ಅಧಿವೇಶನದಲ್ಲಿ ವಿದ್ಯುತ್ ದರ ಏರಿಕೆ ಸುಳಿವು ನೀಡಿದ ಡಿಕೆಶಿ!
ಇಂಧನ ಸಚಿವ ಡಿಕಿಶಿ ಅವರು ಮಂಗಳವಾರ ಅಧಿವೇಶದಲ್ಲಿ ವಿದ್ಯುತ್ ದರ ಏರಿಕೆ ಸುಳಿವನ್ನು ನೀಡಿದ್ದಾರೆ. ಆದ್ದರಿಂದ ಇನ್ನು ಕೆಲ ದಿನಗಳಲ್ಲಿ ವಿದ್ಯುತ್ ದರ ಏರಿಕೆಯಾಗುವ ಸಂಭವವಿದೆ.ದರ ಹೆಚ್ಚಳದ ಪ್ರಸ್ತಾವನೆಯನ್ನು ಸರ್ಕಾರ ಕೆಇಆರ್ ಸಿಗೆ ಸಲ್ಲಿಸಿದೆ.
ಬೆಂಗಳೂರು, ಫೆಬ್ರವರಿ. 07 : ಕರ್ನಾಟಕ ಸರ್ಕಾರ ವಿದ್ಯುತ್ ದರ ಹೆಚ್ಚಳ ಮಾಡಲು ತೀರ್ಮಾನ ಕೈಗೊಂಡಿದೆ. ಪ್ರತಿ ಯುನಿಟ್ ಗೆ 1 ರೂ. 48 ಪೈಸೆ ಹೆಚ್ಚಳಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಂಗಳವಾರ ಅಧಿವೇಶನದಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ದರ ಹೆಚ್ಚಳದ ಪ್ರಸ್ತಾವನೆಯನ್ನು ಸರ್ಕಾರ ಸಲ್ಲಿಸಿದ್ದು, ಕೆಲವೇ ದಿನಗಳಲ್ಲಿ ದರ ಹೆಚ್ಚಳದ ಆದೇಶ ಪ್ರಕಟಗೊಳ್ಳಲಿದೆ.
ಜೆಡಿಎಸ್ ಪಕ್ಷದ ಅಪ್ಪಾಜಿಗೌಡ ಪ್ರಶ್ನೆಗೆ ಉತ್ತರ ನೀಡಿದ ಡಿ.ಕೆ.ಶಿವಕುಮಾರ್, 'ಬೆಸ್ಕಾಂ, ಜೆಸ್ಕಾಂ, ಮೆಸ್ಕಾಂ ಸೇರಿದಂತೆ ಐದು ವಿದ್ಯುತ್ ಸರಬರಾಜು ಕಂಪನಿಗಳಲ್ಲಿಯೂ ದರ ಹೆಚ್ಚಳ ಮಾಡಲಾಗುತ್ತದೆ' ಎಂದರು.
'ವಿದ್ಯುತ್ ದರ ಹೆಚ್ಚಳ ಅನಿವಾರ್ಯವಾಗಿದೆ. ಎಸ್ಕಾಂಗಳ ಆದಾಯ ಮತ್ತು ವೆಚ್ಚ ಸರಿದೂಗಿಸಲು ದರ ಹೆಚ್ಚಳ ಮಾಡಲಾಗುತ್ತಿದೆ' ಎಂದು ಸಚಿವರು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
2016ರ ಮಾರ್ಚ್ ನಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಲಾಗಿತ್ತು. ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂ ಮತ್ತು ಚೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ಗೆ 48 ಪೈಸೆ, ರಾಜ್ಯದಲ್ಲಿ ಶೇ 9ರಷ್ಟು ದರ ಹೆಚ್ಚಳವಾಗಿತ್ತು.