ವಿದ್ಯುತ್ತಿಗಾಗಿ 5100 ಕೋಟಿ ರೂ ಕಾಮಗಾರಿ: ಡಿಕೆಶಿ
ಬೆಂಗಳೂರು, ಮೇ 28: ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ತಮ್ಮ ಇಲಾಖೆಯ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಬೃಹತ್ ಪ್ರಮಾಣದಲ್ಲಿ 244 ಕಾಮಗಾರಿಗಳಿಗೆ ಅಸ್ತು ಅಂದಿದ್ದಾರೆ. ಸುಮಾರು 5,100 ಕೋಟಿ ರೂ ವೆಚ್ಚದಲ್ಲಿ ಮೂಲಸೌಕರ್ಯಕ್ಕೆ ಸಂಬಂಧಪಟ್ಟ ಈ ಕಾಮಗಾರಿಗಳಿಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಗ್ರಾಹಕರಿಗೆ ಉತ್ತಮ ಸೌಲಭ್ಯ ಕಲ್ಪಿಸಲು ಈ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ 3,100 ಮೆಗಾವ್ಯಾಟ್ ವಿದ್ಯುತ್ತನ್ನು ವಿದ್ಯುತ್ ಜಾಲಕ್ಕೆ ಸೇರಿಸಲಾಗುವುದು. 1,320 ಸರ್ಕ್ಯೂಟ್ ಕಿಮೀ ಉದ್ದದ 400 ಕೆವಿ ಜೋಡಿ ಪ್ರಸರಣ ಮಾರ್ಗ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಅದಕ್ಕಾಗಿ ವಿದ್ಯುತ್ ಸ್ವೀಕರಣಾ ಕೇಂದ್ರಗಳನ್ನು ಗುಲ್ಬರ್ಗ, ಚಿಕ್ಕನಾಯಕನಹಳ್ಳಿ ಮತ್ತು ಬಳ್ಳಾರಿಯಲ್ಲಿ 3,000 ಕೋಟಿ ರೂ ಅಂದಾಜಿನಲ್ಲಿ ನಿರ್ಮಿಸಲಾಗುವುದು ಎಂದು ಅವರು ವಿವರಿಸಿದರು.
ಬೆಂಗಳೂರಿನಲ್ಲಿ ವಿದ್ಯುತ್ ಮತ್ತು ಪ್ರಸರಣ ಸಾಮರ್ಥ್ಯ ಹೆಚ್ಚಿಸಲು 2,097 ಕೋಟಿ ರೂ ವೆಚ್ಚದಲ್ಲಿ ನಾನಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹೊಸ ಮಾರ್ಗಗಳನ್ನು ನಿರ್ಮಿಸಲು ನಗರದಲ್ಲಿ ಸಾಧ್ಯವಿಲ್ಲದ ಕಾರಣ ೀಗಿರುವ ಮಾರ್ಗಗಳನ್ನು ಉನ್ನತೀಕರಿಸಲಾಗುವುದು ಎಂದು ಸಚಿವ ಶಿವಕುಮಾರ್ ಹೇಳಿದ್ದಾರೆ.
ಉತ್ತರ, ಪೂರ್ವ ಮತ್ತು ಪಶ್ಚಿಮ ಜಾಲವನ್ನು ದಕ್ಷಿಣ ವಲಯದ ಗ್ರಿಡ್ ಗಳಿಗೆ ಸಂಪರ್ಕ ಕಲ್ಪಿಸಲು 765 ಕೆವಿ ಪ್ರಸರಣ ಮಾರ್ಗವನ್ನು ತುಮಕೂರು ಬಳಿ ನಿರ್ಮಿಸಲಾಗುತ್ತಿದೆ. ಇದರಿಂದ ಈಶಾನ್ಯ ರಾಜ್ಯಗಳಿಂದ ಅಗ್ಗದ ದರದಲ್ಲಿ ವಿದ್ಯುತ್ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದಕ್ಕಾಗಿ 100 ಕೋಟಿ ರೂ ಅಂದಾಜು ವೆಚ್ಚದಲ್ಲಿ 160 ಸರ್ಕ್ಯೂಟ್ ಕಿಮೀ ಉದ್ದದ 220 ಕೆವಿ ಪ್ರಸರಣ ಮಾರ್ಗ ನಿರ್ಮಿಸಲು ಯೋಜಿಸಲಾಗಿದೆ ಎಂದು ಸಚಿವ ಶಿವಕುಮಾರ್ ಹೇಳಿದರು.
ವಿದ್ಯುತ್ ಜಾಲದ ವೈಫಲ್ಯ ತಡೆಗಟ್ಟುವ ರಕ್ಷಣೋಪಾಯ ಯೋಜನೆಗಾಗಿ 77.46 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ. ಇದಕ್ಕಾಗಿ ಕೇಂದ್ರ ವಿದ್ಯುತ್ ಪ್ರಾಧಿಕಾರ 23 ಕೋಟಿ ರೂ ನೀಡಲಿದೆ ಎಂದರು.
400 ಕೆವಿ ಸಾಮರ್ಥ್ಯದ ವಿದ್ಯುತ್ ಕೇಂದ್ರಗಳನ್ನು ಮತ್ತು ಅದಕ್ಕನುಗುಣವಾಗಿ ಪ್ರಸರಣ ಮಾರ್ಗಗಳನ್ನು ದೋಣಿ (ಗದಗ), ಮುಗಳಖೇಡ (ಬೆಳಗಾವಿ), ಜಗಳೂರು (ಚಿತ್ರದುರ್ಗ) ಮುಖಾಂತರ ಮತ್ತು 400 ಕೆವಿ ಸಾಮರ್ಥ್ಯದ ವಿದ್ಯುತ್ ಕೇಂದ್ರಗಳನ್ನು ಶಿವನಸಮುದ್ರ ಮತ್ತು ಹೊಸದುರ್ಗದಲ್ಲಿ 1,100 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಸಚಿವರು ವಿವರಿಸಿದರು.