PM Kisan 18th Installment: ಒಟ್ಟು 9.4ಕೋಟಿ ರೈತರ ಖಾತೆಗೆ ₹20,000 ಕೋಟಿ ಜಮೆ, ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?
ಹುಬ್ಬಳ್ಳಿ, ಅಕ್ಟೋಬರ್ 05: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ರೈತರಿಗೆ ಆರ್ಥಿಕ ಸಹಾಯಧನ ಒದಗಿಸುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PMKSY) ಅಡಿಯಲ್ಲಿ ಇಂದು 18ನೇ ಕಂತಿನ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆ ವರ್ಗಾಯಿಸಲಾಯಿತು. ಇದನ್ನು ಸ್ವಾಗತಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು, ಸಹಾಯಧನ ಬಗ್ಗೆ ವಿವರಿಸಿದ್ದಾರೆ.
ಯೋಜನೆಯ ಕಂತು ಬಿಡುಗಡೆ ಆದ ಬಳಿಕ ಶನಿವಾರ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೊಳಿಸಿದ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ರೈತರ ಸಂಜೀವಿನಿ ಆಗಿದೆ ಎಂದು ಬಣ್ಣಿಸಿದ್ದಾರೆ.

ಕೇಂದ್ರ ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ 18ನೇ ಕಂತಿನ ನಿಧಿ ರೈತರ ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತಿದೆ. ಕೇಂದ್ರದ ಯೋಜನೆಯಿಂದ ರೈತರಿಗೆ ಉತ್ತೇಜನ ನೀಡಿದೆ ಎಂದಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ ನಾಲ್ಕು ತಿಂಗಳಿಗೆ ತಲಾ 2000 ರೂ.ನಂತೆ ವಾಷಿರ್ಕವಾಗಿ ರೈತರ ಖಾತೆಗೆ 6000 ರೂ. ಧನಸಹಾಯ ನೀಡಲಾಗುತ್ತಿದೆ. ಈ ಯೋಜನೆಯಿಂದ ದೇಶದ 11 ಕೋಟಿ ರೈತರಿಗೆ ಸಂಜೀವಿನಿಯಾಗಿದೆ ಎಂದು ತಿಳಿಸಿದರು.
ಈ ಯೋಜನೆಯಿಂದಾಗಿ ದೇಶದಲ್ಲಿ ಕೃಷಿಗೆ ಅಪೂರ್ವ ಉತ್ತೇಜನ ದೊರಕಿದೆ. ರೈತರ ಸಾಲವನ್ನು ಕಡಿಮೆ ಮಾಡಿದೆ. ಅಲ್ಲದೇ, ಗ್ರಾಮೀಣ ಪ್ರದೇಶದ ಸಮುದಾಯಗಳನ್ನು ಸಶಕ್ತರನ್ನಾಗಿಸಿದೆ ಎಂದು ಅವರು ಪ್ರತಿಪಾದಿಸಿದರು.
ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆ ಭಾರತದ ಕೃಷಿಕರನ್ನು ಮಾತ್ರವಲ್ಲ ದೇಶವನ್ನೇ ಸ್ವಾವಲಂಬಿ ಮಾಡುವತ್ತ ಒಂದು ಮಹತ್ತರ ಹೆಜ್ಜೆಯಾಗಿದೆ. ಇತ್ತೀಚಿನ ಕೆಲವು ವರ್ಷಗಳಿಂದಲೇ ರೈತರಿಗೆ ಈ ಸಹಾಯಧನ ಕೃಷಿಗೆ ಆಸರೆಯಾಗಿದೆ.
9.4 ಕೋಟಿ ರೈತರಿಗೆ 20 ಸಾವಿರ ಕೋಟಿ ವರ್ಗಾವಣೆ
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ 18 ನೇ ಕಂತಿನಡಿ 20,000 ಕೋಟಿ ಹಣವನ್ನು ನೇರ ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಇಂದು ಈ ಕಂತನ್ನು ಅರ್ಹ ಒಟ್ಟು 9.4 ಕೋಟಿ ಫಲಾನುಭವಿ ರೈತರು ಪಡೆದುಕೊಂಡಿದ್ದಾರೆ. ಇದರಲ್ಲಿ ಕರ್ನಾಟಕದ 47.12 ಲಕ್ಷ ರೈತರು 942 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ ಎಂದು ಸಚಿವರು ಲೆಕ್ಕ ಕೊಟ್ಟಿದ್ದಾರೆ.
ಧಾರವಾಡ ಕ್ಷೇತ್ರದ 1.15 ಲಕ್ಷ ರೈತರಿಗೆ ವರ್ಗಾವಣೆ
ಇನ್ನೂ ಸ್ವಕ್ಷೇತ್ರದ ಕುರಿತು ಮಾಹಿತಿ ನೀಡಿದ ಅವರು, ಧಾರವಾಡ ಕ್ಷೇತ್ರ ವ್ಯಾಪ್ತಿಯ ಬರೋಬ್ಬರಿ 1.15 ಲಕ್ಷ ರೈತರಿಗೆ ಸಮ್ಮಾನ್ ನಿಧಿ ಯೋಜನೆಯ ಲಾಭ ಇಂದು ದೊರೆತಿದೆ. ಧಾರವಾಡ ಲೋಕಸಭಾ ಕ್ಷೇತ್ರದ 1.15 ಲಕ್ಷ ರೈತರು ಇದರ ಪ್ರಯೋಜನ ಪಡೆದಿದ್ದಾರೆ. 23.09 ಕೋಟಿ ರೂಪಾಯಿ ಧಾರವಾಡ ರೈತರ ಖಾತೆಗೆ ಜಮೆಯಾಗಿದ್ದು, ದಸರಾ ಹಬ್ಬದ ವೇಳೆ ರೈತರಲ್ಲಿ ಖುಷಿ ತಂದಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.












Click it and Unblock the Notifications