ಶ್ರೀಗಳ ಆಶೀರ್ವಾದದಿಂದ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವಂತಾಗಲಿ: ಪಿ ವಿ ಸಿಂಧು
ಬೆಂಗಳೂರು, ಸೆ 8: ರಿಯೋ ಒಲಿಂಪಿಕ್ಸ್ ನಲ್ಲಿ ರಜತ ಪದಕ ಪಡೆದ ಪಿ ವಿ ಸಿಂಧು, ಅವರ ಕೋಚ್ ಪದ್ಮಭೂಷಣ ಗೋಪಿಚಂದ್ ಮತ್ತು ಅರವಿಂದ್ ಭಟ್ ಗುರುವಾರ (ಸೆ 8) ರಾಮಚಂದ್ರಾಪುರದ ಶಾಖಾಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.
ಶ್ರೀಗಳ ಅನುಗ್ರಹ ಪಡೆದು ಮಾತನಾಡಿದ ಪಿ ವಿ ಸಿಂಧು, ರಾಘವೇಶ್ವರ ಶ್ರೀಗಳ ಆಶೀರ್ವಾದ ದೊರಕಿದ್ದು ತುಂಬಾ ಖುಷಿ ಆಗಿದೆ, ಶ್ರೀಗಳ ಆಶೀರ್ವಾದದಿಂದ ಮುಂದಿನ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವಂತಾಗಲಿ ಎಂದು ಹೇಳಿದ್ದಾರೆ. (ಸಾಕ್ಷಿ ಮಲಿಕ್ ವರಿಸಲಿದ್ದಾರೆ ಈ ಕುಸ್ತಿ ಪಟುವನ್ನು)
ಕ್ರೀಡಾಕೂಟಕ್ಕೆ ತೆರಳುವಾಗ ಪ್ರತಿ ಬಾರಿಯೂ ಶ್ರೀಗಳ ಆಶೀರ್ವಾದ ಪಡೆಯುತ್ತಿದ್ದೆ, ಶ್ರೀಗಳಿಂದ ಪ್ರೇರಣೆ ಪಡೆದಿದ್ದೇನೆ. ಗೋಸಂಪತ್ತು ಇಂದು ಅವಸಾನದ ಹಾದಿಯಲ್ಲಿದ್ದು, ಗೋವಿನ ಕುರಿತಾಗಿ ಶ್ರೀಮಠದ ಆಂದೋಲನ ಶ್ಲಾಘನೀಯ ಎಂದು ಪದ್ಮಭೂಷಣ ಗೋಪಿಚಂದ್ ಸಂತೋಷ ವ್ಯಕ್ತ ಪಡಿಸಿದ್ದಾರೆ.
ದೇಶಕ್ಕೆ ಗೌರವ ತಂದು ಕೊಟ್ಟವರು ಶ್ರೀಮಠಕ್ಕೆ ಆಗಮಿಸಿರುವುದು ಸಂತಸದ ವಿಚಾರ, ಇವರುಗಳಲ್ಲಿರುವ ಸರಳತೆ, ವಿನಯ ಶ್ಲಾಘನೀಯ. ಸಿಂಧು, ಗೋಪೀಚಂದ್ ಮತ್ತು ಅರವಿಂದ್ ಭಟ್ ತಮ್ಮ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಿ, ದೇಶದ ಗೌರವವನ್ನು ಮತ್ತಷ್ಟು ಹೆಚ್ಚಿಸಲಿ ಎಂದು ರಾಘವೇಶ್ವರ ಶ್ರೀಗಳು ಆಶೀರ್ವದಿಸಿದ್ದಾರೆ.
ಗುರುವಾರ ಗೋಚಾತುರ್ಮಾಸ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಮಾತನಾಡುತ್ತಿದ್ದ ಶ್ರೀಗಳು, ಗೋವು ಎಲ್ಲರಿಗೂ ಹಾಲುಕೊಡುತ್ತದೆ, ಆದರೆ ನಾವು ಗೋವು ಹಾಲು ಕೊಡುವವವರೆಗೆ ಕರೆದುಕೊಂಡು, ನಂತರ ಅದನ್ನು ಬೀದಿಗೆ ತಳ್ಳುತ್ತೇವೆ.
ಬೀದಿಯಲ್ಲಿ ತಿರುಗುತ್ತಾ, ಪ್ಲಾಸ್ಟಿಕ್ ಇತ್ಯಾದಿಗಳನ್ನು ಗೋವು ತಿನ್ನುವಂತಾಗಿರುವುದು ಮನುಷ್ಯ ಕುಲಕ್ಕೇ ಕಳಂಕ, ದಿಕ್ಕಿಲ್ಲದ ದೇಶೀ ಗೋವುಗಳನ್ನು ಕಾನೂನಿನ್ವಯ ನೀಡಿದರೆ ಅವುಗಳಿಗೆ ಆಶ್ರಯ ಒದಗಿಸಲು ಶ್ರೀಮಠವು ಸಿದ್ದವಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಈ ಸಂದರ್ಭದಲ್ಲಿ ಹೇಳಿದರು.
ಕಟುಕರಿಗೆ ಇಂತಹ ಗೋವುಗಳು ಸುಲಭದ ತುತ್ತಾಗಿದ್ದು, ದಿಕ್ಕಿಲ್ಲದ ಗೋವುಗಳಿಗೆ ಶ್ರೀಮಠ ದಿಕ್ಕಾಗಲಿದೆ. ಮುಂದೆ ನಡೆಯಲಿರುವ ಗೋಯಾತ್ರೆಯಲ್ಲಿಯೂ ಈ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ರಾಘವೇಶ್ವರ ಶ್ರೀಗಳು ಹೇಳಿದರು. (ಮೋದಿ ಯೋಜನೆಗೆ ಸಿಂಧು ರಾಯಭಾರಿ)
ತಮ್ಮ ಹೋಟೆಲ್ ನಲ್ಲಿ ತಂಗಿದವರಿಂದ ನಿತ್ಯ ಗೋಪೂಜೆ ಮಾಡಿಸಿ, ವಿಶಿಷ್ಟರೀತಿಯಲ್ಲಿ ಗೋಸೇವೆಯಲ್ಲಿ ತೊಡಗಿಕೊಂಡಿರುವ ಯೋಗೀಶ್ ಭಟ್ ಅವರಿಗೆ ಪೂಜ್ಯ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು.
ಶ್ರೀಭಾರತೀಪ್ರಕಾಶನವು ಹೊರತಂದ ಮಂಗಲಪಾಂಡೆ ಕಥಾಧಾರಿತ ಗೋಕಥಾ ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯ ಮುದ್ರಿಕೆಯನ್ನು ಸಾನ್ನಿಧ್ಯ ವಹಿಸಿದ್ದ ಸಂತರು ಹಾಗೂ ಒಲಿಂಪಿಕ್ಸ್ ಪದಕ ವಿಜೇತೆ ಪಿ ವಿ ಸಿಂಧು ಮತ್ತು ಗೋಪಿಚಂದ್ ಲೋಕಾರ್ಪಣೆ ಮಾಡಿದರು.