Load Shedding: ಲೋಡ್ ಶೆಡ್ಡಿಂಗ್ ಇಲ್ಲ, ಆದರೆ ಕರೆಂಟ್ ಇರಲ್ಲ!
ಬೆಂಗಳೂರು, ಮಾರ್ಚ್ 20: ಒಂದು ಕಡೆ ಬೇಸಿಗೆ ಆರಂಭವಾಗಿ ನೆತ್ತಿ ಸುಡುತ್ತಿದೆ. ಮತ್ತೊಂದು ಕಡೆ ವಿದ್ಯಾರ್ಥಿಗಳು ವಿವಿಧ ಪರೀಕ್ಷೆಗಳನ್ನು ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ ಎಂದು ಇಂಧನ ಸಚಿವ ಕೆ. ಜೆ. ಜಾರ್ಜ್ ಘೋಷಣೆ ಮಾಡಿದ್ದಾರೆ. ಆದರೆ ಕರೆಂಟ್ ಮಾತ್ರ ಇರುವುದಿಲ್ಲ. ಹೌದು ನಿರ್ವಹಣೆ ಕಾಮಗಾರಿಗಾಗಿ ವಿವಿಧೆಡೆ ವಿದ್ಯುತ್ ವ್ಯತ್ಯಯ ಎಂಬುದು ಸಾಮಾನ್ಯವಾಗಿದೆ. ಸರ್ಕಾರ ಘೋಷಣೆ ಮಾಡಿದ ಹಾಗೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ.
ಇಂಧನ ಸಚಿವ ಕೆ. ಜೆ. ಜಾರ್ಜ್ ಕಳೆದ ಎರಡು ಮೂರು ತಿಂಗಳಿನಿಂದ, "ಕೃಷಿಗೆ 7 ತಾಸು ತ್ರಿಫೇಸ್ ವಿದ್ಯುತ್ ಮತ್ತು ಗೃಹ ಬಳಕೆ ಹಾಗೂ ಕೈಗಾರಿಕೆಗೆ ದಿನದ 24 ಗಂಟೆಗಳೂ ವಿದ್ಯುತ್ ಪೂರೈಕೆ ಮಾಡುವುದು ಸರ್ಕಾರದ ನೀತಿಯಾಗಿದ್ದು, ಇದಕ್ಕೆ ಬದ್ದವಾಗಿ ವಿದ್ಯುತ್ ಪೂರೈಸಲಾಗುತ್ತಿದೆ" ಎಂದು ಹೇಳಿದ್ದಾರೆ, ಹೇಳುತ್ತಲೇ ಇದ್ದಾರೆ. ಆದರೆ ವಿದ್ಯುತ್ ಸಮಸ್ಯೆ ರಾಜ್ಯದಲ್ಲಿ ಬಿಗಡಾಯಿದೆ. ಕತ್ತಲೆ ಭಾಗ್ಯ ಎಂದು ಪ್ರತಿಪಕ್ಷಗಳು ಟೀಕೆ ಮಾಡುತ್ತಿವೆ.

"ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ, ಆದರೆ ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ಕೆಲವೇ ಸ್ಥಳಗಳಲ್ಲಿ ಮಾತ್ರ ನಿರ್ವಹಣೆಗಾಗಿ ಕಡಿತ ಮಾಡಲಾಗುತ್ತದೆ. ಆದರೆ ಸರ್ಕಾರದ ಬದ್ದತೆಯಂತೆ ಕೃಷಿಗೆ 7 ಗಂಟೆ ವಿದ್ಯುತ್ ಪೂರೈಕೆ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ, ಆದರೆ ಲೋಡ್ ಶೆಡ್ಡಿಂಗ್ ಜಾರಿಯಲ್ಲಿರುವುದಿಲ್ಲ" ಎಂದು ಇಂಧನ ಸಚಿವರು ಹೇಳಿದ್ದಾರೆ.
ಲೋಡ್ ಶೆಡ್ಡಿಂಗ್ ಇಲ್ಲ: ಇಂಧನ ಸಚಿವರ ಪ್ರಕಾರ, ಸರ್ಕಾರ ಪ್ರಕಾರ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಅಧಿಕೃತವಾಗಿ ಜಾರಿಯಾಗಿಲ್ಲ. ಆದರೆ ಅನಧಿಕೃತ ಲೋಡ್ ಶೆಡ್ಡಿಂಗ್ ಜಾರಿಯಲ್ಲಿದ್ದು, ಬೇಸಿಗೆಯಲ್ಲಿ ವಿದ್ಯುತ್ ಅಭಾವ ಉಂಟಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಯಾವಾಗ ಕರೆಂಟ್ ಬರುತ್ತದೆ?, ಹೋಗುತ್ತದೆ? ಎಂಬುದು ತಿಳಿಯುವುದು ಬಹಳ ಕಷ್ಟವಾಗಿದೆ.
ಇಂಧನ ಇಲಾಖೆ ಅಧಿಕಾರಿಗಳ ಪ್ರಕಾರ ರಾಜ್ಯದಲ್ಲಿ ಪ್ರತಿನಿತ್ಯ 18,500 ಮೆಗಾವ್ಯಾಟ್ ವಿದ್ಯುತ್ಗಾಗಿ ಬೇಡಿಕೆ ಇದೆ. ಬೇಸಿಗೆ ಆರಂಭವಾಗಿರುವುದರಿಂದ ಸರಾಸರಿಗಿಂತ ಶೇ 10ರಷ್ಟು ವಿದ್ಯುತ್ ಬೇಡಿಕೆ ಹೆಚ್ಚಿದೆ. ಆದರೆ ರಾಜ್ಯದಲ್ಲಿ ಯಾವುದೇ ವಿದ್ಯುತ್ ಕೊರತೆ ಇಲ್ಲ, 2024ರಲ್ಲಿ ಉತ್ತಮ ಮಳೆಯೂ ಆಗಿರುವುದರಿಂದ ಡ್ಯಾಂಗಳಲ್ಲಿ ನೀರಿನ ಸಂಗ್ರಹವಿದ್ದು, ಜಲ ವಿದ್ಯುತ್ ಉತ್ಪಾದನೆಯಾಗುತ್ತಿದೆ.
ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚುವುದರಿಂದ ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ವಿದ್ಯುತ್ ಬ್ಯಾಂಕಿಂಗ್ ಮಾಡಿಕೊಂಡು ಜೂನ್ನಿಂದ ಆ ರಾಜ್ಯಗಳಿಗೆ ಕರ್ನಾಟಕದಿಂದ ವಿದ್ಯುತ್ ನೀಡಿ ಬೇಸಿಗೆಯಲ್ಲಿ ಅಲ್ಲಿಂದ ಗ್ರಿಡ್ ಮೂಲಕ ವಿದ್ಯುತ್ ಪಡೆಯಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಧಿಕೃತವಾಗಿ ಸರ್ಕಾರ ಲೋಡ್ ಶೆಡ್ಡಿಂಗ್ ಘೋಷಣೆ ಮಾಡದಿದ್ದರೂ ಸಹ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಬೆಳಗ್ಗೆ 9 ರಿಂದ ಸಂಜೆ 6ರ ತನಕ ತ್ರಿ ಫೇಸ್ ವಿದ್ಯುತ್ ನೀಡುವುದಾಗಿ ಸರ್ಕಾರ ಹೇಳಿದೆ. ಆದರೆ ಬೆಳಗ್ಗೆ 11.15 ರಿಂದ 12ರ ತನಕ, ಮಧ್ಯಾಹ್ನ 3.30 ರಿಂದ 20 ನಿಮಿಷ ವಿದ್ಯುತ್ ಕಡಿತಗೊಳಿಸಲಾಗುತ್ತದೆ. ಇದು ಏಕೆ? ಎಂದರೆ ನಿರ್ವಹಣೆ ಕಾಮಗಾರಿ ಎಂದು ಹೇಳುತ್ತಾರೆ ಎಂದು ಶಿವಮೊಗ್ಗದ ರೈತ ಅಂಜನಪ್ಪ ಹೇಳಿದರು.
ಕರೆಂಟ್ ಇದೆ ಎಂದು ಮೋಟಾರ್ ಆನ್ ಮಾಡಿ ಬಂದರೆ ಯಾವಾಗ ಅದು ಹೋಗಿ ಆಫ್ ಆಗಿರುತ್ತದೆ? ಎಂದು ತಿಳಿಯುವುದು ಅಸಾಧ್ಯ ಎಂಬುದು ರೈತರ ದೂರು. ಮನೆಯಿಂದ ಕೆಲಸ ಮಾಡುವವ ಉದ್ಯೋಗಿಗಳು ಸಹ ನಿರ್ವಹಣೆ ಕಾಮಗಾರಿಗಾಗಿ ವಿದ್ಯುತ್ ಕಡಿತ ಬಿಸಿ ಎದುರಿಸುತ್ತಿದ್ದಾರೆ. ಕೆಲವು ಬಾರಿ ರಾತ್ರಿ ಸಹ ಕರೆಂಟ್ ಹೋಗುತ್ತಿದ್ದು, ವಿದ್ಯಾರ್ಥಿಗಳು ಪರೀಕ್ಷೆಗೆ ಓದಲು ತೊಂದರೆಯಾಗಿದೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, 'ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಕಷ್ಟಗಳು ಕಾಣುವುದಿಲ್ಲ, ಜನಸಾಮಾನ್ಯರ ಬವಣೆ ಕೇಳುವುದೂ ಇಲ್ಲ. ಅಧಿಕಾರಕ್ಕೆ ಬಂದ ದಿನದಿಂದಲೂ ಹಂತ ಹಂತವಾಗಿ ವಿದ್ಯುತ್ ದರ ಏರಿಸಿ ನಾಡಿನ ಜನರಿಗೆ ಬರೆ ಎಳೆಯುತ್ತಿರುವ ಈ ಸರ್ಕಾರ 'ಲೋಡ್ ಶೆಡ್ಡಿಂಗ್' ಮೂಲಕ ರಾಜ್ಯವನ್ನು ಕಗ್ಗತ್ತಲಿಗೆ ತಳ್ಳುತ್ತಿದೆ' ಎಂದು ಆರೋಪಿಸಿದ್ದಾರೆ.
'ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಪರಿತಪಿಸುವಂತೆ ಮಾಡಿರುವ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನಿಲುವು ಅತ್ಯಂತ ಖಂಡನೀಯ. ಗ್ಯಾರಂಟಿ ಜಾತ್ರೆಯಲ್ಲಿ ಮುಳುಗಿ ಅಭಿವೃದ್ಧಿಯೆಡೆಗೆ ಒಂದೇ ಒಂದು ಹೆಜ್ಜೆ ಇಡಲಾರದೆ ವಿದ್ಯುತ್ ಉತ್ಪಾದನಾ ಕ್ಷೇತ್ರದೆಡೆಗೆ ಕಿಂಚಿತ್ತೂ ಆಸಕ್ತಿ ತೋರಲಿಲ್ಲ, ಬಿರು ಬಿಸಿಲಿನ ಝಳ ಏರಿರುವ ಹೊತ್ತಲ್ಲಿ ಲೋಡ್ ಶೆಡ್ಡಿಂಗ್ ಹೇರಿ ನಾಡಿನ ರೈತ ಸಮುದಾಯ ಒಣಗುತ್ತಿರುವ ಬೆಳೆ ಉಳಿಸಿಕೊಳ್ಳಲು ಬೋರ್ವೆಲ್ ಇದ್ದರೂ ಅಸಹಾಯಕರಾಗಿ ಕೂರುವಂತೆ ಮಾಡಿರವುದು ದುರ್ದೈವೇ ಸರಿ' ಎಂದು ಟೀಕಿಸಿದ್ದಾರೆ.
'ಅಧಿಕಾರಕ್ಕೆ ಬಂದು 2 ವರ್ಷಗಳು ಕಳೆದರೂ ಅನ್ನದಾತರನ್ನು ಮೇಲೆತ್ತುವ ಒಂದೇ ಒಂದು ಯೋಜನೆ ರೂಪಿಸಲಿಲ್ಲ ಇನ್ನು ಸಮರ್ಪಕ 3 ಫೇಸ್ ವಿದ್ಯುತ್ ಅನ್ನೂ ಒದಗಿಸಲಾಗುತ್ತಿಲ್ಲ. ನೆರೆಹೊರೆಯ ರಾಜ್ಯಗಳಿಗೆ ವಿದ್ಯುತ್ ಸರಬರಾಜು ಮಾಡುತ್ತಿದ್ದ ನಮ್ಮ ಕರ್ನಾಟಕ, ಕಾಂಗ್ರೆಸ್ ಸರ್ಕಾರದ ಅಸಮರ್ಥ ಆಡಳಿತದಿಂದ ಅಘೋಷಿತ ಲೋಡ್ ಶೆಡ್ಡಿಂಗೆ ಸಿಲುಕುವ ಹಂತಕ್ಕೆ ತಲುಪುತ್ತಿರುವುದು ದುರದೃಷ್ಟಕರ ಸಂಗತಿ' ಎಂದು ಬಿ. ವೈ. ವಿಜಯೇಂದ್ರ ಹೇಳಿದ್ದಾರೆ.












Click it and Unblock the Notifications