ಕಾವೇರಿ ನೀರು ಕೇಳಿದ ತಮಿಳುನಾಡಿಗೆ ಕರ್ನಾಟಕದ ಪತ್ರ
ಬೆಂಗಳೂರು, ಸೆಪ್ಟೆಂಬರ್, 15 : 'ರಾಜ್ಯದಲ್ಲಿ ತೀವ್ರ ಬರವಿರುವ ಕಾರಣ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ' ಎಂದು ಕರ್ನಾಟಕ ಸರ್ಕಾರ ತಮಿಳುನಾಡಿಗೆ ಪತ್ರ ಬರೆದಿದೆ. 26 ಟಿಎಂಸಿ ನೀರು ಬಿಡಬೇಕು ಎಂದು ತಮಿಳುನಾಡು ಸರ್ಕಾರ ಕೆಲವು ದಿನಗಳ ಹಿಂದೆ ಕರ್ನಾಟಕಕ್ಕೆ ಪತ್ರ ಬರೆದಿತ್ತು.
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರು ಕಾವೇರಿ ನದಿ ನೀರು ಬಿಡಲು ಸಾಧ್ಯವಿಲ್ಲ ಎಂದು ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ಕೆ.ಜ್ಞಾನದೇಶಿಕನ್ ಅವರಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ನೀರಿನ ಬೇಡಿಕೆ ಇಟ್ಟಿದ್ದ ಪಕ್ಕದ ರಾಜ್ಯಕ್ಕೆ ಪತ್ರದ ಮೂಲಕ ಉತ್ತರ ನೀಡಲಾಗಿದೆ. [ಕೈಕೊಟ್ಟ ಮುಂಗಾರು ಕೆಆರ್ ಎಸ್ ತುಂಬಿಲ್ಲ]

ಪತ್ರದಲ್ಲಿ ಏನಿದೆ? : 'ಉತ್ತಮ ಮಳೆಯಾದ ವರ್ಷ ಆಗಸ್ಟ್ ಅಂತ್ಯದ ವರೆಗೆ 92 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕು ಎಂದು ನ್ಯಾಯಮಂಡಳಿ ಆದೇಶ ನೀಡಿದೆ. ಇದುವರೆಗೂ 66 ಟಿಎಂಸಿ ನೀರನ್ನು ಬಿಡಲಾಗಿದೆ. ರಾಜ್ಯದಲ್ಲಿ ಬರಪರಿಸ್ಥಿತಿ ಇರುವ ಕಾರಣ ಇದಕ್ಕಿಂತ ಹೆಚ್ಚು ನೀರು ಬಿಡಲು ಸಾಧ್ಯವಿಲ್ಲ' ಎಂದು ಕೌಶಿಕ್ ಮುಖರ್ಜಿ ಅವರು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. [ಮೇಕೇದಾಟು ವಿವಾದ, ಪ್ರಧಾನಿ ಭೇಟಿ]
'ಜೂನ್ ಮತ್ತು ಜುಲೈ ತಿಂಗಳಿನಲ್ಲಿ ನೀರು ಹರಿಸಿದ್ದೇವೆ. ಆಗಸ್ಟ್ ತಿಂಗಳಲ್ಲಿ ಕೊಡಬೇಕಾದಷ್ಟು ನೀರನ್ನು ನೀಡಲು ಸಾಧ್ಯವಾಗಿಲ್ಲ. ಸೆಪ್ಟೆಂಬರ್ ತಿಂಗಳಿನಲ್ಲಿ ನ್ಯಾಯಾಧೀಕರಣದ ಆದೇಶ ಪಾಲಿಸಲು ಸಾಧ್ಯವೇ ಇಲ್ಲ. ಒಂದು ವೇಳೆ ರಾಜ್ಯದಲ್ಲಿ ಮಳೆ ಬಂದರೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ' ಎಂದು ಪತ್ರದಲ್ಲಿ ತಿಳಿಸಿದ್ದಾರೆ. [KRS ಕ್ರೆಸ್ಟ್ ಗೇಟ್ ಬದಲಾವಣೆ]
ಪ್ರಧಾನಿ ಬಳಿ ಹೋಗಿದ್ದರು : 26 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಮುಖ್ಯ ಕಾರ್ಯದರ್ಶಿ ಕೆಲವು ದಿನಗಳ ಹಿಂದೆ ಕರ್ನಾಟಕಕ್ಕೆ ಪತ್ರ ಬರೆದಿದ್ದರು. ಮುಖ್ಯಮಂತ್ರಿ ಜಯಲಲಿತಾ ಅವರು ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದರು.
ಕಷ್ಟವನ್ನು ಹಂಚಿಕೊಳ್ಳಲಿ : ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲವು ದಿನಗಳ ಹಿಂದೆ ಹೇಳಿದ್ದರು. 'ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದೆ. ಆದ್ದರಿಂದ ನೀರು ಬಿಡಲು ಸಾಧ್ಯವೇ ಇಲ್ಲ. ತಮಿಳುನಾಡು ಸರ್ಕಾರ ನೀರು ಮಾತ್ರವಲ್ಲ, ನಮ್ಮ ಸಂಕಷ್ಟವನ್ನೂ ಹಂಚಿಕೊಳ್ಳಬೇಕೆಂದು' ಎಂದು ಹೇಳಿದ್ದರು.












Click it and Unblock the Notifications