ಬಿರುಗಾಳಿ ಎಬ್ಬಿಸಲಿವೆಯೆ ಲಿಂಗಾಯತ ಮಹಾಸಭೆಯ ಈ 5 ನಿರ್ಣಯಗಳು?
ಬೆಂಗಳೂರು, ಆಗಸ್ಟ್ 10 : ಲಿಂಗಾಯತ ಸ್ವತಂತ್ರ ಧರ್ಮ ವಿಚಾರದಲ್ಲಿ ಹಲವು ಗೊಂದಲಗಳ ಬಗ್ಗೆ ಇಂದು (ಗುರುವಾರ) ನಡೆದ ಲಿಂಗಾಯತ ಸಮಾಲೋಚನಾ ಸಭೆಯಲ್ಲಿ ಪ್ರಮುಖ ಐದು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.
ನೀರಾವರಿ ಸಚಿವ ಎಂಬಿ ಪಾಟೀಲ್ ನೇತೃತ್ವದಲ್ಲಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಆಗ್ರಹ ಮಾಡುವುದು ಸೇರಿದಂತೆ ಐದು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
'ವೀರಶೈವ-ಲಿಂಗಾಯತ ವಿಚಾರದಲ್ಲಿ ಸರ್ಕಾರದ ಯಾವುದೇ ನಿಲುವಿಲ್ಲ'
ಸಭೆಯಲ್ಲಿ ಪಾಲ್ಗೊಂಡಿದ್ದ ಲಿಂಗಾಯತ ಸಮಾಜದ ಮುಖಂಡರುಗಳು, ವಿರಕ್ತ ಪರಂಪರೆಯ ಮಠಾಧೀಶರುಗಳು ಲಿಂಗಾಯತ ಧರ್ಮ ಬೇಡಿಕೆ ಇಂದು ನಿನ್ನೆಯದಲ್ಲ ಹಲವು ವರ್ಷಗಳಿಂದ ಇದೆ. ಸೂಕ್ತ ವೇದಿಕೆ ರಚನೆಯಾಗಿರಲಿಲ್ಲ. ಈಗ ಒಂದು ವೇದಿಕೆ ರೂಪುಗೊಂಡಿದೆ. ಅದರಂತೆ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗಬೇಕು ಎಂಬ ಸ್ಪಷ್ಟ ನಿಲುವನ್ನು ಪ್ರತಿಪಾದಿಸಿದರು.
ವೀರಶೈವವನ್ನು ಬಿಟ್ಟು ಲಿಂಗಾಯತಕ್ಕೆ ಮಾತ್ರ ಪ್ರತ್ಯೇಕ ಧರ್ಮಮಾನ್ಯತೆ ನೀಡಬೇಕೆಂದು ಕೋರುವುದು; ಬಸವಣ್ಣ ಹಾಗೂ ನಂತರದ ಬಸವಾದಿ ಶರಣರು ಹೇಳಿದ ವಚನಗಳೇ ಲಿಂಗಾಯತರ ಧರ್ಮಗ್ರಂಥ, ಈ ವಚನಗಳನ್ನು ವೀರಶೈವದ ಹೆಸರಿನಲ್ಲಿ ಆ ಸಮುದಾಯದವರು ಬಳಸಿಕೊಳ್ಳಬಾರದು ಎಂಬ ಇತ್ಯಾದಿ ನಿರ್ಣಯಗಳು ಇದರಲ್ಲಿ ಒಳಗೊಂಡಿವೆ.
'ಲಿಂಗಾಯತ ಮುಖಂಡರು ಒಗ್ಗೂಡಲು ಶೀಘ್ರವೇ ಹೊಸ ವೇದಿಕೆ'
ಸಭೆ ಕೈಗೊಂಡ 5 ನಿರ್ಣಯಗಳು:
ವಚನಗಳನ್ನು ವೀರಶೈವದ ಹೆಸರಿನಲ್ಲಿ ಬಳಸಿಕೆ ಸಲ್ಲದು
ಬಸವಣ್ಣನವರು ಮತ್ತು ಬಸವಾದಿ ಶರಣರು ಸ್ಥಾಪಿಸಿದ ಐತಿಹಾಸಿಕ ಲಿಂಗಾಯತ ಧರ್ಮ, ಸಿದ್ಧಾಂತ ಮತ್ತು ವಚನಗಳನ್ನು ವೀರಶೈವದ ಹೆಸರಿನಲ್ಲಿ ಬಳಸಿಕೊಳ್ಳಬಾರದು.
ಬಸವಾದಿ ಶರಣರ ತತ್ವಗಳ ಪ್ರಚಾರ ಮತ್ತು ಪ್ರಸಾರ
ಬಸವಾದಿ ಶರಣರ ತತ್ವಗಳ ಪ್ರಚಾರ ಮತ್ತು ಪ್ರಸಾರಕ್ಕಾಗಿ ಸ್ಥಾಪಿಸಲಾದ ವಿರಕ್ತ ಮಠಗಳಲ್ಲಿನ ಪೂಜ್ಯರು ಲಿಂಗಾಯತ ಹೆಸರು ಮತ್ತು ತತ್ವಸಿದ್ದಾಂತವನ್ನು ಪ್ರಚಾರ ಪಡಿಸಬೇಕು. ಒಂದು ವೇಳೆ ಈ ತತ್ವವನ್ನು ಲೋಕಕ್ಕೆ ಪೂರೈಸಲು ಒಪ್ಪದಿದ್ದರೆ ಪೀಠ ತ್ಯಜಿಸಬೇಕು. ಬಸವ ತತ್ವ ಪ್ರಸಾರಕ್ಕಾಗಿ ತಮ್ಮ ಬದುಕನ್ನೇ ಸಮರ್ಪಣೆ ಮಾಡಿದ ಪೂಜ್ಯರಿಗೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಒತ್ತಾಯ
ಲಿಂಗಾಯತ ಧರ್ಮಕ್ಕೆ 'ಸ್ವತಂತ್ರ ಧರ್ಮ' ಎಂದು ಮಾನ್ಯತೆ ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸುವುದು.
ವಚನಗಳೇ ಲಿಂಗಾಯತ ಧರ್ಮದ ಧರ್ಮ ಗ್ರಂಥ
ಲಿಂಗಾಯತವನ್ನು ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಸ್ಥಾಪಿಸಿದರೆಂದು ಒಮ್ಮತದಿಂದ ನಿರ್ಣಯ ಕೈಗೊಳ್ಳಲಾಯಿತು.. ವಚನಗಳೇ ಈ ಧರ್ಮದ ಧರ್ಮ ಗ್ರಂಥ.
Recommended Video
ಅಖಿಲ ಭಾರತ ಲಿಂಗಾಯತ ಮಹಾಸಭೆ ಎಂದು ನಾಮಕರಣ
ಈಗಿರುವ ಅಖಿಲ ಭಾರತ ವೀರಶೈವ ಮಹಾಸಭೆ ಬದಲಾಗಿ ಅಖಿಲ ಭಾರತ ಲಿಂಗಾಯತ ಮಹಾಸಭೆ ಎಂದು ನಾಮಕರಣ ಮಾಡುವ ಬಗ್ಗೆ ಸಭೆಯಲ್ಲಿ ಒಮ್ಮತದ ನಿರ್ಣಯ. ಅಖಿಲ ಭಾರತ ವೀರಶೈವ ಮಹಾಸಭೆಯು 1941ರಲ್ಲಿ ದಾವಣಗೆರೆಯಲ್ಲಿ ಮಹಾಸಭೆಯ ಅಧಿವೇಶನ ಕರೆಯಲಾಗಿತ್ತು. ಅಲ್ಲಿ ಒಮ್ಮತದಿಂದ 'ಅಖಿಲ ಭಾರತ ಲಿಂಗಾಯತ ಮಹಾಸಭೆ' ಎಂದು ಹೆಸರು ಬದಲಾಯಿಸಲು ನಿರ್ಣಯ ಕೈಗೊಂಡಿತ್ತು. ಮತ್ತು ಲಿಂಗಾಯತ ಸ್ವತಂತ್ರ ಧರ್ಮವೆಂದು ಘೋಷಣೆ ಮಾಡಿತ್ತು. ಆದರೆ, ಅದು ಇನ್ನೂ ನೆನೆಗುದಿಗೆ ಬಿದ್ದಿತ್ತು.
ಸಭೆಯಲ್ಲಿ ಹಲವು ಮಠಾಧೀಶರು ಭಾಗಿ
ಈ ಲಿಂಗಾಯತ ಸಮಾಲೋಚನಾ ಸಭೆಯಲ್ಲಿ ಬೇಲಿ ಮಠದ ಶಿವರುದ್ರ ಸ್ವಾಮೀಜಿ, ನಾಗನೂರು ಮಠದ ಡಾ. ಸಿದ್ದರಾಮ ಸ್ವಾಮೀಜಿ, ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮೀಜಿ, ಬಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದೇವರು, ಚಿಂತಕ ರಂಜಾನ್ ದರ್ಗಾ ಸೇರಿದಂತೆ ಹಲವರು ಭಾಗಿಯಾಗಿದ್ದರು. ಆದರೆ, ಬಿಜೆಪಿಯ ಲಿಂಗಾಯತ ಮುಖಂಡರು ಗೈರಾಗಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ನ ಲಿಂಗಾಯತ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.