ಆಪರೇಷನ್ ಕಮಲ : ಯಾವ ಪಕ್ಷಕ್ಕೂ ಬೇಡವಾದ ಎಸ್ಐಟಿ ತನಿಖೆ!
ಬೆಂಗಳೂರು, ಜೂನ್ 24 : ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಆಪರೇಷನ್ ಕಮಲದ ವಿಚಾರ ಹೆಚ್ಚು ಸದ್ದು ಮಾಡಿತ್ತು. ವಿಧಾನಸಭೆ ಸ್ಪೀಕರ್ ಹೆಸರು ಕೇಳಿ ಬಂದ ಕಾರಣಕ್ಕೆ ಸರ್ಕಾರ ಎಸ್ಐಟಿ ರಚನೆ ಮಾಡುವುದಾಗಿ ಹೇಳಿತ್ತು.
2019ರ ಫೆಬ್ರವರಿಯಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಎಸ್ಐಟಿ ರಚನೆ ಮಾಡುವ ಘೋಷಣೆಯನ್ನು ಸರ್ಕಾರ ಮಾಡಿತ್ತು. ಆದರೆ, ಜೂನ್ ತಿಂಗಳು ಬಂದರೂ ಎಸ್ಐಟಿ ರಚನೆಯಾಗಿಲ್ಲ. ಎಲ್ಲಾ ರಾಜಕೀಯ ಪಕ್ಷಗಳೂ ಈ ವಿಚಾರದಲ್ಲಿ ಒಂದಾಗಿದ್ದು, ಎಸ್ಐಟಿ ಯಾರಿಗೂ ಬೇಡವಾಗಿದೆ.
ಆಪರೇಷನ್ ಕಮಲದ ಆಡಿಯೋ ವಿಚಾರ ಮರೆತ ರಾಜಕೀಯ ಪಕ್ಷಗಳು!
ಶಾಸಕರ ರಾಜೀನಾಮೆ ಪಡೆಯಲು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಲಂಚ ನೀಡಲಾಗುತ್ತದೆ ಎಂಬ ಆಪರೇಷನ್ ಕಮಲದ ಆಡಿಯೋ ಭಾರೀ ಸದ್ದು ಮಾಡಿತ್ತು. ವಿಧಾನಸಭೆಯಲ್ಲಿ ಈ ಕುರಿತು ಮೂರು ದಿನಗಳ ಕಾಲ ಬಿಸಿ-ಬಿಸಿ ಚರ್ಚೆ ನಡೆದಿತ್ತು.
ಯಡಿಯೂರಪ್ಪಗೆ ರಿಲೀಫ್: ಕಲಬುರಗಿ ಹೈಕೋರ್ಟ್ನಿಂದ ಎಫ್ಐಆರ್ಗೆ ಮಧ್ಯಂತರ ತಡೆ
ಪ್ರತಿಪಕ್ಷ ಬಿಜೆಪಿ ಮತ್ತು ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್-ಜೆಡಿಎಸ್ ಈ ಆಡಿಯೋ ವಿವಾದವನ್ನು ಮರೆತು ಹೋಗಿವೆ. ಸದನದಲ್ಲಿ ಅಬ್ಬರಿಸಿ ಬೊಬ್ಬರಿದಿದ್ದ ವಿವಿಧ ಪಕ್ಷಗಳ ರಾಜಕೀಯ ನಾಯಕರು ಈಗ ಏನೋ ಆಗಿಲ್ಲ ಎಂಬಂತೆ ಎಸ್ಐಟಿ ವಿಚಾರವನ್ನು ಮರೆತು ಹೋಗಿದ್ದಾರೆ......
ಆಡಿಯೋದಲ್ಲಿರುವ ಧ್ವನಿ ನನ್ನದಲ್ಲ ಎಂದು ಪ್ರೀತಂ ಗೌಡ ಸ್ಪಷ್ಟನೆ
ಎಚ್.ಡಿ.ಕುಮಾರಸ್ವಾಮಿ ಪತ್ರಿಕಾಗೋಷ್ಠಿ
ಪ್ರತಿಪಕ್ಷ ಬಿಜೆಪಿ ಆರೇಷನ್ ಕಮಲದ ಮೂಲಕ ಮೈತ್ರಿ ಸರ್ಕಾರವನ್ನು ಬೀಳಿಸಲು ಹೊರಟಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ರಿಕಾಗೋಷ್ಠಿ ಕರೆದು ಆರೋಪಿಸಿದ್ದರು. ಜೆಡಿಎಸ್ ಶಾಸಕರನ್ನು ಸೆಳೆಯಲು ಮಾತುಕತೆ ನಡೆಸಿದ ಆಡಿಯೋ ಸಿಡಿ ಬಿಡುಗಡೆ ಮಾಡಿದ್ದರು. ಶಾಸಕರ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ರಮೇಶ್ ಕುಮಾರ್ ಅವರಿಗೂ ಲಂಚ ನೀಡಲಾಗುತ್ತದೆ ಎಂಬ ವಿಚಾರ ಇದರಲ್ಲಿತ್ತು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು.
ರಮೇಶ್ ಕುಮಾರ್ ಸಲಹೆ ನೀಡಿದ್ದರು
ಆಡಿಯೋ ಬಗ್ಗೆ ಸದನದಲ್ಲಿ ಪ್ರತಿಕ್ರಿಯೆ ನೀಡಿದ್ದ ಸ್ಪೀಕರ್ ರಮೇಶ್ ಕುಮಾರ್, 'ಹಾದಿ ಬೀದಿಯಲ್ಲಿ ಹೋಗುವವರು ನನ್ನ ಹೆಸರು ಬಳಸಲು ಬಿಡುವುದಿಲ್ಲ. ಆಡಿಯೋದಲ್ಲಿರುವ ಸಂಭಾಷಣೆ ಯಾರದ್ದು ಎಂದು ಗೊತ್ತಿಲ್ಲ. ಈ ಬಗ್ಗೆ ತನಿಖೆ ನಡೆಸಿ 15 ದಿನದಲ್ಲಿ ವರದಿ ನೀಡಬೇಕು. ಯಾವ ಸಂಸ್ಥೆ ಮೂಲಕ ತನಿಖೆ ಮಾಡಿಸಬೇಕು ಎಂದು ಸರ್ಕಾರ ತೀರ್ಮಾನಿಸಲಿ' ಎಂದು ಸ್ಪೀಕರ್ ಸಲಹೆ ನೀಡಿದ್ದರು.
ಎಸ್ಐಟಿ ತನಿಖೆಗೆ ಸರ್ಕಾರ ತೀರ್ಮಾನ
ಆಪರೇಷನ್ ಕಮಲದ ಆಡಿಯೋ ಬಗ್ಗೆ ವಿಧಾನಸಭೆಯಲ್ಲಿ ಮೂರು ದಿನಗಳ ಕಾಲ ಬಿಸಿ-ಬಿಸಿ ಚರ್ಚೆ ನಡೆದಿತ್ತು. ಅಂತಿಮವಾಗಿ ಸರ್ಕಾರ ಎಸ್ಐಟಿ ರಚನೆ ಮಾಡಿ ಆಡಿಯೋ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಘೋಷಣೆ ಮಾಡಿತ್ತು. ಫೆಬ್ರವರಿಯಲ್ಲಿ ಈ ಬಗ್ಗೆ ಚರ್ಚೆಗಳು ನಡೆದಿದ್ದವು, ಜೂನ್ ತಿಂಗಳು ಮುಗಿಯುತ್ತಾ ಬಂದರೂ ಇನ್ನೂ ಎಸ್ಐಟಿ ರಚನೆಯೇ ಆಗಿಲ್ಲ.
ಯಾರಿಗೂ ಬೇಡವಾದ ತನಿಖೆ
ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ಲೋಕಸಭಾ ಚುನಾವಣೆ ಎದುರಾಯಿತು. ಬಳಿಕ ಮೈತ್ರಿ ಸರ್ಕಾರದಲ್ಲಿ ಶಾಸಕರ ಬಂಡಾಯ, ಸಂಪುಟ ವಿಸ್ತರಣೆ ಎಂದು ಹಲವು ಚಟುವಟಿಕೆ ನಡೆದು ಎಲ್ಲರೂ ಆಪರೇಷನ್ ಕಮಲದ ಆಡಿಯೋ ವಿಚಾರ ಮರೆತಿದ್ದಾರೆ. ತಮ್ಮ ಹೆಸರು ಕೇಳಿ ಬಂದಿದ್ದರೂ ಸ್ಪೀಕರ್ ರಮೇಶ್ ಕುಮಾರ್ ಅವರು ಈ ಬಗ್ಗೆ ಈಗ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.