ಸುಮಲತಾ ಬಗ್ಗೆ ನಾಲಿಗೆ ಹರಿಬಿಟ್ಟ ರೇವಣ್ಣ ವಿರುದ್ಧ ವ್ಯಾಪಕ ಆಕ್ರೋಶ
Recommended Video

ಬೆಂಗಳೂರು, ಮಾರ್ಚ್ 08: ಸುಮಲತಾ ಅಂಬರೀಶ್ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿರುವ ಸಚಿವ ಎಚ್.ಡಿ.ರೇವಣ್ಣ ಅವರ ವಿರುದ್ಧ ಸಾಮಾಜಿಕ ಜಾಲತಾಣ ಸೇರಿ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸುಮಲತಾ ಅವರು ಮಂಡ್ಯದಿಂದ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಮಾತನಾಡುತ್ತಾ ರೇವಣ್ಣ ಅವರು 'ಗಂಡ ಸತ್ತು ಒಂದು ತಿಂಗಳಾಗಿಲ್ಲ ಆಗಲೆ ರಾಜಕೀಯ ಬೇಕಾಯ್ತಾ?' ಎಂದು ಅಸೂಕ್ಷ್ಮ ಹೇಳಿಕೆ ನೀಡಿದ್ದರು.
ರಾಜಕಾರಣಿಗಳು, ಸಾಮಾಜಿಕ ಮಾಧ್ಯಮದವರು, ಮಹಿಳಾಪರರು, ಸಾಹಿತಿಗಳು ಎಲ್ಲರೂ ರೇವಣ್ಣ ಅವರ ಈ ಹೇಳಿಕೆಯ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೇವಣ್ಣ ಅವರ ಪುರುಷ ಅಹಂಕಾರದಿಂದ ಬಂದದ್ದು, ಅಂತಹಾ ಅನುಭವಿ ರಾಜಕಾರಣಿಗಳು ಮಹಿಳೆಯೊಬ್ಬರ ಬಗ್ಗೆ ಇಷ್ಟು ಕೀಳಾಗಿ ಮಾತನಾಡಿರುವುದು ಅವರ ಸಂಸ್ಕಾರ ತೋರುತ್ತದೆ ಎಂದು ಹಲವರು ಹೇಳಿದ್ದಾರೆ.
ಬಿಜೆಪಿಯ ಸುರೇಶ್ ಕುಮಾರ್, ನಟ-ರಾಜಕಾರಣಿ ಜಗ್ಗೇಶ್, ಶೋಭಾ ಕರಂದ್ಲಾಕೆ, ರಾಜ್ಯ ಬಿಜೆಪಿ ಸೇರಿ ಇನ್ನೂ ಹಲವರು ಈ ರೇವಣ್ಣ ಹೇಳಿಕೆಯನ್ನು ಖಂಡಿಸಿದ್ದಾರೆ.
|
ಬಿಜೆಪಿಯ ಸುರೇಶ್ ಕುಮಾರ್ ಖಂಡನೆ
ರೇವಣ್ಣ ಹೇಳಿಕೆಯನ್ನು ಖಂಡಿಸಿ ವಿಡಿಯೋ ಪ್ರಕಟಿಸಿರುವ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು, ರೇವಣ್ಣ ಅವರ ರಾಜಕೀಯ ಕೊನೆಗಾಲ ಹತ್ತಿರ ಬಂದಿದೆ, ಹಾಗಾಗಿ ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದಿದ್ದಾರೆ. ಮಹಿಳೆಯ ಬಗ್ಗೆ ಮಾತನಾಡುವಾಗ ಅವರು ಎಚ್ಚರಿಕೆಯಿಂದ ಇರಬೇಕು, ಈ ಹೇಳಿಕೆ ರೇವಣ್ಣ ಅವರ ಸಂಸ್ಕಾರವನ್ನು ಸೂಚಿಸುತ್ತದೆ. ವೈಯಕ್ತಿಕವಾಗಿ ಹಾಗೂ ಪಕ್ಷದ ವತಿಯಿಂದ ಈ ಹೇಳಿಕೆಯನ್ನು ಖಂಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.
|
ಜಗ್ಗೇಶ್ ತೀವ್ರ ಆಕ್ರೋಶ
ರೇವಣ್ಣ ಅವರ ಹೇಳಿಗೆ ನಟ, ಬಿಜೆಪಿ ಮುಖಂಡ ಜಗ್ಗೇಶ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಪ್ರಧಾನಿಗಳ ಮಗ ನೀವು ಎನ್ನುವುದು ಅರಿವಿರಲಿ, ನಿಮ್ಮ ಮನೆಯ ಸದಸ್ಯರಾಗಿದ್ದರೆ ಹೀಗೆ ಮಾಡುತ್ತಿದ್ದಿರೆ, ನನ್ನದು ಬೇರೆ ಪಕ್ಷ ಆದರೆ, ಸುಮಲತಾ ನಮ್ಮ ಉದ್ಯಮದ ಹೆಣ್ಣು ಮಗಳು, ಅಂಬರೀಶ್ ಅವರು ನಿಧನರಾದಾಗ ಅವರ ಸುತ್ತಲೂ ಇದ್ದ ಚಿತ್ರರಂಗದ ಜನ ಈಗಲಾದರೂ ಮಾತನಾಡಲಿ ಎಂದು ಅವರು ಟ್ವಿಟ್ಟರ್ನಲ್ಲಿ ಒತ್ತಾಯಿಸಿದ್ದಾರೆ.
|
ರೇವಣ್ಣ ಕ್ಷಮೆ ಕೇಳಲಿ: ಸಿ.ಟಿ.ರವಿ
ಮಂತ್ರಿ ರೇವಣ್ಣನವರ ಕಟೋರ ಮಾತುಗಳು ಇಡೀ ನಾರಿ ಶಕ್ತಿಗೆ ಮಾಡಿದ ಘೋರ ಅಪಮಾನ. ಅವರು ಕೂಡಲೆ ಸುಮಲತರವರ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಅವರು ಹೇಳಿದರು. ಶ್ರೀಮತಿ ಸುಮಲತ ಅಂಬರೀಶ್ ರವರು ತಮ್ಮ ಪತಿ ಸತ್ತು ಎರಡು ತಿಂಗಳೊಳಗೆ ರಾಜಕೀಯ ಸೇರುತ್ತಿರುವುದು ಅವರ ಪತಿಯ ಕನಸುಗಳನ್ನು ನನಸು ಮಾಡಲೇ ಹೊರತು ಕುಟುಂಬ ರಾಜಕಾರಣಕ್ಕಾಗಲಿ ಅಥವ ಯಾವುದೇ ಅಧಿಕಾರಕ್ಕಾಗಿ ಅಲ್ಲ ಎಂದು ರವಿ ಹೇಳಿದ್ದಾರೆ.

ಪ್ರತಾಪ್ ಸಿಂಹ ವಿಡಿಯೋ ಹರಿಬಿಟ್ಟ ಜೆಡಿಎಸ್ ಬೆಂಬಲಿಗರು
ವಿಧಾನಸಭೆ ಉಪ ಚುನಾವಣೆ ಸಮಯದಲ್ಲಿ ಪ್ರತಾಪ್ ಸಿಂಹ ಅವರು ಗೀತಾ ಮಹದೇವಪ್ರಸಾದ್ ಅವರ ವಿರುದ್ಧ, ರೇವಣ್ಣ ಇಂದು ಆಡಿದ ಮಾತಿನ ರೀತಿಯಲ್ಲಿಯೇ ಆಡಿರುವ ಮಾತಿನ ವಿಡಿಯೋವನ್ನು ಜೆಡಿಎಸ್ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದು, ಇದಕ್ಕೆ ಏನು ಹೇಳಿತ್ತೀರಿ ಎಂದು ಬಿಜೆಪಿಯನ್ನು ಪ್ರಶ್ನೆ ಮಾಡುತ್ತಿದ್ದಾರೆ.












Click it and Unblock the Notifications