ಚುನಾವಣಾ ನೀತಿ ಸಂಹಿತೆ ಪ್ರಭಾವ: ರಕ್ತಕ್ಕೆ ಅಭಾವ
ಬೆಂಗಳೂರು, ಏಪ್ರಿಲ್ 27: ರಾಜ್ಯಾದ್ಯಂತ ರಕ್ತ ನಿಧಿಗಳಲ್ಲಿ ರಕ್ತದ ಕೊರತೆ ಉಂಟಾಗಿದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜನಪ್ರತಿನಿಧಿಗಳು ಸಾರ್ವಜನಿಕವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಕ್ಕೆ ತಡೆಬಿದ್ದಿದೆ.
ಇನ್ನು ನಟ ನಟಿಯರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಬೇಸಿಗೆ ರಜೆಯೂ ರಕ್ತದಾನದ ಮೇಲೆ ಪರಿಣಾಮವನ್ನು ಬೀರುತ್ತಿದೆ.
ಬ್ಲಡ್ ಬ್ಯಾಂಕ್ ಗಳಿಂದ ತ್ಯಾಜ್ಯವಾಗೋ ರಕ್ತ 60 ಸಾವಿರ ಲೀ.!
ಗಣ್ಯರ ಹುಟ್ಟುಹಬ್ಬಗಳ ಹೆಸರಿನಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು, ಆರೋಗ್ಯ ಹಾಗೂ ರಕ್ತದಾನ ಶಿಬಿರಗಳು ಯತೇಚ್ಛವಾಗಿ ನಡೆಯುತ್ತಿದ್ದವು. ಆದರೆ ಈಗ ಆ ಸಂಭ್ರಮಗಳುಗೆ ನಿಷೇಧವಿದೆ. ರಕ್ತದಾನ ಶಿಬಿರವನ್ನು ಆಯೋಜಿಸುತ್ತಿದ್ದ ಸಂಘ ಸಂಸ್ಥೆಗಳು ಹಾಗೂ ಕಾರ್ಯಕರ್ತರು ಕೂಡ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ರಕ್ತದ ಕೊರತೆಗೆ ಬೇಸಿಗೆ ರಜೆಯೂ ಕಾರಣವಾಗಿದೆ. ರಜೆ ಹಿನ್ನೆಲೆಯಲ್ಲಿ ಕಾಲೇಜು ಯುವಕರು ಪ್ರವಾಸ ಹಾಗೂ ಊರುಗಳಿಗೆ ತೆರಳಿರುವುದರಿಂದ ರಕ್ತದಾನ ಶಿಬಿರ ನಡೆಯುತ್ತಿಲ್ಲ. ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಜನರು ನಿತ್ರಾಣರಾಗುವುದು ಹೆಚ್ಚು, ಇದರಿಂದಾಗಿ ಆಸಕ್ತಿ ಇದ್ದರೂ ರಕ್ತದಾನಕ್ಕೆ ಜನರು ಮುಂದಾಗುತ್ತಿಲ್ಲ.
ರಕ್ತಕ್ಕಾಗಿ ಅಲೆದಾಟ: ರಕ್ತದ ಸಂಗ್ರಹ ಕಡಿಮೆಯಾಗಿರುವುದರಿಂದ ರೋಗಿಗಳಿಗೆ ಅಗತ್ಯ ರಕ್ತ ಪಡೆಯಲು ಕುಟುಂಬಸ್ಥರು ರಕ್ತಕ್ಕಾಗಿ ಅಲೆದಾಡುವಂತಾಗಿದೆ. ಹಲವು ಗಂಟೆಗಟ್ಟಲೆ ಕ್ಯೂನಲ್ಲಿ ನೀಮತರೂ ರಕ್ತ ದೊರೆಯದೆ ಬರಿಗೈಲಿ ಹಿಂದಿರುಗುವಂತಾಗಿದೆ.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ನಾನಾ ಪ್ರತಿಷ್ಠಿತ ಕಾರ್ಖಾನೆಗಳನು, ಕಂಪನಿಗಳಲ್ಲಿ ಶಿಬಿರ ನಡೆಸಿ ನಿರ್ದಿಷ್ಟ ಪ್ರಮಾಣದಲ್ಲಿ ರಕ್ತ ಸಂಗ್ರಹಿಸಿದೆ.
ಚುನಾವಣೆಯ ನೀತಿ ಸಂಹಿತೆ ಹಾಗೂ ಬೇಸಿಗೆ ರಜೆ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರಗಳು ಹೆಚ್ಚು ನಡೆಯುತ್ತಿಲ್ಲ. ಹೀಗಾಗಿ ಆಸಕ್ತ ರಕ್ತದಾನಿಗು ಭಾರತೀಯ ರೆಡ್ಕ್ರಾಸ್ ಆಗಮಿಸಿ ರಕ್ತದಾನ ಮಾಡಬಹುದಾಗಿದೆ ಎಂದು ಭಾರತೀಯ ರೆಡ್ಕ್ರಾಸ್ ನ ಪ್ರಧಾನ ಕಾರ್ಯದರ್ಶಿ ಎಸ್. ಅಶೋಕ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.