Get Updates
Get notified of breaking news, exclusive insights, and must-see stories!

ಸರ್ಕಾರಗಳಿಗೆ ಲೋಕಾಯುಕ್ತ ಸಂಸ್ಥೆ ಮುಚ್ಚುವ ಧೈರ್ಯವಿಲ್ಲದೆ, ಅಂಗಾಂಗ ಕಡಿಯುತ್ತಿವೆ: ನ್ಯಾ. ಸಂತೋಷ್ ಹೆಗ್ಡೆ ಕಿಡಿ

ಬೆಂಗಳೂರು, ಜ. 25: 'ಬಲಿಷ್ಠವಾದ ಲೋಕಾಯುಕ್ತ ಸಂಸ್ಥೆ ಆಡಳಿತ ಪಕ್ಷದವರಿಗೂ ಬೇಡ, ವಿರೋಧ ಪಕ್ಷದವರಿಗೂ ಬೇಡ. ಹಾಗಂತ ಇವರಿಗೆ ಲೋಕಾಯುಕ್ತ ಸಂಸ್ಥೆ ಮುಚ್ಚುವ ಧೈರ್ಯವೂ ಇಲ್ಲ. ಅದರ ಒಂದೊಂದು ಅಂಗವನ್ನು ನಿಷ್ಕ್ರಿಯ ಮಾಡಿ ನಿರ್ನಾಮ ಮಾಡಲು ಹೊರಟಿದ್ದಾರೆ' ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಎನ್. ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದ್ದಾರೆ.

ಹಾಲಿ ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ ಅವರ ಅಧಿಕಾರಾವಧಿ ಇದೇ ಜ. 27 ಕ್ಕೆ ಮುಗಿಯಲಿದ್ದು, ತೆರವಾಗಲಿರುವ ಲೋಕಾಯುಕ್ತ ಹುದ್ದೆಗೆ ನೇಮಕ ಮಾಡುವ ಸಂಬಂಧ ಸರ್ಕಾರ ಸಣ್ಣ ಪ್ರಯತ್ನ ಮಾಡಿಲ್ಲ. ಈ ಹಿನ್ನೆಲೆಯಲ್ಲಿ 'ಒನ್‌ಇಂಡಿಯಾ ಕನ್ನಡ' ಜತೆ ಲೋಕಾಯುಕ್ತ ಸಂಸ್ಥೆ ಬಗ್ಗೆ ನ್ಯಾ. ಎನ್. ಸಂತೋಷ್ ಹೆಗ್ಡೆ ಜನ ಪ್ರತಿನಿಧಿಗಳ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಲೋಕಾಯುಕ್ತ ಅಂಗಾಂಗ ಕಡಿತ:

ಲೋಕಾಯುಕ್ತ ಅಂಗಾಂಗ ಕಡಿತ:

ಆಡಳಿತದಲ್ಲಿ ಜನರಿಗೆ ಆಗುತ್ತಿದ್ದ ಅನ್ಯಾಯ ಸರಿಪಡಿಸಲು ಹಾಗೂ ಭ್ರಷ್ಟಾಚಾರ ತಡೆಯಲು ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಸ್ಥಾಪಿಸಲಾಯಿತು. ತದನಂತರ ಲೋಕಾಯುಕ್ತ ಸಂಸ್ಥೆ ತನ್ನದೇ ಆದ ಜವಾಬ್ದಾರಿಗಳನ್ನು ನಿರ್ವಹಿಸಿಕೊಂಡು ಬಂತು. ಆದರೆ, ಬಲಿಷ್ಠ ಲೋಕಾಯುಕ್ತ ಸಂಸ್ಥೆ ಅಸ್ತಿತ್ವದಲ್ಲಿದ್ದರೆ ಆಡಳಿತ ವರ್ಗಕ್ಕೂ ವಿರೋಧ ಪಕ್ಷದ ರಾಜಕಾರಣಿಗಳಿಗೆ ನೆಮ್ಮದಿ ಇರಲ್ಲ. ಹೀಗಾಗಿ ಅದನ್ನು ಸಂಪೂರ್ಣ ನಿಷ್ಕ್ರಿಯಗೊಳಿಸುವ ಕಾರ್ಯ ಮಾಡುತ್ತದ್ದಾರೆ. ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚುವ ಧೈರ್ಯವೂ ತೋರುತ್ತಿಲ್ಲ. ಅದರ ಒಂದೊಂದು ಅಂಗವನ್ನು ಕಡಿದು ನಿಷ್ಕ್ರಿಯಗೊಳಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಗಣಿ ವರದಿ ಸಮಾಧಿ ಮಾಡಿದ್ದು ಯಾರು ?

ಗಣಿ ವರದಿ ಸಮಾಧಿ ಮಾಡಿದ್ದು ಯಾರು ?

ನಾನು ಲೋಕಾಯುಕ್ತರಾಗಿದ್ದ ವೇಳೆ 2009 ರಿಂದ 2011ರ ವರೆಗೂ ಗಣಿ ಅಕ್ರಮದ ಬಗ್ಗೆ ಹಂತಹಂತವಾಗಿ ಸರಣಿ ವರದಿ ನೀಡಲಾಗಿತ್ತು. ಆಗ ಬಿಜೆಪಿ ಸರ್ಕಾರ ಆಡಳಿತದಲ್ಲಿತ್ತು. ಗಣಿ ವರದಿ ಜಾರಿಗೆ ತರಬೇಕು ಎಂದು ಲೋಕಾಯುಕ್ತ ಸಂಸ್ಥೆಯ ವರದಿಯನ್ನು ಮುಂದಿಟ್ಟುಕೊಂಡು ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಬಳ್ಳಾರಿ ವರೆಗೂ ಪಾದಯಾತ್ರೆ ಮಾಡಿದರು. ಗಣಿ ಅಕ್ರಮದಲ್ಲಿ ಬಿಜೆಪಿ ನಾಯಕರು ಇರುವುದರಿಂದ ಅದನ್ನು ಜಾರಿಗೆ ತರುತ್ತಿಲ್ಲ ಎಂದು ಜನರ ಮುಂದೆ ಸಿದ್ದರಾಮಯ್ಯ ಹೇಳಿಕೊಂಡರು. ಅದಾದ ಬಳಿಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಅವರೇ ಸಿಎಂ ಆದರು.ಗಣಿ ವರದಿಯನ್ನು ಸಿದ್ದರಾಮಯ್ಯ ಜಾರಿಗೆ ತರದೇ ಅವರೂ ಮಣ್ಣು ಮಾಡಿದರು ಎಂದು ನ್ಯಾ. ಎನ್. ಸಂತೋಷ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸಿಬಿ ಸರ್ಕಾರದ ಅಡಿಯಾಳಾಗಿ ಕೆಲಸ:

ಎಸಿಬಿ ಸರ್ಕಾರದ ಅಡಿಯಾಳಾಗಿ ಕೆಲಸ:

ಲೋಕಾಯುಕ್ತ ಸಂಸ್ಥೆಗೆ ಎರಡು ಅಧಿಕಾರ ಇತ್ತು. ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಸುವ ಲೋಕಾಯುಕ್ತ ಪೊಲೀಸ್ ಘಟಕ ( ಭ್ರಷ್ಟಾಚಾರ ನಿಗ್ರಹ ದಳ) ಇತ್ತು. ಯಾರ ಮುಲಾಜಿಗೂ ಒಳಗಾಗದೇ ಶಾಸಕರು, ಮಂತ್ರಿಗಳ ಅಕ್ರಮಗಳ ವಿರುದ್ಧ ತನಿಖೆ ನಡೆಸಲಾಗುತ್ತಿತ್ತು. ಲೋಕಾಯುಕ್ತ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿ ಲೋಕಾಯುಕ್ತ ಸಂಸ್ಥೆಯ ಭ್ರಷ್ಟಾಚಾರ ನಿಗ್ರಹ ದಳವನ್ನು ಪ್ರತ್ಯೇಕ ಮಾಡಿ ಎಸಿಬಿ ರಚನೆ ಮಾಡಿದರು. ಎಸಿಬಿ ಸರ್ಕಾರ, ಗೃಹ ಸಚಿವರ ಕೈಕೆಳಗೆ ಕೆಲಸ ಮಾಡುವ ಸಂಸ್ಥೆ. ಅದು ರಚನೆಯಾದ ಬಳಿಕ ಎಷ್ಟು ಮಂದಿ ಶಾಸಕರು, ಮಂತ್ರಿಗಳ ಭ್ರಷ್ಟಾಚಾರದ ಬಗ್ಗೆ ಕೇಸು ದಾಖಲಿಸಿ ತನಿಖೆ ನಡೆಸಿದೆ ?

ಲೋಕಾಯುಕ್ತ ಬಲಿಷ್ಠವಾದ್ರೆ ರಾಜಕಾರಣಿಗಳಿಗೆ ಕಷ್ಟ:

ಲೋಕಾಯುಕ್ತ ಬಲಿಷ್ಠವಾದ್ರೆ ರಾಜಕಾರಣಿಗಳಿಗೆ ಕಷ್ಟ:

ಅದೇ ಲೋಕಾಯುಕ್ತ ಪೊಲೀಸ್ ಘಟಕ ಲಂಚ ಪ್ರಕರಣಗಳಲ್ಲಿ ಶಾಸಕರು, ಮಂತ್ರಿಗಳನ್ನು ಬಂಧಿಸಿ ನ್ಯಾಯಾಂಗ ತನಿಖೆಗೆ ಒಳಪಡಿಸಿದೆ. ಎಸಿಬಿ ಈವರೆಗೂ ಎಷ್ಟು ಮಂತ್ರಿಗಳ ಶಾಸಕರ ವಿರುದ್ಧ ಕೇಸು ದಾಖಲಿಸಿದೆ. ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ಮೂರು ಪಕ್ಷಗಳ ಮೂರು ಮುಖ್ಯಮಂತ್ರಿಗಳ ವಿರುದ್ಧ ವರದಿ ನೀಡಿದ್ದೆ. ಏಳು ಮಂತ್ರಿಗಳು ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ದಾಖಲೆಗಳ ಸಮೇತ ವರದಿ ನೀಡಿದ್ದೆ. ಅನೇಕ ಶಾಸಕರ ಪಾತ್ರದ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ವರದಿಯನ್ನು ಯಾವ ಪಕ್ಷದವರೂ ಜಾರಿಗೆ ತರಲಿಲ್ಲ. ಲೋಕಾಯುಕ್ತ ಸಂಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳಿ ಲೋಕಾಯುಕ್ತ ಪೊಲೀಸ್ ಘಟಕ ರದ್ದು ಮಾಡಿ ಎಸಿಬಿ ರಚನೆ ಮಾಡಿ ಜನರಿಗೆ ಮಂಕು ಬೂದಿ ಎರಚಿದರು. ಲೋಕಾಯುಕ್ತ ಸಂಸ್ಥೆ ಬಡ ಜನರ ಪರ ಕೆಲಸ ಮಾಡುವ ಸಂಸ್ಥೆ. ಶ್ರೀಮಂತರು ಹೇಗೂ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಾರೆ.

ಬಡವರ ಪರ ಕೆಲಸ ಮಾಡುವ ಲೋಕಾಯುಕ್ತ ಸಂಸ್ಥೆಯನ್ನು ಬಲಿಷ್ಠಗೊಳಿಸುವ ಬದಲಿಗೆ ನಿಶಕ್ತಗೊಳಿಸಲಾಗುತ್ತಿದೆ. ಇದು ಬಲಿಷ್ಠವಾದರೆ ಕಷ್ಟ ಎಂಬುದು ರಾಜಕಾರಣಿಗಳಿಗೆ ಅರಿವಿದೆ ಎಂದು ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.

ಯಡಿಯೂರಪ್ಪ ಬರಕಾಸ್ತು ಕಥೆ ಏನಾಯ್ತು :

ಯಡಿಯೂರಪ್ಪ ಬರಕಾಸ್ತು ಕಥೆ ಏನಾಯ್ತು :

ಲೋಕಾಯುಕ್ತ ಗಣಿ ವರದಿ ಮುಂದಿಟ್ಟುಕೊಂಡು ಪಾದಯಾತ್ರೆ ಮಾಡಿ ಅಧಿಕಾರ ಹಿಡಿದ ಸಿದ್ದರಾಮಯ್ಯ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿದರು. ವಿರೋಧ ಪಕ್ಷದ ನಾಯಕರಾಗಿದ್ದ ಯಡಿಯೂರಪ್ಪ, ನಾನು ಅಧಿಕಾರಕ್ಕೆ ಬಂದರೆ 24 ತಾಸಿನಲ್ಲಿ ಎಸಿಬಿಯನ್ನು ಬರ್ಕಾಸ್ತು ಮಾಡಿ ಲೋಕಾಯುಕ್ತ ಸಂಸ್ಥೆಯನ್ನು ಬಲಿಷ್ಠಗೊಳಿಸುತ್ತೇನೆ ಎಂದು ವಚನ ನೀಡಿದ್ದರು. 24 ತಾಸು ಮುಗಿಯಿತು, ಎರಡು ವರ್ಷಗಳು ಕಳೆಯಿತು. ಎಸಿಬಿ ರದ್ದಾಗಲಿಲ್ಲ. ಲೋಕಾಯುಕ್ತ ಬಲಿಷ್ಠವಾಗಲಿಲ್ಲ. ಕೇಳಿದರೆ, ನಾನು ತಪ್ಪು ಹೇಳಿಕೆ ನೀಡಿದ್ದೆ. ಎಸಿಬಿ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿ ನುಣುಚಿಕೊಂಡರು. ಬಡವರ ಪರ ಕೆಲಸ ಮಾಡುವ ಲೋಕಾಯುಕ್ತ ಸಂಸ್ಥೆ ಬಲಿಷ್ಠವಾಗುವುದು ಇವರು ಯಾರಿಗೂ ಇಷ್ಟವಿಲ್ಲ ಎಂದು ಕಿಡಿ ಕಾರಿದರು.

ನ್ಯಾ. ವಿಶ್ವನಾಥ ಶೆಟ್ಟಿ ನಿರ್ಗಮನ :

ನ್ಯಾ. ವಿಶ್ವನಾಥ ಶೆಟ್ಟಿ ನಿರ್ಗಮನ :

ನ್ಯಾ. ಪಿ. ವಿಶ್ವನಾಥಶೆಟ್ಟಿ ಅವರ ಅವಧಿ ಮುಗಿಯುತ್ತಿದೆ ಎಂದು ಸರ್ಕಾರಕ್ಕೆ ಗೊತ್ತಿಲ್ಲವೇ? ಲೋಕಾಯುಕ್ತರನ್ನು ನೇಮಕ ಮಾಡುವುದು ಕೇವಲ ಮುಖ್ಯಮಂತ್ರಿಗಳು ಮಾತ್ರವಲ್ಲ, ವಿರೋಧ ಪಕ್ಷದ ನಾಯಕರ ಜವಾಬ್ದಾರಿ ಕೂಡ ಹೌದು. ಲೋಕಾಯುಕ್ತರ ಅವಧಿ ಮುಗಿಯುವ ಮೂರು ತಿಂಗಳ ಮೊದಲೇ ಇದರ ಬಗ್ಗೆ ಪ್ರಸ್ತಾಪಿಸಿ ಅರ್ಹರನ್ನು ನೇಮಕ ಮಾಡುವ ಪ್ರಕ್ರಿಯೆಗೆ ಚಾಲನೆ ಕೊಡಬೇಕಿತ್ತು. ಆದರೆ, ಇವರಿಗೆ ಯಾರಿಗೂ ಲೋಕಾಯುಕ್ತ ಸಂಸ್ಥೆ ಬೇಕಿಲ್ಲ. ಅದನ್ನು ಮಚ್ಚುವ ಧೈರ್ಯವೂ ಅವರಿಗೆ ಇಲ್ಲ. ಜನರು ಲೋಕಾಯುಕ್ತ ಸಂಸ್ಥೆ ಮೇಲೆ ಇಟ್ಟಿರುವ ನಂಬಿಕೆಯಿಂದ ಅದು ಉಳಿದುಕೊಂಡಿದೆ. ಆಡಳಿತ ಪಕ್ಷದವರಿಗಾಗಲೀ, ವಿರೋಧ ಪಕ್ಷದವರಿಗಾಗಲೀ ಯಾರಿಗೂ ಕಾಳಜಿ ಇಲ್ಲ ಎಂದು ಬೇಸರ ತೋಡಿಕೊಂಡರು.

ಲೋಕಾಯುಕ್ತ ಸಂಸ್ಥೆ ಶ್ರೀಮಂತರಿಗೆ ಬೇಕಾಗಿಲ್ಲ. ಅವರ ಕೆಲಸ ಹೇಗೂ ಅವರು ಮಾಡಿಕೊಳ್ಳುತ್ತಾರೆ. ನೊಂದು ಬರುವ ಬಡವರಿಗೆ ನ್ಯಾಯ ಸಿಗಲು ಲೋಕಾಯುಕ್ತ ಸಂಸ್ಥೆ ಬೇಕು. ಬಲಿಷ್ಠವಾಗಿರುವ ಲೋಕಾಯುಕ್ತ ಸಂಸ್ಥೆ ಬೇಕು. ಹೀಗಾಗಿಯೇ ಬೆಂಗಳೂರಿಗೆ ಸೀಮಿತವಾಗಿದ್ದ ಲೋಕಾಯುಕ್ತ ಸಂಸ್ಥೆ ಜಿಲ್ಲೆಗಳಲ್ಲಿ ಕಚೇರಿ ಆರಂಭಿಸಿತ್ತು. ಲೋಕಾಯುಕ್ತ ಸಂಸ್ಥೆಯನ್ನು ಬಲಿಷ್ಠಗೊಳಿಸುವ ಆಸಕ್ತಿ ಯಾವ ನಾಯಕನಿಗೂ ಇಲ್ಲ. ಹೀಗಾಗಿ ತಮ್ಮ ಅನುಕೂಲಕ್ಕೆ ತಕ್ಕಂತೆ ಲೋಕಾಯುಕ್ತ ಸಂಸ್ಥೆಯನ್ನು ಬಳಸಿಕೊಂಡು ರಾಜಕಾರಣಕ್ಕೆ ಸೀಮಿತಗೊಳಿಸಿಕೊಳ್ಳುತ್ತಿರುವುದು ನೋಡಿದರೆ ನನಗೆ ಬೇಸರವಾಗುತ್ತಿದೆ ಎಂದು ನೋವು ತೋಡಿಕೊಂಡರು.

Recommended Video

      Hardik Pandya ತಮ್ಮ Fitness ಬಗ್ಗೆ ಹೇಳಿದ್ದೇನು | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+