ರೈತರ ಪಂಪ್ಸೆಟ್ಗಳು, ಸರ್ಕಾರದ ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ಯೋಜನೆ ಗ್ರಾಹಕನ್ನು ಹೊರತುಪಡಿಸಿ, ಇತರ ಎಲ್ಲ ಗ್ರಾಹಕರಿಗೆ ಅನ್ವಯವಾಗುವಂತೆ ದರ ಪರಿಷ್ಕರಣೆ ಮಾಡಲು ಅನುಮತಿ ನೀಡಬೇಕು ಎಂದು ಮನವಿ ಮಾಡಲಾಗಿದೆ. ಕೆಇಆರ್ ಸಿಯು ಈ ಪ್ರಸ್ತಾವನೆ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.












Click it and Unblock the Notifications