ಸತ್ಯಾಗ್ರಹ ಮುಂದೂಡಿದ ಜಯಮೃತ್ಯುಂಜಯ ಸ್ವಾಮೀಜಿ: ಹೋರಾಟದಿಂದ ಯು ಟರ್ನ್?
ಬೆಂಗಳೂರು, ಅಕ್ಟೋಬರ್ 1, "ಹಿಂದುಳಿದ ವರ್ಗಗಳ ಆಯೋಗದ ವರದಿ ನಂತರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲಾಗುವುದು. ಜಯಮೃತ್ಯುಂಜಯ ಸ್ವಾಮೀಜಿಗಳು ಸತ್ಯಾಗ್ರಹ ಕೈಬಿಡಬೇಕು ಎಂದು ಸಚಿವ ಸಿ.ಸಿ. ಪಾಟೀಲ ಮನವಿ ಮಾಡಿದರು. ಇದರ ಬೆನ್ನಲ್ಲೇ "ಮೀಸಲಾತಿಗಾಗಿ ನಡೆಸಲು ಉದ್ದೇಶಿಸಿದ್ದ ಸತ್ಯಾಗ್ರಹ ಮುಂದೂಡಲಾಗಿದೆ" ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಿಂದೆ ಘೋಷಿಸಿದ್ದಾರೆ.
ಭಾರತೀಯ ವಿದ್ಯಾಭವನದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ಮೀಸಲಾತಿಯ ನಿರ್ಧಾರ ಹಿಂದೆ ಕೇಂದ್ರ ಸರ್ಕಾರದ ಕೈಯಲ್ಲಿತ್ತು. ಈಗ ರಾಜ್ಯ ಸರ್ಕಾರಕ್ಕೆ ಅವಕಾಶ ನೀಡಲಾಗಿದೆ. ಹಿಂದುಳಿದವ ವರ್ಗಗಳ ಆಯೋಗದ ವರದಿ ಬಂದ ತಕ್ಷಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೀಸಲಾತಿ ನೀಡುವ ನಿರ್ಧಾರ ಕೈಗೊಳ್ಳುತ್ತಾರೆ. ಈ ಸಂಬಂಧ ಬೇರೆ ಯಾರೂ ಸಹ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬಾರದು. ಹೀಗಾಗಿ ಶಾಶ್ವತವಾಗಿ ಉಳಿಯುವಂತಹ ನಿರ್ಧಾರವನ್ನೇ ಕೈಗೊಳ್ಳಬೇಕು. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗುವಂತಹ ಒಳ್ಳೆಯ ದಿನಗಳು ಹತ್ತಿರ ಬಂದಿವೆ. ಹೀಗಾಗಿ ಉಪವಾಸ ಸತ್ಯಾಗ್ರಹ ಮಾಡುವಂತಹ ನಿರ್ಧಾರವನ್ನು ಕೈಬಿಡಿ. ಹೋರಾಟವನ್ನು ಮುಂದುವರಿಸಿ ಎಂದು ಮನವಿ ಮಾಡಿದರು.
"ಹೋರಾಟಕ್ಕೆ ಮತ್ತೊಂದು ಹೆಸರೇ ಜಯಮೃತ್ಯಂಜಯ ಸ್ವಾಮೀಜಿ. ಅವರು ಈ ಹಿಂದೆ ಪಾದಯಾತ್ರೆ ನಿರ್ಧಾರ ಕೈಗೊಂಡ ಸಂದರ್ಭದಲ್ಲಿ ಪಾದಯಾತ್ರೆ ಕಷ್ಟವಾಗಲಿದೆ ನಿರ್ಧಾರ ಕೈಬಿಡಿ ಎಂದು ಮನವಿ ಮಾಡಿದ್ದೆವು. ಆದರೆ, ಪಾದಯಾತ್ರೆ ಮಾಡಬಾರದು ಎಂದು ಮೀಸಲಾತಿ ಘೋಷಣೆ ಮಾಡಿ ಎಂದು ಹೇಳಿದರು. ಅದರಂತೆ ಕೂಡಲಸಂಗಮದಿಂದ ಬೆಂಗಳೂರು ವರೆಗೆ ಪಾದಯಾತ್ರೆಯನ್ನು ನಡೆಸಿದರು. ಆದರೆ, ಕೆಲವರು ಪಾದಯಾತ್ರೆಯ ನಾಟಕ ಮಾಡಿ ಮರಳಿದರು" ಎಂದರು.
ಕೂಡಲ ಸಂಗಮಪೀಠಕ್ಕೆ ಅನುದಾನ ನೀಡುವಂತೆ ವಿನಯ ಕುಲಕರ್ಣಿ ಅವರು ಮನವಿ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಮಾತನಾಡಿ ನೂರಕ್ಕೆ ನೂರರಷ್ಟು ಅನುದಾನ ಒದಗಿಸುತ್ತೇವೆ ಎಂದು ಸಚಿವ ಸಿ.ಸಿ.ಪಾಟೀಲ ಭರವಸೆ ನೀಡಿದರು.
ಸತ್ಯಾಗ್ರಹ ಮುಂದೂಡಿಕೆ:
"ಹಿಂದುಳಿದವ ವರ್ಗಗಳ ಆಯೋಗದ ವರದಿ ನಂತರ ಸರ್ಕಾರ ಮೀಸಲಾತಿ ಜಾರಿ ಮಾಡಲಾಗುವುದು ಎಂದು ಹೇಳಿರುವುದರಿಂದ ಸತ್ಯಾಗ್ರಹವನ್ನು ಮುಂದೂಡಿರುವುದಾಗಿ" ಕೂಡಲ ಸಂಗಮದ ಪಂಚಮಸಾಲಿ ಗುರುಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಭೆಯಲ್ಲಿ ಘೋಷಿಸಿದರು.
ಸಚಿವರ ನಿರ್ಧಾರದ ಬಳಿಕ ಮಾತನಾಡಿದ ಅವರು, "ಮೀಸಲಾತಿ ಸಂಬಂಧ ಇಂದು ಬೆಳಿಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೂ ಸುಧೀರ್ಘ ಮಾತುಕತೆ ನಡೆಸಿದ್ದೇವೆ. ಕಾನೂನಿನ ಸಾಧಕ ಬಾಧಕಗಳ ಬಗ್ಗೆಯೂ ಚರ್ಚಿಲಾಯಿತು. ಹಿಂದುಳಿದ ವರ್ಗಗಳ ಆಯೋಗದಿಂದ ಸರ್ಕಾರ ಕೂಡಲೇ ವರದಿ ತರಿಸಿಕೊಂಡು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಒದಗಿಸಬೇಕು. ಸರ್ಕಾರದ ಸೂಕ್ತ ಭರವಸೆ ಹಿನ್ನೆಲೆಯಲ್ಲಿ ಸತ್ಯಾಗ್ರಹ ನಿರ್ಧಾರವನ್ನು ವಾಪಸ್ ಪಡೆಯುತ್ತೇವೆ. ಹೋರಾಟವನ್ನು ನಿರಂತರವಾಗಿ ಮುಂದುವರಿಸುತ್ತೇವೆ" ಎಂದು ಘೋಷಿಸಿದರು.
ಸ್ವಾಮೀಜಿ ಯುಟರ್ನ್?
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹೋರಾಟವನ್ನು ಪ್ರಖರದಿಂದ ರೂಪಿಸುತ್ತಿದ್ದ ಕೂಡಲ ಸಂಗಮದ ಪಂಚಮಸಾಲಿಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಈಗ ಯುಟರ್ನ್ ಹೊಡೆದಿರುವ ಲಕ್ಷಣ ಕಾಣಿಸುತ್ತಿವೆ. ಪಂಚಮಸಾಲಿ ಸಮುದಾಯಗಳಿಗೆ ಮೀಸಲಾತಿ ನೀಡಬೇಕು ಎಂದು ಜಯಮೃತ್ಯುಂಜಯ ಸ್ವಾಮೀಜಿ ಕಳೆದ ಜ.14ರಿಂದ "ಪಂಚಲಕ್ಷ ಹೆಜ್ಜೆಗಳು" ಹೆಸರಿನಲ್ಲಿ ಕೂಡಲಸಂಗಮದಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಿದರು. ದಾರಿಯುದ್ದಕ್ಕೂ ಅಂದಿನ ಬಿ.ಎಸ್. ಯಡಿಯೂರಪ್ಪ ಸರ್ಕಾರದ ವಿರುದ್ಧ ಹರಿಹಾಯುತ್ತಲೇ ಇದ್ದರು. ಅಲ್ಲದೆ, ಸರ್ಕಾರಕ್ಕೆ ಆರು ತಿಂಗಳ ಗಡುವು ನೀಡಿ, ಈ ಸಮಯದೊಳಗೆ ಮೀಸಲಾತಿ ಘೋಷಿಸಿದ್ದರೆ ಮುಂದಿನ ಹೋರಾಟ ಇನ್ನೂ ತೀವ್ರವಾಗಿ ಇರುತ್ತದೆ ಎಂದು ಹೇಳಿದ್ದರು. ಆದರೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧಾರಕ್ಕೆ ಸ್ವಾಮೀಜಿ ತಲೆದೂಗಿದ್ದಾರೆ ಎನ್ನಲಾಗುತ್ತಿದೆ.
ಮುಖ್ಯಮಂತ್ರಿಯೊಂದಿಗೆ ಸಭೆ
ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೃಹ ಕಚೇರಿಯಲ್ಲಿ ಶುಕ್ರವಾರ ಬೆಳಗ್ಗೆ ಭೇಟಿ ಮಾಡಿ ಮಾತುಕತೆ ನಡೆಸಿದರು. ಸುಮಾರು ಒಂದೂವರೆ ತಾಸುಗಳ ಕಾಲ ಸುದೀರ್ಘ ಸಭೆ ನಡೆಯಿತು. ಮೀಸಲಾತಿ ನೀಡುವ ಸಂಬಂಧ ಕಾನೂನಾತ್ಮಕ ಅಡೆತಡೆಗಳ ಬಗ್ಗೆಯೂ ಚರ್ಚಿಸಲಾಯಿತು. ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ್ ಇತರರು ಭಾಗಿಯಾಗಿದ್ದರು.
ಹೋರಾಟ ನಿಯಂತ್ರಿಸುವಲ್ಲಿ ಬೊಮ್ಮಾಯಿ ಯಶಸ್ವಿ
ರಾಜ್ಯದಲ್ಲಿ ಮತ್ತೊಮ್ಮೆ ತೀವ್ರ ಸಂಚಲನ ಉಂಟುಮಾಡಿದ್ದ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಂಬಂಧ ಹೋರಾಟವನ್ನು ತಣಿಸುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಹುತೇಕ ಯಶಸ್ವಿಯಾಗಿದ್ದಾರೆ. ಸಾಕಷ್ಟು ರಾಜಕೀಯ ಅನುಭವ ಹೊಂದಿದ್ದ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಆದರೀಗ ಹೋರಾಟದ ರೂವಾರಿ ಆಗಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೆಗೆದುಕೊಂಡಿರುವ ನಿರ್ಧಾರಕ್ಕೆ ತಲೆದೂಗಿದ್ದು, ಅಡಳಿತಾರೂಢ ಸರ್ಕಾರಕ್ಕೆ ಇದು ಸ್ವಲ್ಪ ಮಟ್ಟಿನ ನೆಮ್ಮದಿ ನೀಡಿದೆ.
Recommended Video
ಈಗಾಗಲೇ ಹಾವೇರಿ ಜಿಲ್ಲೆಯ ಹಾನಗಲ್ ಮತ್ತು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಉಪಚುನಾವಣೆ ಘೋಷಣೆಯಾಗಿದೆ. ಈ ಎರಡೂ ಕ್ಷೇತ್ರಗಳೂ ಸಹ ಉತ್ತರ ಕರ್ನಾಟಕದಲ್ಲಿ, ಪಂಚಮಸಾಲಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಇರುವಂತಹ ಕ್ಷೇತ್ರಗಳೇ ಆಗಿವೆ. ಇಂತಹ ಸಂದರ್ಭದಲ್ಲಿ ಪ್ರತಿಭಟನೆಗಳು ನಡೆದರೆ ಪಕ್ಷಕ್ಕೆ ಸ್ವಲ್ಪಮಟ್ಟಿನ ಮುಜುಗರವೂ ಊಂಟಾಗಬಹುದು ಎಂಬ ಕಾರಣದಿಂದ ಬಸವರಾಜ ಬೊಮ್ಮಾಯಿ ಅವರು ಇದನ್ನು ಗಂಭೀರವಾಗಿ ಪರಿಗಣಿಸಿ ಹೋರಾಟವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.