ಯಡಿಯೂರಪ್ಪ ಬಳಿ ಹಂಚದೆ ಉಳಿದ ಖಾತೆಗಳು
ಬೆಂಗಳೂರು, ಆಗಸ್ಟ್ 26: ಹದಿನೇಳು ಮಂದಿ ಸಚಿವರಿಗೆ ಇಂದು ಖಾತೆ ಹಂಚಿಕೆ ಮಾಡಿದ್ದು, ಇದೇ ಮೊದಲ ಬಾರಿಗೆ ಮೂರು ಮಂದಿಯನ್ನು ಉಪಮುಖ್ಯಮಂತ್ರಿಗಳನ್ನಾಗಿ ಮಾಡಲಾಗಿದೆ.
ಹಲವು ವಿಶೇಷತೆಗಳು ಖಾತೆಹಂಚಿಕೆಯಲ್ಲಿದ್ದು, ಪ್ರಮುಖ ವ್ಯಕ್ತಿಗಳಿಗೆ ಕಡಿಮೆ ಪ್ರಭಾವಿ ಖಾತೆಗಳು ದೊರೆತಿವೆ. ಅಚ್ಚರಿಯ ರೀತಿಯಲ್ಲಿ ಕೆಲವರಿಗೆ ಪ್ರಭಾವಿ ಖಾತೆಗಳು ದೊರೆತಿವೆ.
ಪ್ರಸ್ತುತ ಹದಿನೇಳು ಸಚಿವರಿಗೆ ಮಾತ್ರವೇ ಖಾತೆ ಹಂಚಿಕೆ ಆಗಿದ್ದು. ಕೆಲವು ಸಚಿವರಿಗೆ ಹೆಚ್ಚುವರಿಗೆ ಖಾತೆಗಳನ್ನು ನೀಡಲಾಗಿದೆ ಮತ್ತು ಇನ್ನೂ ಕೆಲವು ಪ್ರಭಾವಿ ಖಾತೆಗಳು ಸಿಎಂ ಅವರ ಬಳಿಯೇ ಉಳಿದಿವೆ.

ಹಣಕಾಸು, ಇಂಧನ, ಕೃಷಿ, ಬೆಂಗಳೂರು ನಗರಾಭಿವೃದ್ಧಿ, ನಗರಾಭಿವೃದ್ಧಿ, ಸಹಕಾರ ಮತ್ತು ಸಕ್ಕರೆ, ವೈದ್ಯಕೀಯ ಶಿಕ್ಷಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಜಲಸಂಪನ್ಮೂಲ ಖಾತೆ ಖಾತೆಗಳು ಪ್ರಸ್ತುತ ಸಿಎಂ ಯಡಿಯೂರಪ್ಪ ಬಳಿಯೇ ಇವೆ.
ಇದರ ಜೊತೆಗೆ ಕೆಲವು ಸಚಿವರಿಗೆ ಹೆಚ್ಚುವರಿ ಖಾತೆಗಳನ್ನು ನೀಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಖಾತೆ, ಸಣ್ಣ ನೀರಾವರಿ, ಸಮಾಜ ಕಲ್ಯಾಣ ಖಾತೆಗಳನ್ನು ಕ್ರಮವಾಗಿ ಸಿ.ಟಿ.ರವಿ, ಮಾಧುಸ್ವಾಮಿ, ಗೋವಿಂದ ಕಾರಜೋಳ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಹೆಚ್ಚುವರಿ ಖಾತೆಗಳನ್ನು ಮುಂದಿನ ದಿನಗಳಲ್ಲಿ ಹೊಸ ಸಚಿವರಿಗೆ ಬಿಟ್ಟುಕೊಡಬೇಕಾಗುತ್ತದೆ.
ಕೆಲವು ಸಚಿವರಿಗೆ ಎರಡೆರಡು ಖಾತೆಗಳನ್ನು ನೀಡಲಾಗಿದೆ. ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಬಂದರು ಮತ್ತು ಮೀನುಗಾರಿಕೆ ಜೊತೆಗೆ ಮುಜರಾಯಿ ಖಾತೆ ನೀಡಲಾಗಿದೆ. ಅಶ್ವಥ್ನಾರಾಯಣ್ ಅವರಿಗೆ ಉನ್ನತ ಶಿಕ್ಷಣದ ಜೊತೆಗೆ ಐಟಿ-ಬಿಟಿ, ವಿಜ್ಞಾನ ತಂತ್ರಜ್ಞಾನ ಖಾತೆ ನೀಡಲಾಗಿದೆ. ಗುಪ್ತಚರ ಇಲಾಖೆ ಮಾಮೂಲಿನಂತೆ ಗೃಹ ಇಲಾಖೆಯಿಂದ ಹೊರತಾಗಿ ಸಿಎಂ ಅವರ ಬಳಿಯೇ ಉಳಿಯಲಿದೆ.
ಸಚಿವ ಸ್ಥಾನ ಸಿಗದೇ ಅಸಮಾಧಾನ ಹೊರಹಾಕಿರುವ ಬಿಜೆಪಿ ಶಾಸಕರು, ಬಿಜೆಪಿ ಸರ್ಕಾರ ರಚನೆಗೆ ಸಹಾಯ ಮಾಡಿರುವ ಅನರ್ಹ ಶಾಸಕರಿಗೆ ಉಳಿಕೆ ಖಾತೆಗಳನ್ನು ಹಂಚುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications