ಸಚಿವ ನಾಗೇಶ್ ಮನೆಗೆ ಮುತ್ತಿಗೆ: 'ಪಾಪ ಹುಡುಗರು ಬಾವುಟ ತಗೊಂಡು ಹೋಗಿದ್ದು, ಪೆಟ್ರೋಲ್ ಅಲ್ಲ'
ಬೆಂಗಳೂರು, ಜೂನ್ 2: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ರ ತಿಪಟೂರು ಮನೆಯ ಮೇಲೆ ಕಾಂಗ್ರೆಸ್ಸಿನ ವಿದ್ಯಾರ್ಥಿ ಸಂಘಟನೆ NSUI ಮುತ್ತಿಗೆ ಹಾಕಿದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದ ರಾಮಲಿಂಗಾ ರೆಡ್ಡಿ, "ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೂ ಇದೆ. ಪಾಪ ಹುಡುಗರು ಬಾವುಟ ತೆಗೆದುಕೊಂಡು ಹೋಗಿದ್ದರು, ಪೆಟ್ರೋಲ್ ತೆಗೆದುಕೊಂಡು ಹೋಗಿರಲಿಲ್ಲ"ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ: ತಿಪಟೂರಿನಲ್ಲಿ ಬಿ.ಸಿ. ನಾಗೇಶ್ ಮನೆಗೆ NSUI ಮುತ್ತಿಗೆ
ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದ ಹಿನ್ನೆಲೆಯಲ್ಲಿ ತಿಪಟೂರಿನಲ್ಲಿರುವ ಸಚಿವರ ಮನೆಗೆ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್ಎಸ್ಯುಐ) ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು.
"ಪ್ರತಿಭಟನೆ ಮಾಡುವುದರಲ್ಲಿ ತಪ್ಪೇನಿದೆ? ಬಿಜೆಪಿಯವರು ಹುಟ್ಟು ಸುಳ್ಳುಗಾರರು, ಬೆಂಕಿ ಹಚ್ಚಲು ಬಂದಿದ್ದರು ಎಂದು ಹೇಳಿದ್ದರು. ಮಾಡುವುದೆಲ್ಲಾ ಕಚಡಾ ಕೆಲಸ, ಬಾಯಲ್ಲಿ ಸುಳ್ಳು ಬಿಟ್ಟು ಬೇರೇನೂ ಬರುವುದಿಲ್ಲ"ಎಂದು ರಾಮಲಿಂಗಾ ರೆಡ್ಡಿ ಕಿಡಿಕಾರಿದ್ದಾರೆ.
"ನಮ್ಮ ವಿದ್ಯಾರ್ಥಿಗಳ ಮೇಲೆ ಸುಮ್ಮನೆ ಗೂಬೆ ಕೂರಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಪ್ರತಿಭಟನೆ ನಡೆಸಲು ಬಂದವರ ಬಗ್ಗೆ ಸುಳ್ಳು ಮಾಹಿತಿಯನ್ನು ರಾಜ್ಯಕ್ಕೆ ಹರಡುತ್ತಿದ್ದಾರೆ. ಈ ದೇಶವನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಾರೆ ಎನ್ನುವುದೇ ಗೊತ್ತಾಗುತ್ತಿಲ್ಲ. ನ್ಯಾಯ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಪ್ರತಿಭಟನೆಯೂ ಒಂದು ಭಾಗವಾಗಿದೆ. "ಎಂದು ರಾಮಲಿಂಗಾ ರೆಡ್ಡಿ ಆತಂಕ ವ್ಯಕ್ತ ಪಡಿಸಿದ್ದಾರೆ.
ಎರಡು ವಾಹನಗಳಲ್ಲಿ ಆಗಮಿಸಿದ್ದ ಕಾರ್ಯಕರ್ತರು, ತಿಪಟೂರಿನ ಸಚಿವರ ನಿವಾಸದ ಮೇಲೆ ಹಠಾತ್ ದಾಳಿ ನಡೆಸಿದ್ದರು. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ, NSUIನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಸೇರಿದಂತೆ 15 ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದರು.
Recommended Video