ಬೊಮ್ಮಾಯಿ ಅವರಿಗೆ ಧಮ್ ಇಲ್ಲದ ಕಾರಣಕ್ಕೆ ಇವತ್ತಿನ ವರೆಗೆ ಚರ್ಚೆಗೆ ಬರುವುದಕ್ಕೆ ಒಪ್ಪಿಲ್ಲ: ಸಿದ್ದರಾಮಯ್ಯ ಹೇಳಿದ್ದೇನು.?
ಭ್ರಷ್ಟ ಹಣದಿಂದ ಅಧಿಕಾರಕ್ಕೆ ಬಂದಿರುವ ಅನೈತಿಕ ಸರ್ಕಾರ ರಾಜ್ಯದಲ್ಲಿದೆ. ಲೂಟಿ ಮಾಡಿರುವುದೊಂದೇ ಈ ಸರ್ಕಾರದ ಸಾಧನೆ ಎಂದು ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿ,ಫೆಬ್ರವರಿ8: ಬಿಜೆಪಿ ಸರ್ಕಾರ ಕೊಟ್ಟ ಮಾತನ್ನ ಈಡೇಸಿಲ್ಲ ಎಂಬ ವಿಚಾರದಲ್ಲಿ ವೇದಿಕೆಯನ್ನು ನೀವೆ ಸಿದ್ಧಮಾಡಿ ಎಂದು ಸವಾಲು ಹಾಕಿದ್ದೆ. ಬೊಮ್ಮಾಯಿ ಅವರಿಗೆ ಧಮ್ ಇಲ್ಲದ ಕಾರಣಕ್ಕೆ ಇವತ್ತಿನ ವರೆಗೆ ಚರ್ಚೆಗೆ ಬರುವುದಕ್ಕೆ ಒಪ್ಪಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಬುಧವಾರ ಚಿತ್ತಾಪುರದಲ್ಲಿ ಮಾತನಾಡಿದ ಅವರು, ಭ್ರಷ್ಟ ಹಣದಿಂದ ಅಧಿಕಾರಕ್ಕೆ ಬಂದಿರುವ ಅನೈತಿಕ ಸರ್ಕಾರ ರಾಜ್ಯದಲ್ಲಿದೆ. ಲೂಟಿ ಮಾಡಿರುವುದೊಂದೇ ಈ ಸರ್ಕಾರದ ಸಾಧನೆ. ವಿಧಾನಸೌಧದ ಗೋಡೆಗೆ ಹೋಗಿ ಕಿವಿ ಕೊಟ್ಟರೆ ಲಂಚ, ಲಂಚ, ಲಂಚ ಎಂದು ಪಿಸುಗುಟ್ಟುತ್ತದೆ. ಒಂದು ಗುತ್ತಿಗೆ ಕಾಮಗಾರಿಗೆ 40% ಲಂಚ ಕೊಡಲೇಬೇಕು. ಇದನ್ನು ಹೇಳಿರುವುದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು. ನರೇಂದ್ರ ಮೋದಿ ಅವರಿಗೆ ನಮ್ಮನ್ನು ಕಮಿಷನ್ ಕಿರುಕುಳದಿಂದ ಕಾಪಾಡಿ ಎಂದು ಪತ್ರ ಬರೆದು ಒಂದುವರೆ ವರ್ಷ ಆಯಿತು, ನ ಖಾವೂಂಗ, ನ ಖಾನೆದೂಂಗ ಎನ್ನುವ ಮೋದಿ ಅವರು ಯಾಕೆ ಕ್ರಮ ಕೈಗೊಂಡಿಲ್ಲ? ಎಂದು ಪ್ರಶ್ನಿಸಿದರು.
ಈ ಸರ್ಕಾರ ಯಾವ ವರ್ಗದ ಜನರ ಪರವಾಗಿದೆ ಎಂದು ನೀವೆ ಯೋಚನೆ ಮಾಡಿನೋಡಿ. ಜಿಎಸ್ಟಿ ಮೂಲಕ ಜನರ ರಕ್ತ ಹೀರುತ್ತಿದ್ದಾರೆ. ಇಂಥಾ ಕೆಟ್ಟ ಸರ್ಕಾರಕ್ಕೆ ಮತ ನೀಡುತ್ತೀರ? ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ಅವರನ್ನು ಕನಿಷ್ಠ 50,000 ಮತಗಳ ಅಂತರದಿಂದ ಗೆಲ್ಲಿಸಿಕೊಡಬೇಕು ಎಂದು ಕೈಮುಗಿದು ಮನವಿ ಮಾಡುತ್ತೇನೆ.

ನರೇಂದ್ರ ಮೋದಿ ಅವರು ಹೇಳಿದ್ದ ಅಚ್ಚೇದಿನ್ ಬಂತಾ? ಇಂದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂಬ ಕಾರಣಕ್ಕೆ ನಾವು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸಾಮಾನ್ಯ ಜನರ ಸಹಾಯಕ್ಕೆ ನಿಲ್ಲಬೇಕು ಎಂದು ಪ್ರತೀ ಮನೆಗೆ 200 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುವ ಮತ್ತು ಪ್ರತೀ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂಪಾಯಿ ನೀಡುವ ತೀರ್ಮಾನ ಮಾಡಿದ್ದೇವೆ. ಇವೆರೆಡು ಕಾರ್ಯಕ್ರಮಗಳಿಂದ ರಾಜ್ಯದ ಖಜಾನೆಗೆ 40,000 ಕೋಟಿ ರೂಪಾಯಿ ಹೊರೆ ಬೀಳಲಿದೆ.
ಬೆಳಗಾವಿಯ ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು 40% ಕಮಿಷನ್ ನೀಡಿಲ್ಲ ಎಂದು ಸಚಿವರಾಗಿದ್ದ ಈಶ್ವರಪ್ಪ ಅವರು ಬಿಲ್ ಹಣ ನೀಡದೆ ಕಿರುಕುಳ ನೀಡಿದ್ದಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡ. ಸಂತೋಷ್ ಪಾಟೀಲ್ ಸಾವಿಗೆ ಈಶ್ವರಪ್ಪ ಕಾರಣ ಎಂದು ಆತನ ಕುಟುಂಬದವರು ಹೇಳಿದ್ರು, ಸಾಯುವ ಮೊದಲು ಸಂತೋಷ್ ಪಾಟೀಲ್ ಡೆತ್ ನೋಟ್ ಕೂಡ ಬರೆದಿಟ್ಟಿದ್ದರು. ಇಂಥವರನ್ನು ಜೈಲಿಗೆ ಹಾಕುವ ಬದಲು ಮೂರೇ ತಿಂಗಳಲ್ಲಿ ಕ್ಲೀನ್ ಚಿಟ್ ಕೊಡಿಸಿದ್ದಾರೆ. ಸರ್ಕಾರದ ಭ್ರಷ್ಟಾಚಾರಕ್ಕೆ ದಾಖಲೆ ಕೇಳುವ ಬೊಮ್ಮಾಯಿಗೆ ಇದಕ್ಕಿಂತ ಒಳ್ಳೆ ದಾಖಲೆ ಬೇಕ?

ಕೊರೊನಾ ಕಾಲದಲ್ಲಿ ಖರೀದಿ ಮಾಡಿರುವ ವಸ್ತುಗಳಲ್ಲಿ ಭ್ರಷ್ಟಾಚಾರ ಮಾಡಿ ಸುಮಾರು 2,000 ಕೋಟಿ ಲಂಚ ತಿಂದಿದ್ದಾರೆ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದರಿಂದ ಜನರಿಗೆ ಆಸ್ಪತ್ರೆ, ಬೆಡ್, ಔಷಧಿ, ಆಕ್ಸಿಜನ್ ಕೊಡಲಾಗದೆ ಲಕ್ಷಾಂತರ ಜೀವಗಳ ಬಲಿ ಪಡೆದರು. ಇವೆಲ್ಲವುಗಳನ್ನು ಒಳಗೊಂಡ ಬಿಜೆಪಿ ಸರ್ಕಾರದ ಕರ್ಮಕಾಂಡಗಳು ಎಂಬ ಆರೋಪ ಪಟ್ಟಿಯನ್ನು ಸಿದ್ಧ ಮಾಡಿ ಜನರ ಮುಂದಿಟ್ಟಿದ್ದೇವೆ. ರಾಜ್ಯ ಅಭಿವೃದ್ಧಿ ಆಗಬೇಕಾದರೆ ಈ ಸರ್ಕಾರ ತೊಲಗಬೇಕು. ನಾವು ಅಧಿಕಾರದಲ್ಲಿದ್ದಾಗ ನಮ್ಮ ಮೇಲೆ ಯಾವ ಆರೋಪಗಳು ಇರಲಿಲ್ಲ, ಗುತ್ತಿಗೆದಾರರ ಸಂಘದವರು ಪತ್ರ ಬರೆದಿರಲಿಲ್ಲ. ರಾಜ್ಯದ ಜನ ಮತ್ತೆ ನಮಗೆ ಅಧಿಕಾರ ನೀಡಿದರೆ ಭ್ರಷ್ಟಾಚಾರ ರಹಿತವಾದ, ಪಾರದರ್ಶಕ ಆಡಳಿತವನ್ನು ನೀಡುತ್ತೇವೆ ಎಂದರು.











Click it and Unblock the Notifications