ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಬದಲಾವಣೆ ಇಲ್ಲ: ಮಧು ಬಂಗಾರಪ್ಪ
ಶಿವಮೊಗ್ಗ, ಮಾರ್ಚ್ 13: ಜೆಡಿಎಸ್ ಈಗ ಘೋಷಿಸಿರುವ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯಲ್ಲಿ ಶಿವಮೊಗ್ಗ ನಗರ ಕ್ಷೇತ್ರ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ಮುಖಂಡ, ಶಾಸಕ ಮಧು ಬಂಗಾರಪ್ಪ ಹೇಳಿದರು.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಚುನಾವಣಾ ದಿನಾಂಕ ಘೋಷಣೆಗೂ ಮೊದಲೇ ಜೆಡಿಎಸ್ ತನ್ನ 126 ಕ್ಷೇತ್ರಕ್ಕೆ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಶೇ.80 ರಿಂದ 90 ಭಾಗ ಗೆಲುವು ಸಾಧಿಸುವ ಅಭ್ಯರ್ಥಿಗಳನ್ನೇ ವರಿಷ್ಟರು ಕಣಕ್ಕೆ ಇಳಿಸಿದ್ದಾರೆ ಇವುಗಳಲ್ಲಿ ಯಾವ ಬದಲಾವಣೆಯೂ ಆಗದು ಎಂದು ಅವರು ಹೇಳಿದ್ದಾರೆ.
ಶಿವಮೊಗ್ಗ ನಗರ ಸೇರಿದಂತೆ ಕೋಲಾರ, ಶಿಡ್ಲಘಟ್ಟ, ದೇವನಹಳ್ಳಿ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬದಲಾಗಲಿದೆ ಎಂಬ ಊಹಾಪೋಹ ಹರಿದಾಡುತ್ತಿದ್ದು ಆ ಗೊಂದಲ್ಲೆ ತೆರೆಯುವಂತೆ ಮಧು ಬಂಗಾರಪ್ಪ ಅವರು ಹೇಳಿದ್ದು, ಕಾರ್ಯಕರ್ತರು ಗೊಂದಲ ಮಾಡಿಕೊಳ್ಳುವುದು ಬೇಡ ಎಂದರು.

ವರಿಷ್ಠರ ನಿರ್ಣಯದಂತೆ ಕಾರ್ಯ
ಮುಂದಿನ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಜೆಡಿಎಸ್ ಸ್ವತಂತ್ರವಾಗಿ ಚುನಾವಣೆ ಎದುರಿಸುತ್ತದೆ ಎಂದು ಪಕ್ಷದ ವರಿಷ್ಟರೇ ಸ್ಪಷ್ಟಪಡಿಸಿರುವುದರಿಂದ ಹೊಂದಾಣಿಕೆಯ ಮಾತೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

'ಸ್ವಾಮಿರಾವ್ ಮೂಲೆಗುಂಪಾಗಿದ್ದಾರೆ'
ಶಾಸಕ ಮಧುಬಂಗಾರಪ್ಪ ಸತ್ಯ ಹರಿಶ್ಚಂದ್ರನ ಎಂದು ಮಾಜಿ ಶಾಸಕ ಸ್ವಾಮಿರಾವ್ ಹೇಳಿಕೆ ನೀಡಿದ್ಧಾರೆ. ಅವರ ಹೇಳಿಕೆಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ರಾಜಕಾರಣದಲ್ಲಿ ಸ್ವಾಮಿರಾವ್ ಮೂಲೆಗುಂಪಾಗಿದ್ದಾರೆ. ನಾನು ಸತ್ಯ ಹರಿಶ್ಚಂದ್ರ ಹೌದಾ ಅಲ್ಲವೇ ಎಂಬುದನ್ನು ಕ್ಷೇತ್ರದ ಜನತೆ ಹಾಗೂ ಪಕ್ಷದ ಕಾರ್ಯಕರ್ತರು ನಿರ್ಧರಿಸುತ್ತಾರೆ ಎಂದು ತಿರುಗೇಟು ನೀಡಿದರು.

ಶಿಕ್ಷಣ ಸಚಿವರಾಗಿ ಅವರು ನಪಾಸು
ಮುಂದಿನ ಚುನಾವಣೆಯಲ್ಲಿ ಖರ್ಚಿಗೆ ಹಣ ಕೊಡುತ್ತಾರೆ ಎಂದು ಆರ್.ಎಂ.ಮಂಜುನಾಥ ಗೌಡರನ್ನು ಜೆಡಿಎಸ್ಗೆ ಕರೆತಂದಿದ್ದಾರೆ ಎಂದು ತೀರ್ಥಹಳ್ಳಿ ಕ್ಷೇತ್ರ ಶಾಸಕ ಕಿಮ್ಮನೆ ರತ್ನಾಕರ್ ಹೇಳಿಕೆ ನೀಡಿದ್ದಾರೆ. ಅವರ ಮಾನಸಿಕ ಸ್ಥಿತಿಗತಿ ಹೇಗಿದೆ ಎಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ. ಶಿಕ್ಷಣ ಸಚಿವರಾಗಿದ್ದಾಗ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗಿರಲಿಲ್ಲ. ಅಂತಹವರ ಹೇಳಿಕೆಗೆ ಪ್ರತಿಕ್ರಿಯೆ ನೀಡಬೇಕಾದ ಅಗತ್ಯತೆ ಇಲ್ಲ ಎಂದರು.

'ಬಿಜೆಪಿ ಯೋಗ್ಯತೆ ಗೊತ್ತಿದೆ'
ಸೊರಬ ಕ್ಷೇತ್ರದಲ್ಲಿ ಬಿಜೆಪಿ ಶಾಸಕರ ಭ್ರಷ್ಟಾಚಾರದ ಪಟ್ಟಿ ಬಿಡುಗಡೆ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಮಧುಬಂಗಾರಪ್ಪ, ಬಿಜೆಪಿ ಬಿಡುಗಡೆ ಮಾಡಿರುವ ಚಾರ್ಜ್ಶೀಟ್ಗೆ ಬೇಲ್ ತೆಗೆದುಕೊಳ್ಳಬೇಕಾದ, ಅದಕ್ಕೆ ಉತ್ತರಿಸಬೇಕಾದ ಅವಶ್ಯಕತೆ ಇಲ್ಲ. ಬಿಜೆಪಿಯವರ ಯೋಗ್ಯತೆ ಏನೆಂಬುದು ರಾಜ್ಯದ ಜನತೆಗೆ ತಿಳಿದಿದೆ. ಮಾಜಿ ಶಾಸಕರಾದ ಹೆಚ್.ಹಾಲಪ್ಪ, ಕುಮಾರ್ ಬಂಗಾರಪ್ಪ ಎಲ್ಲರ ಹಣೆಬರಹ ಗೊತ್ತಿದೆ. ಅವರ ಚಾರ್ಜ್ಶೀಟ್ಗೆ ಹೆದರುವುದಿಲ್ಲ ಎಂದು ಹೇಳಿದರು.












Click it and Unblock the Notifications