ನಮ್ಮ ಕೈ ಹೀಗೇ ಜೊತೆಯಾಗಿರುತ್ತೆ: ಸಿಎಂ ಹುಟ್ಟುಹಬ್ಬಕ್ಕೆ ಡಿಕೆ ಶಿವಕುಮಾರ್ ವಿಶೇಷ ಸಂದೇಶ
ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ನಡುವೆ ಭಿನ್ನಾಭಿಪ್ರಾಯ, ಮುಸುಕಿನ ಗುದ್ದಾಟವಿದೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಲೇ ಇದೆ. ಆದರೆ ಇದನ್ನು ಇಬ್ಬರೂ ಕೂಡ ಸುಳ್ಳು ಎನ್ನುತ್ತಲೇ ಇದ್ದಾರೆ. ಇದರ ನಡುವೆ ಡಿಕೆ ಶಿವಕುಮಾರ್ ಅವರು ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವುದರಿಂದ ಇದೇ ಕುರ್ಚಿಗಾಗಿ ಇಬ್ಬರ ನಡುವೆ ಆಂತರಿಕ ಕಹಲ ಇದೆ ಎನ್ನುತ್ತಾರೆ. ಇಂದು ಸಿದ್ದರಾಮಯ್ಯ ಅವರ ಹುಟ್ಟುಹಬ್ಬಕ್ಕೆ ಡಿಕೆ ಶಿವಕುಮಾರ್ ಅವರು ವಿಶೇಷವಾಗಿ ಶುಭಕೋರಿದ್ದಾರೆ. ಜೊತೆಗೆ ಒಂದು ಸಂದೇಶವನ್ನೂ ರವಾನಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಜನ್ಮದಿನದ ಶುಭಾಶಯಗಳು. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ ಒದಗಿಸುವ ಮೂಲಕ ಉತ್ತಮ ಆಡಳಿತಕ್ಕೆ ಹೆಸರುವಾಸಿಯಾಗಿದ್ದೀರಿ. ಕನ್ನಡಿಗರ ಹಿತವನ್ನು ಕಾಪಾಡಲು, ಕರ್ನಾಟಕದ ಕಲ್ಯಾಣಕ್ಕಾಗಿ ನಮ್ಮ "ಕೈ" ಹೀಗೆ ಜೊತೆಯಾಗಿರಲಿದೆ. ದೇವರು ತಮಗೆ ಉತ್ತಮ ಆಯುರಾರೋಗ್ಯ ನೀಡಿ ಕಾಪಾಡಲಿ ಎಂದು ಶುಭ ಹಾರೈಸುತ್ತೇನೆ ಎಂದು ಡಿಕೆ ಶಿವಕುಮಾರ್ ವಿಶ್ ಮಾಡಿದ್ದಾರೆ.

ಇದೇ ವರ್ಷ ಸಿಎಂ ಬದಲಾಗುತ್ತಾರೆ ಎಂಬ ಭವಿಷ್ಯ ನುಡಿಯಲಾಗಿದ್ದು, ಸಿದ್ದರಾಮಯ್ಯ ಅವರು ಐದು ವರ್ಷವೂ ನಾನೇ ಸಿಎಂ ಎನ್ನುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದರು. ಹೀಗಾಗಿ ಡಿಕೆ ಶಿವಕುಮಾರ್ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿತ್ತು. ಇಂದು ಹುಟ್ಟುಹಬ್ಬಕ್ಕೆ ಶುಭಕೋರಿರುವ ಡಿಕೆಶಿ, ನಾವಿಬ್ಬರೂ ಒಂದಾಗಿದ್ದೇವೆ ಎಂದು ಮತ್ತೊಮ್ಮೆ ಸಂದೇಶ ರವಾನಿಸಿದ್ದಾರೆ.
ದಿಟ್ಟ ನಿಲುವು, ತತ್ವದ ಬದ್ಧತೆ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ನಿಲ್ಲುವ ಸಮಾಜವಾದಿ ನಾಯಕರು, ಮಾನ್ಯ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಶುಭಕೋರಿದ್ದಾರೆ. ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ, ಶೋಷಿತ ವರ್ಗಗಳ ಸ್ವಾಭಿಮಾನಕ್ಕೆ ಸ್ಪಷ್ಟ ನಿಲುವು, ಮತ್ತು ರಾಜ್ಯದ ಪ್ರಗತಿಗೆ ಮುಂದಾದ ಅವರ ಪ್ರಾಮಾಣಿಕ ಸೇವೆ ಸದಾ ಶ್ಲಾಘನೀಯ. ಈ ಶುಭ ಸಂದರ್ಭದಲ್ಲಿ ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಸಿಗಲಿ. ಪಕ್ಷಕ್ಕೂ ರಾಜ್ಯಕ್ಕೂ ಅವರ ಅಮೂಲ್ಯ ಸೇವೆ ಮುಂದುವರಿಯಲಿ ಎಂದು ಹಾರೈಸಿದ್ದಾರೆ.
ಈ ನಾಡು ಕಂಡ ಅಪರೂಪದ ರಾಜಕಾರಣಿ, ತಾತ್ವಿಕ ಬದ್ಧತೆಯುಳ್ಳ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಒಬ್ಬರಾದ ಮಾನ್ಯ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರಿಗೆ ಜನ್ಮದಿನದ ಹಾರ್ದಿಕ ಹಾರ್ದಿಕ ಶುಭಾಶಯಗಳು ಎಂದು ಸಚಿವ ಈಶ್ವರ್ ಖಂಡ್ರೆ ವಿಶ್ ಮಾಡಿದ್ದಾರೆ. ದಿಟ್ಟ ನಿಲುವಿನ ಸೈದ್ಧಾಂತಿಕ ಬದ್ಧತೆಯ ನಾಯಕರು, ಬುದ್ಧ-ಬಸವ-ಅಂಬೇಡ್ಕರ್ ಅವರ ತತ್ವವಾದಿಗಳು, ಸಮಾಜವಾದಿ ಚಿಂತಕರು, ನುಡಿದಂತೆ ನಡೆದು, ಗ್ಯಾರಂಟಿಗಳ ಮೂಲಕ ಬಡವರ ಬದುಕನ್ನು ಹಸನಾಗಿಸುತ್ತಾ ರಾಜ್ಯದ ಅಭಿವೃದ್ಧಿಗೂ ಶ್ರಮಿಸುತ್ತಿರುವ ಅವರಿಗೆ ಭಗವಂತನು ಉತ್ತಮ ಆರೋಗ್ಯ, ದೀರ್ಘಾಯುಷ್ಯ ಕರುಣಿಸಲಿ. ರಾಜ್ಯಕ್ಕೂ- ಪಕ್ಷಕ್ಕೂ ಅವರ ಸೇವೆ ನಿರಂತರವಾಗಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವ ಎಂಬಿ ಪಾಟೀಲ್ ಶುಭಕೋರಿದ್ದಾರೆ.












Click it and Unblock the Notifications