ರಾಜಕಾರಣಿಗಳು ಎಟಿಎಂ ಮೆಷೀನ್ ಗಳಾ?: ಅನಂತ್ ಕುಮಾರ್ ಹೆಗ್ಡೆ ಪ್ರಶ್ನೆ
Recommended Video
ಕಾರವಾರ, ಸೆಪ್ಟೆಂಬರ್ 25: ಚುನಾವಣೆ ಬಂತೆಂದರೆ, ಕೆಲವು ಜನರು ರಾಜಕಾರಣಿಗಳಿಂದ ಹಣ ಕೀಳಲು ಶುರು ಮಾಡುತ್ತಾರೆ. ಬಂದವರಿಗೆಲ್ಲಾ ಕೊಡುವಷ್ಟು ಹಣ ಇಟ್ಟುಕೊಂಡಿರಲು ರಾಜಕಾರಣಿಗಳೇನು ಎಟಿಎಂ ಮೆಷೀನ್ ಗಳಾ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಪ್ರಶ್ನೆಸಿದ್ದಾರೆ. ಅಲ್ಲದೆ, ಇಂಥ ಕೆಟ್ಟ ಸಂಸ್ಕೃತಿಗೆ ಕಡಿವಾಣ ಬೀಳಬೇಕೆಂದೂ ಆಗ್ರಹಿಸಿದ್ದಾರೆ.
ತಾವು ಇತ್ತೀಚೆಗೆ ಕೇಂದ್ರ ಸಚಿವರಾದ ಹಿನ್ನೆಲೆಯಲ್ಲಿ, ನಗರದಲ್ಲಿ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ''ಚುನಾವಣೆ ಬಂತೆಂದರೆ ಸಾಕು ಪಕ್ಷದ ಕಾರ್ಯಕರ್ತರು, ಜನರು ಹಣ ಕೇಳಲು ರಾಜಕಾರಣಿಗಳ ಮನೆಗಳಿಗೆ ದೌಡಾಯಿಸುತ್ತಾರೆ. ಇದ್ದಂಥವರು ಕೊಡುತ್ತಾರೆ. ಇಲ್ಲದವರಿಗೆ ಧರ್ಮಸಂಕಟವಾಗುತ್ತದೆ. ಇಂಥ ಪರಿಸ್ಥಿತಿ ಬದಲಾದರೆ ಮಾತ್ರ ದೇಶ ಅಭಿವೃದ್ಧಿ ಕಾಣಲು ಸಾಧ್ಯ'' ಎಂದರು.
ಯಾವುದೇ ಪಕ್ಷದ ರಾಜಕಾರಣಿಯಿರಲಿ. ಆತನಿಗೆ ಆ ಪಕ್ಷದಿಂದ ಚುನಾವಣೆಗೆ ಟಿಕೆಟ್ ಸಿಕ್ಕಿತೆಂದರೆ ಸಾಕು ಆತನ ಮನೆಗೆ ಸಹಾಯ ಕೇಳಲು ಕೆಲವು ಜನ ದೌಡಾಯಿಸುತ್ತಾರೆ. ಆತನಲ್ಲಿ ಹಣವಿದೆಯೋ, ಇಲ್ಲವೋ ನೋಡುವುದಿಲ್ಲ. ಈ ಹಿಂದೆ, ಹಣವುಳ್ಳ ರಾಜಕಾರಣಿಗಳು ಕೊಟ್ಟು ಕೊಟ್ಟು ವ್ಯವಸ್ಥೆಯನ್ನು ಹಾಳುಗೆಡವಿದ್ದಾರೆ ಎಂದು ಅವರು ವಿಷಾದಿಸಿದರು.
ಇದಲ್ಲದೆ, ಚುನಾವಣೆಗೆ ನಿಂತಿರುವ ಯಾವುದೇ ಪಕ್ಷದ ಅಭ್ಯರ್ಥಿಯು ಎಷ್ಟು ಹಣ ಮಾಡಿದ್ದಾನೆ, ಯಾವ ಜಾತಿಯವನು ಎಂದಷ್ಟೇ ನೋಡುತ್ತಾರೆ. ಇಂಥ ಪರಿಸ್ಥಿತಿಗಳು ಬದಲಾಗದಿದ್ದರೆ ದೇಶ ಉದ್ಧಾರವಾದರೂ ಹೇಗಾಗುತ್ತದೆ ಎಂದು ಅವರು ಪ್ರಶ್ನಿಸಿದರು.
ಆನಂತರ, ಜ್ಞಾನ ಪಡೆಯದೇ ಕೇವಲ ಪದವಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿರುವ ವಿದ್ಯಾರ್ಥಿಗಳ ಬಗ್ಗೆ ತಮ್ಮ ಅಸಮಾಧಾನ ತೋಡಿಕೊಂಡ ಅವರು, ಕಲಾ ವಿಭಾಗದಲ್ಲಿ ಪಿಎಚ್ ಡಿ ಮಾಡಿದವರಿಗೆ ಇಂದು ಒಂದು ಪತ್ರ ಬರೆಯಲು ಬರೆಯುವುದಿಲ್ಲ. ಹಾಗೆಯೇ, ಬಿಇ ಎಲೆಕ್ಟ್ರಾನಿಕ್ಸ್ ಮಾಡಿಕೊಂಡವನಿಗೆ ತನ್ನ ಮೊಬೈಲನ್ನೇ ರಿಪೇರಿ ಮಾಡಲು ಬರುವುದಿಲ್ಲ. ಹೀಗೆ, ಜ್ಞಾನ ಪಡೆಯದೇ ಕೇವಲ ಸರ್ಟಿಫಿಕೇಟ್ ಗಳನ್ನು ಇಂದಿನ ಯುವಜನರು ಪಡೆಯುತ್ತಿದ್ದಾರೆ. ಇದರಿಂದ ಏನು ಪ್ರಯೋಜನ? ಹೀಗಿರುವಾಗ, ನಮ್ಮ ದೇಶ ಪ್ರಗತಿ ಹೊಂದುವುದಾದರೂ ಹೇಗೆ ಎಂದು ಅವರು ವಿಷಾದಿಸಿದರು.