ಮಡಿಕೇರಿ ಸಾಹಿತ್ಯ ಸಮ್ಮೇಳನ ಪ್ಲಾಸ್ಟಿಕ್ ಮುಕ್ತ
ಮಡಿಕೇರಿ, ಡಿ. 18 : ಮಡಿಕೇರಿಯಲ್ಲಿ ಜನವರಿಯಲ್ಲಿ ನಡೆಯಲಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪ್ಲಾಸ್ಟಿಕ್ ಮುಕ್ತ ಎಂದು ಘೋಷಿಸಲಾಗಿದೆ. ಸಮ್ಮೇಳನ ನಡೆಯುವ ಮೂರು ದಿನಗಳ ಕಾಲ ಪ್ಲಾಸ್ಟಿಕ್ ಚೀಲ, ತಟ್ಟೆ, ಲೋಟಗಳನ್ನು ಬಳಸದಿರಲು ನಿರ್ಧರಿಸಲಾಗಿದೆ. ಪ್ಲಾಸ್ಟಿಕ್ ಚೀಲಗಳನ್ನು ಬಳಸುವವರನ್ನು ಕಂಡರೆ ಸ್ಥಳದಲ್ಲಿಯೇ ದಂಡ ವಿಧಿಸಲು ನಗರಸಭೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಮಡಿಕೇರಿಯಲ್ಲಿ ಜ.7ರಿಂದ ಮೂರು ದಿನಗಳ ಕಾಲ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸದಾ ಹಸಿರಿನಿಂದ ತುಂಬಿರುವ ಮಡಿಕೇರಿ ಪರಿಸರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪರಿಸರಸ್ನೇಹಿ ಸಮ್ಮೇಳನ ಆಚರಿಸಲು ನಿರ್ಧರಿಸಲಾಗಿದೆ. ಆದ್ದರಿಂದ ಪ್ಲಾಸ್ಟಿಕ್ ಮುಕ್ತ ಎಂದು ಘೋಷಿಸಲಾಗಿದೆ.

ಸಾಹಿತ್ಯ ಸಮ್ಮೇಳನದ ನಡೆಯುವ ಮೂರು ದಿನಗಳಲ್ಲಿ ಪ್ಲಾಸ್ಟಿಕ್ ಚೀಲ, ತಟ್ಟೆ, ಲೋಟಗಳನ್ನು ಬಳಸದಿರಲು ಸಮ್ಮೇಳನ ಸಮಿತಿ ನಿರ್ಧರಿಸಿದೆ. ಆದ್ದರಿಂದ ಸಮ್ಮೇಳನಕ್ಕೆ ಸಾಹುತ್ಯಾಸಕ್ತರು, ಯಾವುದೇ ಪ್ಲಾಸ್ಟಿಕ್ ಚೀಲಗಳನ್ನು ತರಬಾರದು ಎಂದು ಮನವಿ ಮಾಡಲಾಗಿದೆ. ಪ್ಲಾಸ್ಟಿಕ್ ಬಳಸುವವರಿಗೆ ದಂಡ ವಿಧಿಸಲು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. [ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ನಾ ಡಿಸೋಜ]
ಸಮ್ಮೇಳನಕ್ಕಾಗಿ ಕಾಟನ್ ಚೀಲಗಳನ್ನು ತಯಾರಿಸಲಾಗಿದೆ. ಊಟದ ವ್ಯವಸ್ಥೆಗಾಗಿ ಅಡಿಕೆ ತಟ್ಟೆ ಹಾಗೂ ಪೇಪರ್ ಲೋಟಗಳನ್ನು ಬಳಸಲು ನಿರ್ಧರಿಸಲಾಗಿದೆ. ಸಮ್ಮೇಳನಕ್ಕೆ ಸುಮಾರು 2 ಲಕ್ಷ ಅಡಿಕೆ ತಟ್ಟೆಗಳನ್ನು ಪೂರೈಸಲು ಟೆಂಡರ್ ಕರೆಯಲಾಗಿದೆ. ಪ್ಲಾಸ್ಟಿಕ್ ಗಳಿಗೆ ಹೋಲಿಸಿದರೆ, ಅಡಿಕೆ ತಟ್ಟೆ ಮತ್ತು ಪೇಪರ್ ಲೋಟಗಳ ಖರ್ಚು ಕಡಿಮೆ ಆಗಲಿದೆ ಎಂದು ಸಮ್ಮೇಳನ ಸಮಿತಿ ಹೇಳಿದೆ.
ಈಗಾಲಗೇ ಮಡಿಕೇರಿ ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ನಗರಸಭೆ ಘೋಷಿಸಿದೆ. ಪರಿಸರಕ್ಕೆ ಹಾನಿ ಉಂಟು ಮಾಡುವ ಪ್ಲಾಸ್ಟಿಕ್ ಚೀಲಗಳನ್ನು ಬಳಸದಂತೆ 3 ವರ್ಷಗಳ ಹಿಂದೆಯೇ ತೀರ್ಮಾನ ಕೈಗೊಂಡಿದೆ. ಪ್ಲಾಸ್ಟಿಕ್ ಕೈಚೀಲಗಳನ್ನು ಮಾರಾಟ ಮಾಡಿದರೆ ಅಥವಾ ಬಳಸಿದರೆ 100 ರಿಂದ 500 ರೂ.ವರೆಗೆ ದಂಡ ವಿಧಿಸಲಾಗುತ್ತಿದೆ.
ಸದ್ಯ ಮಡಿಕೇರಿ ನಗರದಲ್ಲಿ ಪರಿಸರಕ್ಕೆ ಹಾನಿ ಉಂಟುಮಾಡು ಪ್ಲಾಸ್ಟಿಕ್ ದೊರೆಯುವುದಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾಹಿತ್ಯಾಸಕ್ತರು ಆಗಮಿಸುವುದರಿಂದ ಅವರಿಗೆ ಪ್ಲಾಸ್ಟಿಕ್ ಬಳಕೆ ಕುರಿತು ಜಾಗೃತಿ ಮೂಡಿಸಲು ಪ್ಲಾಸ್ಟಿಕ್ ನಿಷೇಧದ ಆದೇಶ ಹೊರಡಿಸಲಾಗಿದೆ. ಸಮ್ಮೇಳದನ ಸವಿ ಸವಿಯಲು ಹೋಗುವ ಮುನ್ನ ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ ಎಂದು ನಿರ್ಧಾರ ತೆಗೆದುಕೊಂಡು ಮಡಿಕೇರಿಗೆ ಹೋಗಿ.












Click it and Unblock the Notifications