Monsoon Rain: ಶುಭ ಸುದ್ದಿ, ಈ ವರ್ಷ ವಾಡಿಕೆಗಿಂತ ಅಧಿಕ 'ಹಿಂಗಾರು ಮಳೆ 'ಸಾಧ್ಯತೆ, ಜಿಲ್ಲಾವಾರು ಮಾಹಿತಿ
ಬೆಂಗಳೂರು, ಅಕ್ಟೋಬರ್ 04: ತಡವಾಗಿ ಆರಂಭವಾಗುವ ಜೊತೆಗೆ ವಾಡಿಕೆಗಿಂತ ಕಡಿಮೆ ಸುರಿದ ಮುಂಗಾರು ಮಳೆ ಕೊನೆಗೊಳ್ಳಲಿದೆ. ಐಎಂಡಿ ಪ್ರಕಾರ ಅಕ್ಟೋಬರ್ 1ರಿಂದಲೇ 'ಹಿಂಗಾರು ಮಳೆ' (North East Monsoon) ಆರಂಭವಾಗಿದೆ. ಹಿಂಗಾರು ಋತುವಿನ ಮುಂದಿನ ಮೂರು ತಿಂಗಳು ಕರ್ನಾಟಕಕ್ಕೆ ವಾಡಿಕೆಗಿಂತ ಅಧಿಕ ಮಳೆ ಆಗಲಿದೆ ಎಂದು ಬೆಂಗಳೂರಿನ ಹವಾಮಾನ ತಜ್ಞ ಮತ್ತು ವಿಜ್ಞಾನಿ ಡಾ.ಪ್ರಸಾದ್ ಮಾಹಿತಿ ನೀಡಿದ್ದಾರೆ. ಈ ಮೂಲಕ ರೈತರಿಗೆ ಶುಭ ಸುದ್ದಿಯೊಂದು ದೊರೆತಿದೆ.
ತಜ್ಞರು ನೀಡಿರುವ ದೀರ್ಘಾವಧಿ ಮುನ್ಸೂಚನೆ ಪ್ರಕಾರ, ಈ ಬಾರಿ ಹಿಂಗಾರು ಮಳೆ ವಾಡಿಕೆಗಿಂತ ಶೇಕಡಾ 40-50ರಷ್ಟು ಅಧಿಕ ಸುರಿಯಲಿದೆ. ಅಕ್ಟೊಬರ್ 1ರಿಂದಲೇ ಮುಕ್ತಾಯವಾಗಬೇಕಿದ್ದ ಮುಂಗಾರು ಮಳೆ, ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಇನ್ನೂ ಜೀವಂತವಿದೆ. ಇತ್ತ ಹಿಂಗಾರು ಮಳೆ ಸುರಿಸುವ ಮೋಡಗಳ ಚಲನೆ ಆರಂಭವಾಗಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಹಿಂಗಾರು ಸಕ್ರಿಯವಾಗಿಲ್ಲ ಎನ್ನಲಾಗಿದೆ.

ವಿಜ್ಞಾನಿ ಡಾ.ಪ್ರಸಾದ್ ಅವರು ಹೇಳವಂತೆ ರಾಜಸ್ಥಾನ, ಗುಜರಾತ್, ಉತ್ತರಾಖಂಡ, ಉತ್ತರ ಪ್ರದೇಶಭಾಗದಲ್ಲಿ ಮುಂಗಾರು ಮಳೆ ಇನ್ನೂ ಇದೆ. ಆರಂಭವಾಗಲಿರುವ ಹಿಂಗಾರು ಮಳೆ ಮುಂದಿನ ಮೂರು ತಿಂಗಳಲ್ಲಿ ಅಬ್ಬರಿಸಲಿದ್ದು, ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಗಳು ಎಂದು ತಿಳಿಸಿದರು.
ಈ ಜಿಲ್ಲೆಗಳಿಗೆ ಅತ್ಯಧಿಕ ಮಳೆ
ಇದೇ ತಿಂಗಳ ಅಕ್ಟೋಬರ್ ನಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೊಡುಗು, ಮಂಡ್ಯ, ಮೈಸೂರು, ಹಾಸನ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಅತ್ಯಧಿಕ ಮಳೆ ಸುರಿಯುವ ಲಕ್ಷಣಗಳು ಇವೆ. ಇದೇ ವೇಳೆ ಕಲ್ಯಾಣ ಕರ್ನಾಟಕ ಭಾಗದ ಬೀದರ್, ರಾಯಚೂರು, ಕಲಬುರಗಿ ಮತ್ತಿತರ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗುವ ಸಾಧ್ಯತೆಗಳು ಇವೆ ಎಂದು ವಿಜ್ಞಾನಿ ತಿಳಿಸಿದ್ದಾರೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಬೆಳಗಾವಿ, ಧಾರವಾಡ, ಹಾವೇರಿ ಗದಗ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ವಿಜಯನಗರ ಸೇರಿದಂತೆ ಉಳಿದ ಜಿಲ್ಲೆಗಳಲ್ಲಿ ನಿರೀಕ್ಷೆಯಷ್ಟು ಮಳೆ ಆಗಲಿದೆ ಎಂದರು.
ವಾತಾವರಣದಲ್ಲಿ ಬದಲಾವಣೆ: ಏರುಗತಿಯಲ್ಲಿ ತಾಪಮಾನ
ಹವಾಮಾನದಲ್ಲಿ ಪ್ರಭಾವ ಬೀರುವ ಎಲ್ನಿನೋ ತೀವ್ರವಾಗಿದ್ದು, ಇದು ಮುಂದಿನ 2024ರ ಫೆಬ್ರವರಿ ತಿಂಗಳವರೆಗೆ ಮುಂದುವರಿಯಲಿದೆ. ಈ ಕಾರಣದಿಂದ ವಾತಾವರಣದಲ್ಲಿ ತಾಪಮಾನವು ಏರುಗತಿಯಲ್ಲಿರಲಿದೆ ಎಂದು ಐಎಂಡಿ ತನ್ನ ದೀರ್ಘಾವಧಿ ಮುನ್ಸೂಚನಾ ವರದಿಯಲ್ಲಿ ಮಾಹಿತಿ ನೀಡಿದೆ.
ಕರ್ನಾಟಕದಲ್ಲಿ ಮುಂದಿನ ಒಂದು ವಾರ ಅಲ್ಲಲ್ಲಿ ಹಗುರವಾಗಿ ಒಂದೆರಡು ಕಡೆ ಸಾಧಾರಣ ಮಳೆ ಆಗಲಿದೆ. ಮುಂದಿನ ಐದು ಕರಾವಳಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಂದು ವಾರಗಳ ಕಾಲ ತುಂತುರು ಮಳೆ ಸಂಭವವಿದೆ. ಇನ್ನೂ ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಹಗುರ ಮಳೆ ಸುರಿಯಲಿದೆ.
ಅಕ್ಟೋಬರ್ 10ರ ನಂತರ ದಕ್ಷಿಣ ಒಳನಾಡಿಗೆ ನಾಲ್ಕು ದಿನ ಹೆಚ್ಚು ಮಳೆ ಸಾಧ್ಯತೆ ಇದೆ. ಈ ವೇಳೆ ಬೆಂಗಳೂರು, ಮೈಸೂರು, ಮಂಡ್ಯ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಸೇರಿದಂತೆ ಈ ಭಾಗದಲ್ಲಿ ಅಧಿಕ ಮಳೆಯಾಗಲಿದೆ. ಒಟ್ಟಾರೆ ಹಿಂಗಾರು ಮಳೆ ರೈತರಿಗೆ ಈ ವರ್ಷ ವರದಾನವಾಗಲಿದೆ. ಆದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆ ಆಗದೇ ತುಸು ಸಮಸ್ಯೆ ಉಂಟಾಗುವ ಸಾಧ್ಯತೆಗಳು ಇವೆ.












Click it and Unblock the Notifications