ರೌಡಿ ಸೈಲೆಂಟ್ ಸುನೀಲನಿಗೆ ಬೇನಾಮಿ ಹೆಸರಲ್ಲಿ ಕಸದ ಟೆಂಡರ್ ಕೊಡಿಸಿದ ಸಚಿವ: ಕಾಂಗ್ರೆಸ್ ಗಂಭೀರ ಆರೋಪ
ಬೆಂಗಳೂರು, ನವೆಂಬರ್, 30: ರೌಡಿ ಸುನೀಲನ ಜೊತೆ ವೇದಿಕೆ ಹಂಚಿಕೊಂಡ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಮುಂದುವರಿಸಿದೆ.
ಈ ವಿಚಾರವಾಗಿ ಬುಧವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಜಾಗತಿಕ ಗುಣಮಟ್ಟದ ತಂತ್ರಜ್ಞಾನ ಬಳಸಿಕೊಂಡು ಅಪರಾಧ ಪ್ರಕರಣಗಳನ್ನು ನಿಯಂತ್ರಿಸುತ್ತೇವೆ ಎಂದಿತ್ತು ಬಿಜೆಪಿ. ಆದರೆ ಪೊಲೀಸರೆದುರು ಪರೇಡ್ ಮಾಡ್ತಿದ್ದ ರೌಡಿಗಳು ಈಗ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರಲು ಪರೇಡ್ ಮಾಡ್ತಿದಾರೆ. ರೌಡಿಗಳ ಸಮರ್ಥನೆಗೆ ಇಳಿದಿದೆ ಬಿಜೆಪಿ. ಬೆಂಗಳೂರಿನ ಕ್ರೈಮ್ ರೇಟ್ ಹೆಚ್ಚಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ರೌಡಿಗಳು, ಕ್ರಿಮಿನಲ್ಗಳೇ ಬಿಜೆಪಿಗೆ ಆದರ್ಶ ವ್ಯಕ್ತಿಗಳು: ಸೈಲೆಂಟ್ ಸುನೀಲನ ವಿಚಾರವಾಗಿ ಕಾಂಗ್ರೆಸ್ ವಾಗ್ದಾಳಿ
ರೌಡಿ ಸೈಲೆಂಟ್ ಸುಲೀನನಿಗೆ ಕಸದ ಟೆಂಡರ್
'ಬಿಜೆಪಿ ಹಾಗೂ ರೌಡಿಗಳ ನಡುವಿನ ಬಾಂಧವ್ಯಕ್ಕೆ ಬಿಬಿಎಂಪಿ ಕಸ ವಿಲೇವಾರಿಯ ಟೆಂಡರ್ ಸಾಕ್ಷಿಯಾಗುತ್ತಿದೆ. ಬೇನಾಮಿ ಹೆಸರಲ್ಲಿ ಸೈಲೆಂಟ್ ಸುನೀಲನಿಗೆ ಕಸದ ಟೆಂಡರ್ ಕೊಡಿಸಿದ ಸಚಿವ ಯಾರು? ಆ ಸಚಿವರಿಗೂ ಸುನೀಲನಿಗೂ ಯಾವ ಜನ್ಮದ ಮೈತ್ರಿ? ಅರ್ಹತೆ ಇಲ್ಲದಿದ್ದರೂ ನಿಯಮ ಮೀರಿ ಟೆಂಡರ್ ಕೊಟ್ಟಿದ್ದು ಹೇಗೆ? ಏಕೆ? ಬಿಜೆಪಿ ಉತ್ತರಿಸುವುದೇ' ಎಂದು ಕೆಪಿಸಿಸಿ ಪ್ರಶ್ನಿಸಿದೆ.
'ಒಂದೆಡೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಸಿಎಂ ಬೊಮ್ಮಾಯಿ ರೌಡಿಗಳನ್ನು ಸಮರ್ಥಿಸಿ ಮಾತಾಡುತ್ತಾರೆ. ಮತ್ತೊಂದೆಡೆ ಎಲ್ಲೋ ಅಡಗಿದ್ದ ನಳೀನ್ ಕುಮಾರ್ ಕಟೀಲ್ ಧಿಡೀರ್ ಎದ್ದು ಬಂದು ಸೈಲೆಂಟ್ ಸುನೀಲನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎನ್ನುತ್ತಾರೆ. ರೌಡಿ ಮೋರ್ಚಾ ಮಾಡುವ ವಿಚಾರದಲ್ಲೂ #BJP vs BJP ಕಾದಾಟ ನಡೆಯುತ್ತಿದೆಯೇ' ಎಂದು ಕೇಳಿದೆ.
'ಡ್ಯಾಮೇಜ್ ಕಂಟ್ರೋಲಿಗಾಗಿ ಸೈಲೆಂಟ್ ಸುನಿಲನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದ ನಳೀನ್ ಕಟೀಲ್ ಫೈಟರ್ ರವಿ ಪಕ್ಷ ಸೇರಿದ್ದರ ಬಗ್ಗೆ ಸೈಲೆಂಟ್ ಆಗಿರುವುದೇಕೆ? ಫೈಟರ್ ರವಿ ರೌಡಿ ಶೀಟರ್ ಅಲ್ಲವೇ? ಇಂತಹ ಸದಾರಮೆ ನಾಟಕ ಮಾಡುವುದಕ್ಕಿಂತ ರೌಡಿ ಮೋರ್ಚಾವನ್ನು ಘೋಷಣೆ ಮಾಡಿಬಿಡಲಿ' ಎಂದು ಕಾಂಗ್ರೆಸ್ ಹರಿಹಾಯ್ದಿದೆ.
ಸೈಲೆಂಟ್ ಸುನೀಲನ ವಿಚಾರವಾಗಿ ಬಿಜೆಪಿ ವಿರುದ್ಧ ಸಿದ್ದು ವಾಗ್ದಾಳಿ
ರೌಡಿ ಸೈಲೆಂಟ್ ಸುನೀಲನ ಪಕ್ಕದಲ್ಲಿ ಬಿಜೆಪಿ ನಾಯಕರು ಇದ್ದಾರೆ. ಇಂತಹ ಸಮಯದಲ್ಲಿ ಸಿಸಿಬಿ ಪೊಲೀಸರಿಗೆ ಆತನನ್ನು ಬಂಧಿಸುವ ಧೈರ್ಯವಾದರೂ ಹೇಗೆ ಬರುತ್ತೆ ಎಂದು ವಿಧಾನಸಭೆ ವಿರೋಧ ಪರಿಷತ್ ನಾಯಕ ಸಿದ್ದರಾಮಯ್ಯ ಕೇಳಿದ್ದಾರೆ.
ರೌಡಿ ಸುನೀಲನ ಜೊತೆ ಬೆಂಗಳೂರಿನ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಪಿ.ಸಿ.ಮೋಹನ ವೇದಿಕೆ ಹಂಚಿಕೊಂಡಿದ್ದಾರೆ. ಡಕಾಯತಿ, ಬೆದರಿಕೆ, ಕೊಲೆ ಪ್ರಕರಣಗಳಲ್ಲಿ ಭಾಗಿಯಾದವರ ಜೊತೆ ಬಿಜೆಪಿ ಮುಖಂಡರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಬಿಜೆಪಿಯವರು ಹೇಳುವುದು ವೇದಾಂತ, ತಿನ್ನುವುದು ಮಾತ್ರ ಬದ್ನೆಕಾಯಿ ಎಂದು ಹರಿಹಾಯ್ದಿದ್ದಾರೆ.
ಕಾಂಗ್ರೆಸ್ನಲ್ಲಿ ರೌಡಿ ಶೀಟರ್ಗಳಿದ್ದಾರೆ ಎಂದು ಸಿಎಂ ಬೊಮ್ಮಾಯಿ
ತಮ್ಮ ಪಕ್ಷದಲ್ಲಿ ಎಷ್ಟು ಜನ ರೌಡಿ ಶೀಟರ್ಗಳಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸಿಕೊಳ್ಳಲಿ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಸೈಲೆಂಟ್ ಸುನೀಲನ ಜೊತೆ ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡ ವಿಚಾರವಾಗಿ ಬೊಮ್ಮಾಯಿ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಸೈಲೆಂಟ್ ಸುನೀಲನ ಜೊತೆ ಬಿಜೆಪಿ ನಾಯಕರ ನಂಟಸ್ತಿಕೆ
'ಮೋಸ್ಟ್ ವಾಂಟೆಡ್ ಲಿಸ್ಟ್ನಲ್ಲಿರುವ ರೌಡಿ ಸುನೀಲ ಪೊಲೀಸರ ಕೈಗೆ ಸಿಗುವುದಿಲ್ಲ. ಆದರೆ, ಬಿಜೆಪಿ ನಾಯಕರ ಜೊತೆಯಲ್ಲಿ ಸಿಗುತ್ತಾನೆ. ಕಳ್ಳರು, ಸುಳ್ಳರು, ಭ್ರಷ್ಟರು, ಗುಂಡಾಗಳು, ರೌಡಿಗಳು ಎಲ್ಲರಿಗೂ ಒಂದೇ ಸೂರು ಬಿಜೆಪಿ. ಪೊಲೀಸರು ಹುಡುಕುತ್ತಿದ್ದ ರೌಡಿಯ ಜೊತೆಗೆ ನಿಮ್ಮ ನಾಯಕರಿಗೆ ಏನು ಕೆಲಸವಿತ್ತು? ಆತನ ಬಂಧನ ಆಗದಿರುವ ಹಿಂದೆ ಬಿಜೆಪಿ ನಾಯಕರ ಕೈವಾಡ ಇದೆಯೇ' ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು.