ಹುಲಿ ಸಂರಕ್ಷಿತ ಅರಣ್ಯಕ್ಕೆ ಒಂದು ವಾರ ಹೋಗದಿದ್ದರೆ ಒಳಿತು!
ಬೆಂಗಳೂರು, ಜನವರಿ 04 : ಹುಲಿ ಸಫಾರಿ ಪ್ರಿಯರಿಗೊಂದು ಕಹಿ ಸುದ್ದಿ ಇದೆ, ನೀವೂ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸಫಾರಿಗೆ ಹೋಗಬೇಕು ಅಂತಾ ಪ್ಲ್ಯಾನ್ ಏನಾದರೂ ಮಾಡಿಕೊಂಡಿದ್ದೀರಾ? ಹಾಗಿದ್ದರೆ ಆ ಪ್ಲ್ಯಾನ್ ನ್ನು ಒಂದು ವಾರಗಳ ಕಾಲ ಮುಂದೂಡಿದರೆ ಒಳಿತು.
ಯಾಕೆಂದರೆ ರಾಜ್ಯದ ಎಲ್ಲ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಹಾಗೂ ವನ್ಯ ಜೀವಿ ಧಾಮಗಳಲ್ಲಿ ಒಮ್ಮೆಲೆ ಹುಲಿ ಗಣತಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಎಲ್ಲಾ ಸಫಾರಿಗಳನ್ನು ಒಂದು ವಾರಗಳ ಕಾಲ ನಿರ್ಬಂಧಿಸಲಾಗಿದೆ.
ಜನವರಿ ತಿಂಗಳ 07 ರಿಂದ 13ರ ವರೆಗೆ ಹುಲಿ ಗಣತಿ ನಡೆಯಲಿದ್ದು, ಈ ಗಣತಿಗೆ ಯಾವುದೇ ಅಡಚಣೆ ಆಗಬಾರದೆಂದು ರಾಜ್ಯದ ಎಲ್ಲಾ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪ್ರವಾಸಿಗರಿಗೆ ಸಫಾರಿಯನ್ನು ಬಂದ್ ಮಾಡಲಾಗಿದೆ.
ರಾಜ್ಯದಲ್ಲಿ ಒಟ್ಟು 5 ಹುಲಿ ಸಂರಕ್ಷಿತ ಪ್ರದೇಶಗಳಿವೆ.
ಇವುಗಳಲ್ಲಿ ಚಾಮರಾಜನಗರ ಜಿಲ್ಲೆಯ ಬಂಡೀಪುರ, ಬಿ.ಆರ್.ಟಿ, ಮೈಸೂರು ಜಿಲ್ಲೆಯ ನಾಗರಹೊಳೆ, ಚಿಕ್ಕಮಗಳೂರು ಜಿಲ್ಲೆಯ ಭದ್ರಾ, ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಸಫಾರಿಯನ್ನು ಬಂದ್ ಮಾಡಲಾಗುತ್ತಿದೆ.