ಎಲ್ಲಿಯೂ ಜಾತ್ರೆ ನಡೆಸುವಂತಿಲ್ಲ, ನಿಯಮ ಮೀರಿದರೆ ನೀವೇ ಹೊಣೆ; ಡಿಸಿಗಳಿಗೆ ಅಶೋಕ್ ಸೂಚನೆ
ಬೆಂಗಳೂರು, ಏಪ್ರಿಲ್ 17: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗಿದ್ದು, ಹಲವು ನಿರ್ಬಂಧಗಳನ್ನು ಹೇರುವ ಅಗತ್ಯವಿದೆ ಎಂದಿರುವ ಕಂದಾಯ ಸಚಿವ ಆರ್ ಅಶೋಕ್, ರಾಜ್ಯದಲ್ಲಿ ಎಲ್ಲ ಕಡೆಯೂ ಜಾತ್ರೆಗಳನ್ನು ನಿಷೇಧಿಸಲಾಗಿದೆ. ಎಲ್ಲಿಯೂ ಜಾತ್ರೆ ನಡೆಸಬಾರದು. ಜಾತ್ರೆ ನಡೆದರೆ ಜಿಲ್ಲಾಧಿಕಾರಿಗಳೇ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
Recommended Video
ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಕೆ. ಸುಧಾಕರ್ ಹಾಗೂ ಕಂದಾಯ ಸಚಿವ ಆರ್ ಅಶೋಕ್ ಅವರು ಶನಿವಾರ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದು, ಕೊರೊನಾ ಸ್ಥಿತಿಗತಿ ಕುರಿತು ಚರ್ಚೆ ನಡೆಸಿದರು.
ಕುಮಾರಸ್ವಾಮಿಗೆ ಹಾಸಿಗೆ ಇಲ್ಲ ಎಂದ ಆಸ್ಪತ್ರೆ; ಆರೋಗ್ಯ ಸಚಿವರ ಸ್ಪಷ್ಟನೆ
ಆನಂತರ ಮಾತನಾಡಿದ ಸಚಿವ ಅಶೋಕ್, "ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಜಾತ್ರೆ ನಡೆಯುವಂತಿಲ್ಲ. ಮದುವೆ ಸಮಾರಂಭ ನಡೆಸಲು ಕಡ್ಡಾಯವಾಗಿ ಪಾಸ್ ತೆಗೆದುಕೊಳ್ಳಬೇಕು. ಒಳಾಂಗಣದಲ್ಲಿ 100 ಹಾಗೂ ಹೊರಾಂಗಣದಲ್ಲಿ 200ಕ್ಕಿಂತ ಹೆಚ್ಚು ಜನ ಸೇರಿದರೆ ಕಲ್ಯಾಣ ಮಂಟಪ ಮುಚ್ಚಿಸುತ್ತೇವೆ" ಎಂದು ಎಚ್ಚರಿಸಿದ್ದಾರೆ.
ರಾಜ್ಯದ ಎಲ್ಲಿಯೂ ಆಮ್ಲಜನಕದ ಸಮಸ್ಯೆ ಆಗಬಾರದು. ಕಳೆದ ಬಾರಿಗಿಂತ ಈ ಬಾರಿ ಪ್ರಕರಣಗಳು ಹೆಚ್ಚಾಗಬಹುದು. ಹೀಗಾಗಿ ಯಾವುದೇ ಸಮಸ್ಯೆ ಆಗಬಾರದು. ಸಿಬ್ಬಂದಿಗೆ ಸಂಬಳದಲ್ಲಿಯೂ ತೊಂದರೆ ಎದುರಾಗಬಾರದು ಎಂದಿದ್ದಾರೆ. ಶವ ಸಂಸ್ಕಾರ ಮಾಡುವಲ್ಲಿ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮೇ ತಿಂಗಳಲ್ಲಿ ನಡೆಯುವ ಸಮಾರಂಭಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
7500 ಜಂಬೋ ಆಕ್ಸಿಜನ್ ಸಿಲಿಂಡರ್ ನೀಡಲು ಕೇಂದ್ರ ಸಚಿವರ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದರು. ಸದ್ಯಕ್ಕೆ ಬುಕ್ ಆಗಿರುವ ಮದುವೆ ಸಮಾರಂಭಗಳಿಗೆ ಸಮಸ್ಯೆಯಿಲ್ಲ. ಆದರೆ ಮುಂದೆ ಬುಕ್ ಆಗುವ ಮದುವೆಗಳಿಗೆ ನಿಯಮಗಳು ಕಡ್ಡಾಯ ಎಂದು ತಿಳಿಸಿದ್ದಾರೆ.