ಜವಾಬ್ದಾರಿಯುತ ನಾಗರೀಕರಾಗಿ ವರ್ತಿಸಿ: ನಟ ದರ್ಶನ್ ಖಡಕ್ ಸಂದೇಶ!
ಬೆಂಗಳೂರು, ಮಾರ್ಚ್ 24: ಮಾರಣಾಂತಿಕ ಕೊರೊನಾ ವೈರಸ್ ನ ಒಬ್ಬರಿಂದ ಒಬ್ಬರಿಗೆ ಹಬ್ಬುತ್ತದೆ ಎಂದು ಗೊತ್ತಿದ್ದರೂ, ಜನ ಗುಂಪು ಸೇರುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ.. ನಿಮ್ಮ ನಿಮ್ಮ ಮನೆಯಲ್ಲಿರಿ.. ಎಂದು ಎಷ್ಟೇ ಹೇಳಿದರೂ ಜನ ಬೀದಿಗಳಲ್ಲಿ ಓಡಾಡುತ್ತಿದ್ದಾರೆ.
ಕೊರೊನಾ ವೈರಸ್ ನ ತಡೆಗಟ್ಟಲು ಕರ್ನಾಟಕ ರಾಜ್ಯವನ್ನು ಲಾಕ್ ಡೌನ್ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ. ಲಾಕ್ ಡೌನ್ ಆದೇಶದ ನಡುವೆಯೂ 'ಕೊರೊನಾ' ಭೀತಿಯನ್ನು ಪಕ್ಕಕ್ಕಿಟ್ಟು, ಯುಗಾದಿ ಹಬ್ಬಕ್ಕಾಗಿ ಖರೀದಿ ಮಾಡಲು ಮಾರುಕಟ್ಟೆಗೆ ಜನ ಮುಗಿಬೀಳುತ್ತಿದ್ದಾರೆ.
ಇದರಿಂದ ಬೇಸೆತ್ತ ಕನ್ನಡ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ''ನಿಮ್ಮ ಈ ಕೃತ್ಯದಿಂದ ಇಡೀ ದೇಶವೇ ಮಾರಣಹೋಮಕ್ಕೆ ತುತ್ತಾಗುವಂತೆ ಮಾಡದಿರಿ'' ಎಂದು ಸಾರ್ವಜನಿಕರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
|
ಭಾರತೀಯರಲ್ಲಿ ದರ್ಶನ್ ವಿನಂತಿ
''ಎಲ್ಲಾ ಭಾರತೀಯರಲ್ಲೂ ನನ್ನ ಕಳಕಳಿಯ ವಿನಂತಿ. ಈ ಮಾರಕವಾದ ಕೊರೊನಾ ವೈರಸ್ ಇಂದ ಪಾರಾಗುವುದು ನಮ್ಮ ಮೊದಲ ಆದ್ಯತೆ ಆಗಿರಬೇಕು. ಈ ವೈರಸ್ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲು ಸರ್ಕಾರ, ಡಾಕ್ಟರ್ಸ್, ಪೊಲೀಸ್ ಸಿಬ್ಬಂದಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ದಯಮಾಡಿ ನಿಮ್ಮ ಫ್ಯಾಮಿಲಿ ಗಾಗಿ, ನಿಮ್ಮ ನೆರೆಹೊರೆಯ ಗೆಳೆಯರಿಗಾಗಿ, ನಮಗಾಗಿ ಆದಷ್ಟು ನಿಮ್ಮ ಮನೆಯಲ್ಲಿ ಸುರಕ್ಷಿತವಾಗಿರಿ'' - ನಟ ದರ್ಶನ್

ದೇಶವೇ ಮಾರಣಹೋಮಕ್ಕೆ ತುತ್ತಾದೀತು!
''ಈ ಸೋಂಕು ರೋಗ ಬಹಳ ಅಪಾಯಕಾರಿ ಎಂಬುದು ನಿಮಗೆ ತಿಳಿದರೂ ಸಹ ತಮ್ಮ ಊರುಗಳಿಗೆ ಹೋಗುವುದು, ಹಬ್ಬಕ್ಕಾಗಿ ಸಂಚರಿಸುವುದು ಮಾಡದಿರಿ. ನಿಮ್ಮ ಈ ಕೃತ್ಯದಿಂದ ಇಡೀ ದೇಶವೇ ಮಾರಣಹೋಮಕ್ಕೆ ತುತ್ತಾಗುವಂತೆ ಮಾಡದಿರಿ'' - ನಟ ದರ್ಶನ್

ಇಟಲಿ ಉದಾಹರಣೆ ಕಣ್ಣ ಮುಂದಿದೆ
''ಇಟಲಿ ಸ್ಪೇನ್ ದೇಶಗಳಲ್ಲಿ ಜಾಗೃತ ಕ್ರಮಗಳನ್ನು ಮೊದಲೇ ಸರಿಯಾಗಿ ಪಾಲಿಸದೆ ಆಗುತ್ತಿರುವ ಅನಾಹುತಗಳು ನಿಮ್ಮ ಕಣ್ಣ ಮುಂದಿವೆ. ನಿಮ್ಮ ಕರ್ತವ್ಯ ಮನೆಯಲ್ಲಿಯೇ ಇದ್ದು ದೇಶದ ಹಿತಕ್ಕಾಗಿ ಎಲ್ಲಾ ನಿಯಮಗಳನ್ನು ಪಾಲಿಸುವುದು. ಇದನ್ನು ದಯಮಾಡಿ ನೆರವೇರಿಸಿಕೊಡಿ'' - ನಟ ದರ್ಶನ್

ಜವಾಬ್ದಾರಿಯುತ ನಾಗರೀಕರಾಗಿ ವರ್ತಿಸಿ
''Common sense is not common' ಎನ್ನುವ ಹಾಗೆ ಮಾಡಬೇಡಿ.
Please behave like a responsible citizen of the country (ದೇಶದ ಜವಾಬ್ದಾರಿಯುತ ನಾಗರೀಕರಾಗಿ ವರ್ತಿಸಿ)'' ಎಂದು ನಟ ದರ್ಶನ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications