ಸರ್ಕಾರಿ ನೌಕರರು ಭಯದ ವಾತಾವರಣದಲ್ಲಿ ಕೆಲಸ ಮಾಡುವಂತಾಗಿದೆ!
ಬೆಂಗಳೂರು, ಜ. 08: ರಾಜ್ಯ ಸರ್ಕಾರಿ ನೌಕರರ ಸೇವಾ ನಿಯಮಗಳ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಕುಟಂಬದ ಸದಸ್ಯರು ರಾಜಕೀಯದಲ್ಲಿ ಪಾಲ್ಗೊಳ್ಳಬಾರದು ಎಂಬ ಅಂಶವನ್ನು ಕೈ ಬಿಡಲಾಗಿದ್ದು, ಉಳಿದಂತೆ ಆರ್ಥಿಕ ವ್ಯವಹಾರ ಒಳಗೊಳ್ಳುವ ಸಾಂಸ್ಕೃಂತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಸೂಚಿಸಲಾಗಿದೆ.
ಸರ್ಕಾರಿ ನೌಕರನು ಯಾವುದೇ ಸಂಸ್ಥೆ ಮತ್ತು ಫರ್ಮ್ನಲ್ಲಿ ತನ್ನ ಕುಟುಂಬದ ಸದಸ್ಯರಿಗೆ ಉದ್ಯೋಗ ಕೊಡಿಸಲು ನೇರ ಹಾಗೂ ಪರೋಕ್ಷವಾಗಿ ಪ್ರಭಾವ ಬೀರುವಂತಿಲ್ಲ. ಸರ್ಕಾರದ ಪೂರ್ವಾನುಮತಿ ಪಡೆಯದೇ ಸರ್ಕಾರಿ ನೌಕರ ತನ್ನ ಮಗ ಅಥವಾ ಮಗಳನ್ನು ಸರ್ಕಾರದೊಂದಿಗೆ ಅಧಿಕೃತ ವ್ಯವಹಾರ ಹೊಂದಿರುವ ಫರ್ಮ್ ಅಥವಾ ಸಂಸ್ಥೆಯಲ್ಲಿ ಉದ್ಯೋಗ ಒಪ್ಪಿಕೊಳ್ಳಲು ಅವಕಾಶ ನೀಡುವಂತಿಲ್ಲ. ಉದ್ಯೋಗ ಒಪ್ಪಿಕೊಳ್ಳಲು ಪೂರ್ವಾನುಮತಿ ಪಡೆಯಲು ಸಮಯವಿಲ್ಲದಿರುವಾಗ ಸರ್ಕಾರಕ್ಕೆ ವರದಿ ಸಲ್ಲಿಸಿ ಅನುಮತಿ ಪಡೆಯಬಹುದು ಎಂದು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.
ರಾಜಕೀಯ ಪಕ್ಷದೊಂದಿಗೆ ಸಂಬಂಧ
ಸರ್ಕಾರಿ ನೌಕರನು ಯಾವುದೇ ರಾಜಕೀಯ ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಚುನಾವಣೆಗಳಲ್ಲಿ ಸ್ಪರ್ಧಿಸುವಂತಿಲ್ಲ. ಸಂಘ ಸಂಸ್ಥೆೆಯ ಸದಸ್ಯನಾಗಿರತಕ್ಕದಲ್ಲ. ಯಾವುದೇ ರಾಜಕೀಯ ಚಳವಳಿಗಳಲ್ಲಿ ಪಾಲ್ಗೊಳ್ಳುವುದು ಹಾಗೂ ಯಾವುದೇ ರೀತಿಯ ವಂತಿಗೆ ನೀಡುವಂತಿಲ್ಲ. ಸರ್ಕಾರ ಉರುಳಿಸುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ.
ಧಾರಾವಾಹಿಗಳಲ್ಲಿ ಪಾಲ್ಗೊಳ್ಳುವಂತಿಲ್ಲ
ಸರ್ಕಾರಿ ನೌಕರರು ಯಾವುದೆ ಆಕಾಶವಾಣಿ, ದೂರದರ್ಶನ, ಪತ್ರಿಕೆಗಳಿಗೆ ಲೇಖನ ಬರೆಯುವುದು, ಸಾಂಸ್ಕೃತಿಕ ಕಾರ್ಯಕ್ರಮ ನೀಡುವಂತಿಲ್ಲ. ಯಾವುದೇ ಪುಸ್ತಕ ಪ್ರಕಟಿಸುವಂತಿಲ್ಲ. ಪತ್ರಿಕೆಗಳಿಗೆ ಲೇಖನ ಬರೆಯುವಂತಿಲ್ಲ. ದೂರದರ್ಶನ ಹಾಗೂ ಇತರ ವಾಹಿನಿಗಳ ಧಾರಾವಾಹಿಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಆರ್ಥಿಕ ಉದ್ದೇಶವಲ್ಲದ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆ ನಡೆಸಲು ಯಾವುದೇ ಅನುಮತಿ ಪಡೆಯುವ ಅಗತ್ಯವಿಲ್ಲ.
ಸರ್ಕಾರದ ಕಾರ್ಯವಿಧಾನ ಟೀಕಿಸುವಂತಿಲ್ಲ
ಸರ್ಕಾರದ ಅನುಮತಿ ಇಲ್ಲದೇ ಯಾವುದೇ ರೀತಿಯ ವಿದೇಶ ಪ್ರವಾಸ ಕೈಗೊಳ್ಳುವಂತಿಲ್ಲ. ಯಾವುದೇ ರೀತಿಯಲ್ಲಿ ಸರ್ಕಾರದ ಕಾರ್ಯ ವಿಧಾನವನ್ನು ಟೀಕಿಸುವಂತಿಲ್ಲ. ಸರ್ಕಾರದ ಅನುಮತಿ ಇಲ್ಲದೆ ಯಾವುದೇ ಸಮಿತಿ ಮತ್ತು ಪ್ರಾಧಿಕಾರದ ಮುಂದೆ ಸಾಕ್ಷ್ಯ ನೀಡುವಂತಿಲ್ಲ. ಸರ್ಕಾರಿ ನೌಕರರು ಯಾವುದೇ ರೀತಿಯ ವಂತಿಗೆ ಹಾಗೂ ಉಡುಗೊರೆ ಪಡೆಯುವಂತಿಲ್ಲ. ವಿವಾಹ ವಾರ್ಷಿಕೋತ್ಸವ, ಧಾರ್ಮಿಕ ವಿಧಿ ವಿಧಾನಗಳ ಸಂದರ್ಭದಲ್ಲಿ ನೀಡುವ ಉಡುಗೊರೆ ಪಡೆಯಲು ಅವಕಾಶವಿದೆ.
ಆದರೆ, ಅದು ನೌಕರರು ಪಡೆಯುವ ಮಾಸಿಕ ಸಂಬಳಕ್ಕಿಂತ ಹೆಚ್ಚಾಗಿದ್ದರೆ, ಸಂಬಂಧ ಪಟ್ಟ ಪ್ರಾಧಿಕಾರಕ್ಕೆ ವರದಿ ನೀಡುವಂತೆ ಸೂಚಿಸಲಾಗಿದೆ. ಅಪ್ರಾಪ್ತರನ್ನು ಕೆಲಸಕ್ಕೆ ಹಚ್ಚಿಕೊಳ್ಳುವಂತಿಲ್ಲ. ಪತಿ ಅಥವಾ ಪತ್ನಿ ಜೀವಂತವಾಗಿದ್ದಾಗ ಮತ್ತೊಬ್ಬರೊಂದಿಗೆ ವಿವಾಹ ಸಂಬಂಧ ಹೊಂದುವಂತಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ವ್ಯಕ್ತಿ ಸ್ವಾತಂತ್ರ್ಯವನ್ನು ಸರ್ಕಾರ ಕಿತ್ತುಕೊಂಡಿದೆ
ಒಬ್ಬ ವ್ಯಕ್ತಿಯ ಸ್ವಾತಂತ್ರ್ಯವನ್ನು ಸರ್ಕಾರ ಕಿತ್ತುಕೊಂಡಿದೆ. ಸರ್ಕಾರಿ ನೌಕರರು ಭಯದ ವಾತಾವರಣದಲ್ಲಿ ಕೆಲಸ ಮಾಡುವಂತೆ ಮಾಡಿದೆ. ಇದನ್ನು ತೀವ್ರವಾಗಿ ವಿರೋಧಿಸುತ್ತೇವೆ. ಜನವರಿ 12 ರಂದು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸುತ್ತೇವೆ ಎಂದು ಸಚಿವಾಲಯದ ಸಂಘದ ಅಧ್ಯಕ್ಷ ಗುರುಸ್ವಾಮಿ ಹೇಳಿದ್ದಾರೆ.