ನಿಗಮ ಮಂಡಳಿಗಳಿಗೆ ಆ.30ರೊಳಗೆ ನೇಮಕ
ಬೆಂಗಳೂರು, ಜೂ. 30 : ಹಲವು ದಿನಗಳಿಂದ ಕಗ್ಗಂಟಾಗಿರುವ ನಿಗಮ ಮಂಡಳಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ನೇಮಕ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಆಗಸ್ಟ್ 30ರೊಳಗೆ ನೇಮಕಾತಿಗಳನ್ನು ಮಾಡುವುದಾಗಿ ಸ್ವತಃ ಮುಖ್ಯಮಂತ್ರಿಗಳು ಗಡುವು ನೀಡಿದ್ದಾರೆ.
ಭಾನುವಾರ ಮುಕ್ತಾಯಗೊಂಡ ಕಾಂಗ್ರೆಸ್ ಪ್ರತಿನಿಧಿಗಳ ಸಭೆಯ ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಆ.30ರೊಳಗೆ ನಿಗಮ-ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಕ ಮಾಡುವುದಾಗಿ ಭರವಸೆ ನೀಡಿದರು. ಸದ್ಯ ನಡೆಯುತ್ತಿರುವ ವಿಧಾನಮಂಡಲದ ಮುಂಗಾರು ಅಧಿವೇಶನ ಜು.30ರಂದು ಅಂತ್ಯಗೊಳ್ಳಲಿದ್ದು, ನಂತರ ನೇಮಕಾತಿ ಪ್ರಕ್ರಿಯೆಗಳನ್ನು ಆರಂಭಿಸಲಾಗುತ್ತದೆ ಎಂದರು. [ಕಾಂಗ್ರೆಸ್ಸಿನಿಂದ ಸಾಲು-ಸಾಲು ಕಾರ್ಯಕ್ರಮಗಳು]

ಎರಡು ದಿನಗಳ ಸಭೆಯಲ್ಲಿ ನಿಗಮ-ಮಂಡಳಿ ನೇಮಕಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆ ನಡೆದಿದೆ. ನೇಮಕಕ್ಕೆ ಕಾರ್ಯಕರ್ತರು, ಮುಖಂಡರು ಒಕ್ಕೊರಲ ಧ್ವನಿಯಲ್ಲಿ ಬೇಡಿಕೆಯಿಟ್ಟಿದ್ದಾರೆ. ಆದ್ದರಿಂದ ಆ.30ರೊಳಗೆ ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. [ಸೋಲಿನ ಆತ್ಮಾವಲೋಕನ ಮಾಡಿಕೊಂಡ ಕಾಂಗ್ರೆಸ್]
ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ : ಪಕ್ಷದ ಕಾರ್ಯಕರ್ತರು ಹಶಾಶರಾಗಬೇಕಿಲ್ಲ, ನಾನು ಇರುತ್ತೇನೋ ಇಲ್ಲವೋ? ಸರ್ಕಾರ ಮಾತ್ರ ಐದು ವರ್ಷಗಳನ್ನು ಪೂರ್ಣಗೊಳಿಸಲಿದೆ ಎಂದು ಸಿದ್ದರಾಮಯ್ಯ ಹೇಳಿದರು. ನನ್ನ ಸರ್ಕಾರದ ಅವಧಿಯಲ್ಲಿ ಕಾರ್ಯಕರ್ತರ ಪ್ರತಿಯೊಂದು ಅಹವಾಲುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ. ಪಕ್ಷ ಸಂಘಟನೆಗೆ ದುಡಿಯಿರಿ ಎಂದು ಮನವಿ ಮಾಡಿದರು.
ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಕೊಟ್ಟ ಜವಾಬ್ದಾರಿಗಳನ್ನು ನಾವು ನಿಭಾಯಿಸಬೇಕಿದೆ. ಈ ಐದು ವರ್ಷಗಳು ಮಾತ್ರವಲ್ಲ ಮುಂದಿನ ಅವಧಿಗೂ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಸಿದ್ದರಾಮಯ್ಯ ಕಾರ್ಯಕರ್ತರಿಗೆ ಕರೆ ನೀಡಿದರು.












Click it and Unblock the Notifications