ಡಿಕೆ ಶಿವಕುಮಾರ್ ಸಿಎಂ ಆಗುವ ಆಸೆಗೆ ಮತ್ತೆ ರೆಕ್ಕೆ ಪುಕ್ಕ: ಶಾಸಕ ಹೇಳಿದ್ದೇನು?
ತುಮಕೂರು, ಆಗಸ್ಟ್ 27: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಪಕ್ಷದಲ್ಲಿ ಸಿಎಂ ಕುರ್ಚಿಗಾಗಿ ಕದನಿವಿತ್ತು. ಇದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸಾಬೀತಾಯಿತು. ಹೈಕಮಾಂಡ್ ಮನವೊಲಿಕೆ ಬಳಿಕ ಸಿದ್ದರಾಮಯ್ಯ ಸಿಎಂ ಆದರು. ಆದರೆ ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂಬ ಅಭಿಪ್ರಾಯ ಈಗಲೂ ಕೇಳಿ ಬರುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇರುವಾಗಲೇ ಹಾಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಇದೇ ಅವಧಿಯಲ್ಲಿ ಮುಖ್ಯಮಂತ್ರಿ ಆಗಲಿ ಎಂದು ತಿಪಟೂರಿನ ಕಾಂಗ್ರೆಸ್ ಶಾಸಕ ಕೆ.ಷಡಕ್ಷರಿ ಹೇಳಿದ್ದಾರೆ. ಈ ಮೂಲಕ ಡಿಕೆ ಶಿವಕುಮಾರ್ ಅವರ ಆಸೆಯನ್ನು ಶಾಸಕರು ಬಿಚ್ಚಿಟ್ಟಿದ್ದಾರೆ.

ಈ ಮೂಲಕ ಆಡಳಿತ ಪಕ್ಷ ಕಾಂಗ್ರೆಸ್ನಲ್ಲಿ ಮತ್ತೆ ಮುಖ್ಯಮಂತ್ರಿ ಸ್ಥಾನ ವಿಚಾರಗಳು, ಚರ್ಚೆ ಮುನ್ನೆಲೆಗೆ ಬಂದಿದೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿ ನಡೆದ ಕರವಗಲ್ ಶ್ರೀ ಆಂಜನೇಯ ಸ್ವಾಮಿ ನೂತನ ದೇವಾಲಯ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಶಾಸಕರು ಡಿಕೆಶಿ ಸಿಎಂ ಆಸೆಯನ್ನು ಹೇಳಿದರು.
ಸಿಎಂ ಆಸೆಯನ್ನು ದೇವರು ಈಡೇರಿಸಲಿ
ಹಾಲಿ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಇದೇ ಅವಧಿಗೆ ಕರ್ನಾಟಕ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಬೇಕು ಎಂಬ ಆಸೆ ಇದೆ. ಈ ಆಸೆಯನ್ನು ಶ್ರೀ ಗಂಗಾಧರ ಅಜ್ಜನವರು ನೇರವೇರಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸೇರಿದಂತೆ ಅವರ ಕುಟುಂಬದವರು ಆಗಾಗ್ಗೆ ಅಜ್ಜಯ್ಯ ಗಂಗಾಧರ ಪೀಠಕ್ಕೆ ಬೇಟಿ ನೀಡಿ ಆರ್ಶಿವಾದ ಪಡೆಯುತ್ತಾರೆ. ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಅಷ್ಟೇ ಅವರು ಬಂದು ಆರ್ಶೀವಾದ ಪಡೆದಿದ್ದರು ಎಂದು ಶಾಸಕರು ಷಡಕ್ಷರಿ ತಿಳಿಸಿದರು.

ಸಿಎಂ ಆಸೆ ಆಗಾಗ ವ್ಯಕ್ತವಾಗುತ್ತಲೇ ಇದೆ
ಅಜ್ಜಯ್ಯನವರು ಇರುವ ಈ ಕ್ಷೇತ್ರದ ಮೇಲೆ ಡಿಸಿಎಂ ಅವರಿಗೆ ಅಪಾರ ನಂಬಿಕೆ, ಭಕ್ತಿ ಇದೆ. ತಿಪಟೂರು ತಾಲೂಕಿನಲ್ಲಿ ನೀರಾವರಿಗೆ ಹೆಚ್ಚು ಆದ್ಯತೆ ನೀಡಬೇಕಿದೆ ಎಂಬುದನ್ನು ಸರ್ಕಾರದ ಗಮನಕ್ಕೆ ತಂದ ಅವರು, ಡಿಸಿಎಂ ಅವರ ಸಿಎಂ ಆಗುವ ಆಸೆಯನ್ನು ಹೊರ ಹಾಕಿದ್ದಾರೆ.
ಮೇ 10ರಂದು ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶವು ಮೇ 13ರಂದು ಪ್ರಕಟವಾಯಿತು. ಫಲಿತಾಂಶ ಪೂರ್ತಿ ಪ್ರಕಟವಾಗುವ ಮೊದಲೇ ಈ ಬಾರಿ ಕಾಂಗ್ರೆಸ್ಗೆ ಜನಾದೇಶ ಸಿಕ್ಕಿದೆ ಎಂಬುದು ಖಾತ್ರಿ ಆಯಿತು. ಅಲ್ಲಿಂದ ಸಿಎಂ ಸ್ಥಾನಕ್ಕೆ ಯಾರನ್ನು ಎಂಬ ಪ್ರಶ್ನೆ ಉದ್ಭವವಾಯಿತು. ಇದು ದೆಹಲಿ ಅಂಗಳ ತಲುಪಿತು. ಎರಡು ದಿನ ಡಿಸಿಎಂ ಡಿಕೆ ಶಿವಕುಮಾರ್ ಅವರು ಪಟ್ಟ ಸಡಿಲಿಸಲಿಲ್ಲ. ಕೊನೆಗೆ ಒಪ್ಪಿ ಸಿದ್ದರಾಮಯ್ಯ ಅವರೇ ಸಿಎಂ ಆಗಲು ಸಹಮತಿಸಿದರು. ಆದರೆ ಅವರ ಸಿಎಂ ಆಗುವ ತುಡಿತ ಆಗಾಗ ನಾಯಕರಿಂದ ಹೊರಬರುತ್ತಲೇ ಇರುತ್ತದೆ ಎಂಬುದಕ್ಕೆ ಷಡಕ್ಷರಿ ಅವರ ಮಾತುಗಳೇ ಸಾಕ್ಷಿ.












Click it and Unblock the Notifications