ಕಾಂಗ್ರೆಸ್ ಮೇಲೆ ಸಿಟ್ಟಾದ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಟಾಂಗ್
Recommended Video

ಬೆಂಗಳೂರು, ಫೆಬ್ರವರಿ 19: ಲೋಕಸಭೆ ಕ್ಷೇತ್ರ ಹಂಚಿಕೆ ಸಂಬಂಧ ಕಾಂಗ್ರೆಸ್ ಮೇಲೆ ಸಿಟ್ಟಾದ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಅವರು ಟಾಂಗ್ ನೀಡಿದ್ದಾರೆ.
ಇಂದು ಬೆಳಿಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಕುಮಾರಸ್ವಾಮಿ, ಜೆಡಿಎಸ್ಗೆ ಕಡಿಮೆ ಸೀಟು ನೀಡುವ ಬಗ್ಗೆ ಅಸಹನೆ ವ್ಯಕ್ತಪಡಿಸಿ 'ನಾವೇನು ಭಿಕ್ಷುಕರಲ್ಲ' ಎಂದಿದ್ದರು.
ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, 'ಇಲ್ಲಿ ಯಾರೂ ಯಾರನ್ನೂ ಭಿಕ್ಷೆ ಕೇಳುತ್ತಿಲ್ಲ, ಅವರೂ ಬೆಗ್ಗರ್ಸ್ ಅಲ್ಲ, ನಾವೂ ಬೆಗ್ಗರ್ಸ್ ಅಲ್ಲ, ಇದು ಸಮ್ಮಿಶ್ರ ಸರ್ಕಾರ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಯಾರಿಗೆ ಎಷ್ಟು ಮತ್ತು ಯಾವ ಕ್ಷೇತ್ರ ನೀಡಬೇಕು ಎಂಬುದು ಇನ್ನೂ ಅಂತಿಮವಾಗಿಲ್ಲ ಎಂದ ಸಿದ್ದರಾಮಯ್ಯ, ಹಾಲಿ ಗೆದ್ದಿರುವ 10 ಕಾಂಗ್ರೆಸ್ ಸಂಸದರ ಕ್ಷೇತ್ರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಜೆಡಿಎಸ್ಗೆ ಸಂದೇಶ ರವಾನಿಸಿದ್ದಾರೆ.

ಜೆಡಿಎಸ್ಗೆ ಆರು ಕ್ಷೇತ್ರ ಮಾತ್ರ?
ಜೆಡಿಎಸ್ಗೆ ಆರು ಅಥವಾ ಏಳು ಸ್ಥಾನವನ್ನು ಮಾತ್ರವೇ ನೀಡಿ, ಉಳಿದ ಸ್ಥಾನದಲ್ಲಿ ಕಾಂಗ್ರೆಸ್ ಸ್ಪರ್ಧಿಸುವ ಬಗ್ಗೆ ಕಾಂಗ್ರೆಸ್ ಚರ್ಚೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕುಮಾರಸ್ವಾಮಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಕನಿಷ್ಟ 12 ಸ್ಥಾನವನ್ನು ಜೆಡಿಎಸ್ಗೆ ನೀಡಬೇಕು ಎಂಬುದು ಜೆಡಿಎಸ್ ಬೇಡಿಕೆ ಆಗಿದೆ.

ಹಳೆ ಮೈಸೂರು ಭಾಗದಲ್ಲಿ ಭಾರಿ ಪೈಪೋಟಿ
ಕಾಂಗ್ರೆಸ್ ಪಕ್ಷವು ಈಗಾಗಲೇ ಶಾಸಕ ಹಾಗೂ ಮುಖಂಡರ ಸಭೆ ನಡೆಸಿ ಮೈತ್ರಿ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದು, ಬಹುತೇಕರು ಕಾಂಗ್ರೆಸ್ಗೆ ಹೆಚ್ಚಿನ ಕ್ಷೇತ್ರಗಳ ಬೇಡಿಕೆ ಇಟ್ಟಿದ್ದಾರೆ. ಅದರಲ್ಲಿಯೂ ಹಳೇ ಮೈಸೂರು ಭಾಗದಲ್ಲಿಯಂತೂ ಜೆಡಿಎಸ್ ಜೊತೆ ಮೈತ್ರಿಗೆ ಬೇಡವೆಂದೇ ಹೇಳಿದ್ದಾರೆ ಎನ್ನಲಾಗಿದೆ.

ಜೆಡಿಎಸ್ ಕೇವಲ ಎರಡು ಕ್ಷೇತ್ರದಲ್ಲಿ ಗೆದ್ದಿತ್ತು
ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಕೇವಲ ಎರಡು ಕ್ಷೇತ್ರದಲ್ಲಿ ಚುನಾವಣೆ ಗೆದ್ದಿತ್ತು. ಕಾಂಗ್ರೆಸ್ ಒಂಬತ್ತು ಹಾಗೂ ಬಿಜೆಪಿಯು 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಉಪಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಹೆಚ್ಚು ಸ್ಥಾನವನ್ನು ಗೆದ್ದುಕೊಂಡಿತು. ಪ್ರಸ್ತುತ ಕಾಂಗ್ರೆಸ್ ಸಂಸದರ ಸಂಖ್ಯೆ 10. ಈ ಲೆಕ್ಕಾಚಾರದ ಪ್ರಕಾರ ಲೋಕಸಭೆ ಚುನಾವಣೆಯಲ್ಲಿ ನೆಚ್ಚಿನ ಪಕ್ಷ ಅಲ್ಲವೆಂಬ ಹಿನ್ನೆಲೆಯಲ್ಲಿ ಜೆಡಿಎಸ್ಗೆ ಕಡಿಮೆ ಕ್ಷೇತ್ರಗಳನ್ನು ನೀಡಲು ಕೆಪಿಸಿಸಿ ಮುಖಂಡರು ನಿರ್ಣಯಿಸಿದ್ದಾರೆ ಎನ್ನಲಾಗಿದೆ.

ಕೆಲವೇ ದಿನದಲ್ಲಿ ಜೆಡಿಎಸ್-ಕಾಂಗ್ರೆಸ್ ಮುಖಂಡರ ಸಭೆ
ಕೆಲವೇ ದಿನಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ನ ಮುಖಂಡರು ಲೋಕಸಭೆ ಚುನಾವಣೆ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಸಲಿದ್ದು, ಸೀಟು ಹಂಚಿಕೆ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ಬಿರುಕು ಹುಟ್ಟಿಸಿಸುತ್ತದೆಯೋ ಅಥವಾ, ಸೌಹಾರ್ಧಪೂರ್ಣವಾಗಿ ಸೀಟು ಹಂಚಿಕೆ ನಡೆದು ಬಿಜೆಪಿಗೆ ಆತಂಕ ತರುತ್ತದೆಯೋ ಗೊತ್ತಾಗಲಿದೆ.












Click it and Unblock the Notifications